ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ ಕುಟುಂಬದ 6 ಮಂದಿ ಭೂತನಾಳ ಕೆರೆಯಲ್ಲಿ ಶವವಾಗಿ ಪತ್ತೆ, ಪತಿಯೊಂದಿಗೆ ಜಗಳವಾಡಿ ದುಡಿಕಿನ ನಿರ್ಧಾರ ಕೈಗೊಂಡ ತಾಯಿ

26-08-26 11:23 am       HK News Staffer   ಕ್ರೈಂ

ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳು ಸೇರಿದಂತೆ 6 ಮಂದಿಯ ಮೃತದೇಹಗಳು ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ಭಾರೀ ಆತಂಕ ಹಾಗೂ ದಿಗ್ಭ್ರಮೆ ಮೂಡಿಸಿದೆ.

ವಿಜಯಪುರ , ಆಗಸ್ಟ್ 26: ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳು ಸೇರಿದಂತೆ 6 ಮಂದಿಯ ಮೃತದೇಹಗಳು ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ಭಾರೀ ಆತಂಕ ಹಾಗೂ ದಿಗ್ಭ್ರಮೆ ಮೂಡಿಸಿದೆ.

ಕೆರೆಯಲ್ಲಿ ಪತ್ತೆಯಾದ ಮೃತದೇಹಗಳಲ್ಲಿ ತಾಯಿ, ಮೂವರು ಯುವತಿಯರು,ಹಾಗೂ ಇಬ್ಬರು ಬಾಲಕರು ಇದ್ದಾರೆ. ಮೃತರನ್ನು ವಿಜಯಪುರ ತಾಲೂಕಿನ ತೊರವಿ ಗ್ರಾಮದ ನಿವಾಸಿಗಳಾದ ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ.

ಈ ಆರು ಮಂದಿ ಆ.24ರಂದು ನಾಪತ್ತೆಯಾಗಿದ್ದು, ಇದೀಗ ಭೂತನಾಳ ಕೆರೆಯಲ್ಲಿ ಮೃತದೇಹಗಳಾಗಿ ಪತ್ತೆಯಾಗಿದ್ದಾರೆ. ಕುಟುಂಬದಲ್ಲಿ ಉಂಟಾಗಿದ್ದ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶೋಭಾ ಅವರು ಪತಿ ಮಲಕಾರಿ ಭೀಮರಾಯ ಅವರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದಿದ್ದರು ಎನ್ನಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.

ಕೆರೆಯ ಅಂಚಿನಲ್ಲಿ ಮೃತದೇಹಗಳು ತೇಲಿ ಬಂದಿರುವುದನ್ನು ಗಮನಿಸಿದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟವಾಗಬೇಕಿದೆ. ಘಟನೆ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.