ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತೇನೆ, ಪಕ್ಷದಲ್ಲಿ ಆಗದಿದ್ದರೆ ಪಕ್ಷೇತರ ನಿಂತು ಗೆಲ್ತೇನೆ ; ಹಕೀಂ ಕೂರ್ನಡ್ಕ ಸವಾಲು

03-09-26 09:10 pm       HK News Staffer   ಕರಾವಳಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತಾನೇ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಮುಖಂಡ ಹಕೀಂ ಕೂರ್ನಡ್ಕ ಬಹಿರಂಗ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಟಿಕೆಟ್ ಕೇಳುವುದಾಗಿಯೂ, ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಮಂಗಳೂರು, ಸೆ.3 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತಾನೇ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಮುಖಂಡ ಹಕೀಂ ಕೂರ್ನಡ್ಕ ಬಹಿರಂಗ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಟಿಕೆಟ್ ಕೇಳುವುದಾಗಿಯೂ, ಪಕ್ಷ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಕ್ಷೇತ್ರದ ಶಾಸಕರ ಕಾರ್ಯವೈಖರಿ, ಕಾರ್ಯಕರ್ತರ ಕಡೆಗಣನೆ ಹಾಗೂ ತಮ್ಮ ಮೇಲೆ ನಡೆದಿರುವ ಬೆದರಿಕೆ-ದೌರ್ಜನ್ಯಗಳ ಕುರಿತು ವಾಗ್ದಾಳಿ ನಡೆಸಿದರು.

ನನಗೆ ಕೇವಲ ಒಂದು ಸಮುದಾಯದ ಮತಗಳಲ್ಲ, ಹಿಂದೂ ಬಾಂಧವರು, ನನ್ನ ಸಮುದಾಯದವರು ಹಾಗೂ ಕ್ರಿಶ್ಚಿಯನ್ ಸಮುದಾಯದವರು ಎಲ್ಲರೂ ಮತ ಹಾಕುತ್ತಾರೆ. ಪಕ್ಷಕ್ಕೆ ಹೊಸದಾಗಿ ಬಂದು, ಅಶೋಕ್ ರೈ ಶಾಸಕರಾಗಬಹುದಾದರೆ, ನಿಷ್ಠಾವಂತ ಕಾರ್ಯಕರ್ತನಾದ ನಾನು ಏಕೆ ಶಾಸಕನಾಗಬಾರದು? ಎಂದು ಅವರು ಪ್ರಶ್ನಿಸಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ, ಅವರ ಪರವಾಗಿ ನಿಂತು ಗೆಲ್ಲಿಸುತ್ತೇನೆ. ಆದರೆ ಸಂಘ ಪರಿವಾರ ಹಾಗೂ ಅಶೋಕ್ ರೈ ಅವರ ಬೆಂಬಲಿಗರಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರು ಬೆಂಬಲಿಸುವುದಿಲ್ಲ ಎಂದು ಹೇಳಿದರು. ತಾನು ಶಾಸಕನಾದ ನಂತರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ದೇವಸ್ಥಾನಗಳಿಗೆ ನೇಮಕಗೊಂಡಿದ್ದ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯನ್ನೇ ಮುಂದುವರಿಸಿದ್ದೇನೆ ಎಂದು ಅಶೋಕ್ ರೈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಸಮರ್ಥ ಹಿಂದೂ ಮುಖಂಡರು ಇರಲಿಲ್ಲವೇ? ಅಶೋಕ್ ರೈ ಅವರು ಕಾಂಗ್ರೆಸ್ ಶಾಸಕರೋ ಅಥವಾ ಬಿಜೆಪಿ ಶಾಸಕರೋ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ವಿರುದ್ಧ ಪೋಸ್ಟರ್‌ಗಳನ್ನು ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ ಹಕೀಂ, "ಶಾಸಕರ ಕಚೇರಿಗೆ ಕಾಲಿಟ್ಟರೆ ಕೈ ಕಾಲು ಕಡಿಯುತ್ತೇವೆ ಎಂದು ಬೆದರಿಸಲಾಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯಲ್ಲ, ರೌಡಿಗಳ ಸಂಸ್ಕೃತಿ" ಎಂದರು. ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಅವರು ಶಾಸಕರ ಪರವಾಗಿ ನಿಂತು, ತಮ್ಮ ವಿರುದ್ಧ ಮಾತನಾಡದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ ಅವರು, ಈ ಬಗ್ಗೆ ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡುವುದಾಗಿ ತಿಳಿಸಿದರು.

ತನ್ನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ನೀಡಿದ ದೂರಿನಲ್ಲಿ ಎ1 ಆರೋಪಿಯಾಗಿ ಅಶೋಕ್ ರೈ ಅವರ ಹೆಸರು ಪ್ರಸ್ತಾಪವಿದ್ದರೂ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಹಕೀಂ ಕೂರ್ನಡ್ಕ, ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.