ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮುಸ್ಲಿಂ ರಾಜಕೀಯ ಮಾಡುತ್ತಿಲ್ಲ, ಗಲಾಟೆಗೂ ನಮಗೂ ಸಂಬಂಧವೇ ಇಲ್ಲ, ಗಲಾಟೆ ಮಾಡಿದ್ದು ಯಾರೆಂದು ಗೊತ್ತೂ ಇಲ್ಲ- ಮುಸ್ಲಿಂ ಮಹಿಳೆ ಹೇಳಿಕೆ

27-08-26 07:23 pm       HK News Staffer   ಕ್ರೈಂ

ಪುತ್ತೂರಿನ ದರ್ಬೆಯಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಕೊಟ್ಟಿದ್ದ ದಾಖಲೆ ಸುಟ್ಟು ಹೋಯ್ತು ಅನ್ನುವ ನೆಪದಲ್ಲಿ ಹಿಂದು- ಮುಸ್ಲಿಂ ಘರ್ಷಣೆಯಾಗಿದ್ದು, ಆನಂತರ ಹಿಂದು ಸಂಘಟನೆಗಳು ಹೋರಾಟ ಕೈಗೆತ್ತಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. .

ಮಂಗಳೂರು, ಆ.27: ಪುತ್ತೂರಿನ ದರ್ಬೆಯಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಕೊಟ್ಟಿದ್ದ ದಾಖಲೆ ಸುಟ್ಟು ಹೋಯ್ತು ಅನ್ನುವ ನೆಪದಲ್ಲಿ ಹಿಂದು- ಮುಸ್ಲಿಂ ಘರ್ಷಣೆಯಾಗಿದ್ದು, ಆನಂತರ ಹಿಂದು ಸಂಘಟನೆಗಳು ಹೋರಾಟ ಕೈಗೆತ್ತಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ನಡುವಲ್ಲೇ ಅದರಲ್ಲಿ ದೂರುದಾರೆಯಾಗಿದ್ದ ಮುಸ್ಲಿಂ ಮಹಿಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ನಮಗೂ ಆ ಗಲಾಟೆಗೂ ಸಂಬಂಧವೇ ಇಲ್ಲ. ನಾವು ಹೋದ ಬಳಿಕ ಯಾರು ಗಲಾಟೆ ಮಾಡಿದ್ದಾರೆ ಅಂತ ಗೊತ್ತೂ ಇಲ್ಲ. ನಾವು ಇದರಲ್ಲಿ ರಾಜಕೀಯ, ಹಿಂದು- ಮುಸ್ಲಿಂ ಗಲಾಟೆ ಮಾಡುವುದಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ.

ನಾವು ಮಗುವಿನ ಜನನ ಪ್ರಮಾಣಪತ್ರವನ್ನು ಜೆರಾಕ್ಸ್ ಮಾಡಿಸಲು ಕೊಟ್ಟಿದ್ದೆವು. ಅಲ್ಲಿನ ಸಿಬಂದಿ ಜೆರಾಕ್ಸ್ ಮಾಡುತ್ತಿದ್ದಾಗಲೇ ಅದು ಒಳಗೆ ಸಿಕ್ಕಿಹಾಕಿಕೊಂಡಿತ್ತು. ಹೊರ ತೆಗೆಯಲು ಸಾಧ್ಯವಾಗದೇ ಇದ್ದಾಗ ಅದರ ಮಾಲಕಿಯನ್ನು ಕರೆಸಿದ್ದು, ಅವರಲ್ಲಿ ನಾವು ಹೊಸತು ಮಾಡಿಕೊಡುವಂತೆ ಕೇಳಿಕೊಂಡೆವು. ಅದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು. ನಮಗೆ ಅರ್ಜೆಂಟ್ ಇದ್ದುದರಿಂದ ಬೇರೆಯವರಲ್ಲಿ ಕೇಳಿದಾಗ, 300 ರೂಪಾಯಿ ಆಗುತ್ತೆ ಅಂದಿದ್ದಕ್ಕೆ ಅದರ ಶುಲ್ಕವನ್ನು ಕೊಡುವಂತೆ ಅಂಗಡಿಯವರಲ್ಲಿ ಕೇಳಿದೆವು. ಅಂಗಡಿಯ ಮಾಲಕಿ ಅದಕ್ಕೂ ಒಪ್ಪಲಿಲ್ಲ

ಈ ವೇಳೆ, ನೀವು ಸುಟ್ಟು ಹಾಕಿದ್ದಲ್ವಾ.. ನೀವೇ ಮಾಡಿಸಿಕೊಡಬೇಕು ಎಂದು ವಾದಿಸಿದ್ದಕ್ಕೆ, ನಾವು ಮಾಡಿಕೊಡುವುದಿಲ್ಲ. ಏನು ಬೇಕಾದ್ರೂ ಮಾಡಿ ಎಂದು ಅಂಗಡಿಯ ಮಾಲಕಿ ಹೇಳಿದರು. ಈ ವೇಳೆ, ನನ್ನ ಅಣ್ಣ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಕ್ಕೆ ಅಂಗಡಿಯ ಮಾಲಕಿಯ ಪುತ್ರ ಸುದರ್ಶನ್ ಪೈ ಅವನ ಮೇಲೆ ಹಲ್ಲೆ ಮಾಡಿದ್ದಾನೆ. ಬಿಡಿಸಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದ್ದಾನೆ. ಆನಂತರ ನಾವು ಅಲ್ಲಿಂದ ಕಾರಿನಲ್ಲಿ ಹೋಗಿದ್ದೇವೆ. ಆಬಳಿಕ ಯಾರು ಬಂದಿದ್ದಾರೆ, ಯಾರು ಗಲಾಟೆ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ.

ನಾವು ಸುಳ್ಯದವರಾಗಿದ್ದು ಅಲ್ಲಿ ಯಾರು ಕೂಡ ಪರಿಚಯದವರು ಇಲ್ಲ. ಅಂಗಡಿಯವರೂ ಪರಿಚಯದವರಲ್ಲ. ನಮಗೆ ಹಿಂದು- ಮುಸ್ಲಿಂ ಅಂತ ರಾಜಕೀಯ ಮಾಡುವುದಕ್ಕೆ ಆಸಕ್ತಿಯೂ ಇಲ್ಲ. ಸಮಯವೂ ಇಲ್ಲ. ನಮಗೆ ಕೇಸು ಮುಂದುವರಿಸುವುದಕ್ಕೂ ಆಸಕ್ತಿ ಇಲ್ಲ. ನನ್ನ ಅಣ್ಣ ಆಸ್ಪತ್ರೆಗೆ ದಾಖಲಾಗಿ 15 ಸಾವಿರ ಖರ್ಚು ಆಗಿದೆ, ಅದನ್ನು ಕೊಟ್ಟರೆ ನಾವು ಕೇಸು ಹಿಂಪಡೆಯುವುದಕ್ಕೆ ರೆಡಿ ಇದ್ದೇವೆ. ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ, ಅವನು ಮಾಡಿದ್ದಕ್ಕೆ ತಕ್ಕ ಸಾಕ್ಷಿಯಾಗಿದೆ. ಮಹಿಳೆ ಮೇಲೆ ಕೈಮಾಡಲು ಧೈರ್ಯ ಮಾಡಿದ್ದಕ್ಕೆ ಪೊಲೀಸರು ಉತ್ತರ ಕೊಟ್ಟಿದ್ದಾರೆ ಎಂದು ದೂರುದಾರ ಮಹಿಳೆ ಮುಬಾಶಿರಾ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.