ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ ಕುಟೀರ ಹಸ್ತಾಂತರ ; ಮೋದೀಜಿ ಹೆಸರಲ್ಲಿ ಸಂತೋಷ್ ರೈ ಸೇವಾ ಕಾರ್ಯ ರಾಷ್ಟ್ರಕ್ಕೆ ಮಾದರಿ ; ಕ್ಯಾ.ಬ್ರಿಜೇಶ್ ಚೌಟ

27-08-26 08:26 pm       HK News Staffer   ಕರಾವಳಿ

ದಿ ಮೈಸೂರು ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ.ನ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕ್ಯಾನ್ಸರ್ ಮಹಾಮಾರಿಯ ವಿರುದ್ಧ ನಡೆಸುತ್ತಿರುವ ಹೋರಾಟದ ಮಧ್ಯೆಯೂ ಉಳ್ಳಾಲ ತಾಲೂಕಿನ ಅಡ್ಕ ಶ್ರೀ ಭಗವತಿ ದೈವಸ್ಥಾನದ ದರ್ಶನ ಪಾತ್ರಿ ಶ್ರವಣ ಬೆಳ್ಚಪ್ಪಾಡರಿಗೆ ಅಡ್ಕದ ದೊಡ್ಡ ಮನೆ ಕಾಂಪೌಂಡ್‌ನಲ್ಲಿ ನಿರ್ಮಿಸಿದ ಏಳನೇ ನಮೋ ಕುಟೀರವನ್ನು ಗುರುವಾರ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಉಳ್ಳಾಲ, ಆ.27: ದಿ ಮೈಸೂರು ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ.ನ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕ್ಯಾನ್ಸರ್ ಮಹಾಮಾರಿಯ ವಿರುದ್ಧ ನಡೆಸುತ್ತಿರುವ ಹೋರಾಟದ ಮಧ್ಯೆಯೂ ಉಳ್ಳಾಲ ತಾಲೂಕಿನ ಅಡ್ಕ ಶ್ರೀ ಭಗವತಿ ದೈವಸ್ಥಾನದ ದರ್ಶನ ಪಾತ್ರಿ ಶ್ರವಣ ಬೆಳ್ಚಪ್ಪಾಡರಿಗೆ ಅಡ್ಕದ ದೊಡ್ಡ ಮನೆ ಕಾಂಪೌಂಡ್‌ನಲ್ಲಿ ನಿರ್ಮಿಸಿದ ಏಳನೇ ನಮೋ ಕುಟೀರವನ್ನು ಗುರುವಾರ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಗೃಹಪ್ರವೇಶ ಕಾರ್ಯಕ್ರಮದಲ್ಲಿ ಫಲಾನುಭವಿ ಕುಟುಂಬಕ್ಕೆ ನೂತನ ಮನೆಯ ಕೀಲಿ ಕೈ ಹಸ್ತಾಂತರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ತನ್ನನ್ನು ಜನರ ಪ್ರಧಾನ ಸೇವಕರೆನ್ನುವ ದೇಶ ಕಂಡ ಅಪರೂಪದ ಪ್ರದಾನಿ ನರೇಂದ್ರ ಮೋದಿಜಿಯವರನ್ನ ಪ್ರೇರಣೆಯಾಗಿಟ್ಟುಕೊಂಡು ಅಶಕ್ತ ವರ್ಗದವರಿಗೆ ನಮೋ ಕುಟೀರದ ಹೆಸರಲ್ಲಿ ಮನೆಗಳನ್ನ ಕಟ್ಟಿಸಿ ಕೊಡುತ್ತಿರುವ ಸಂತೋಷ್ ಬೋಳಿಯಾರ್ ಅವರ ಸೇವಾ ಕಾರ್ಯವು ಜಿಲ್ಲೆ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿಯಾಗಿದೆ. ನಿರಂತರ ಸೇವಾ ಕಾರ್ಯದ ಮೂಲಕವೇ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸಿರುವ ಅವರಿಗೆ ಭಗವಂತನು‌ ಉತ್ತಮ ಆರೋಗ್ಯ ಕರುಣಿಸಲಿಯೆಂದು ಆಶಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್ ಮಾತನಾಡಿ ಸಂತೋಷ್ ಬೋಳಿಯಾರ್ ಅವರು ರಾಜಕೀಯ ರಂಗದಲ್ಲಿದ್ದರೂ ಸಹ ಅಧಿಕಾರಕ್ಕೆ ಆಸೆ ಪಡದೆ ತನ್ನನ್ನ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ಅನಾರೋಗ್ಯದಲ್ಲೂ ಅವರ ಧ್ವನಿಯಲ್ಲಿ ಇಂದಿಗೂ ನಿರಾಸೆ ಎಂಬುದೇ ಕಾಣುತ್ತಿಲ್ಲ. ಈಗಲೂ ಅವರ ಸಂಕಲ್ಪ ಶಕ್ತಿ ಸಧೃಡವಾಗಿದೆ. ಸಮಾಜಕ್ಕೆ ಮತ್ತಷ್ಟು ಸೇವೆ ನೀಡುವ ಉದ್ಧೇಶದಿಂದ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿ ಬರುವ ಇಂಗಿತ ಅವರದ್ದಾಗಿದೆ. ಅವರ ಪ್ರೇರಣೆಯಿಂದಲೇ ಇದೀಗ ಅನೇಕ ಮಂದಿ ಸಹೃದಯಿಗಳು ಸಮಾಜದ ಅಶಕ್ತರಿಗೆ ಮನೆಗಳನ್ನ ಕಟ್ಟಿಕೊಡಲು ಮುಂದೆ ಬರುತ್ತಿರುವುದು ಶ್ಲಾಘನೀಯವೆಂದರು.

ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ ಪ್ರಧಾನಿ ಮೋದಿಜಿ ಅವರಲ್ಲಿ ನಾನು ಹತ್ತಿರದಿಂದ ಮಾತನಾಡಿದ್ದೇನೆ. ಅವರಲ್ಲಿರುವ ದೇವತಾ ಶಕ್ತಿಯನ್ನು ನಾನು ಗ್ರಹಿಸಿದ್ದೇನೆ. ಅವರ ಹೆಸರಲ್ಲೇ ಅಶಕ್ತ ವರ್ಗದವರಿಗೆ ಹತ್ತು ಮನೆಗಳನ್ನ ನಿರ್ಮಿಸುವ ಯೋಜನೆ ಹಾಕಿದ್ದು, ಇದೀಗ ಏಳು ಮನೆಗಳ ನಿರ್ಮಾಣ ಕಾರ್ಯ ಸಾಕಾರಗೊಂಡಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಯಿಲೆಯಿಂದ ತೊಂಭತ್ತು ಶೇಕಡದಷ್ಟು ಗುಣಮುಖನಾಗಿದ್ದೇನೆ ಎಂದು ಹೇಳಿದರು.

ಮಾಡೂರು ಮರಿಯಣ್ಣಪಾಲು ಶಿವದುರ್ಗಾಂಭ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಹಿರಿಯ ಬಿಜೆಪಿ ಮುಖಂಡ ಸೀತಾರಾಮ ಬಂಗೇರ, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ‌ ರಾಜಾರಾಮ್ ಭಟ್, ಸಂತೋಷ್ ಬೋಳಿಯಾರ್ ಅವರ ಪತ್ನಿ ವೀಣಾ ಎಸ್.ರೈ, ಪುತ್ರ ಸಮ್ಯಕ್ತ್ ರೈ, ಪುತ್ರಿ ಸ್ಪರ್ಶ ಎಸ್.ರೈ ಮೊದಲಾದವರು ಉಪಸ್ಥಿತರಿದ್ದರು.