ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾರ ! ಬಾಲಕನ ವಿಚಿತ್ರ ರೋಗದ ವಿಡಿಯೋ ನೋಡಿ ಸಹಾಯಕ್ಕೆ ಬಂದ ಅನಂತ್ ಅಂಬಾನಿ, ಕೊಲ್ಕತ್ತಾದಿಂದ ಮುಂಬೈಗೆ ಏರ್ ಲಿಫ್ಟ್

20-08-26 10:55 am       HK News Staffer   ದೇಶ - ವಿದೇಶ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಇಕ್ಬಾಲ್ ಶೇಖ್ ಎಂಬ ಬಾಲಕ ದೇಹದಲ್ಲಿ ಉರಿ ಬರುವ ವಿಚಿತ್ರ ರೋಗದಿಂದ ಬಳಲುತ್ತಿದ್ದು, ಇಡೀ ದಿನ ಕೆರೆಯ ನೀರಿನಲ್ಲೇ ಮುಳುಗಿಯೇ ಕಾಲ ಕಳೆಯಬೇಕಾದ ಸ್ಥಿತಿಯಲ್ಲಿದ್ದಾನೆ. ವಿಚಿತ್ರ ರೋಗದಿಂದ ಪಾರು ಮಾಡಲು ಬಾಲಕನ ಹೆತ್ತವರು ಸಹಾಯ ಯಾಚಿಸಿ ವಿಡಿಯೋ ಮಾಡಿದ್ದು ಇದನ್ನು ಗಮನಿಸಿದ ಉದ್ಯಮಿ ಅನಂತ್ ಅಂಬಾನಿ ನೆರವಿಗೆ ಬಂದಿದ್ದಲ್ಲದೆ, ತುರ್ತು ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್ ಮಾಡಿಸಿದ್ದಾರೆ.

ಕೊಲ್ಕತ್ತಾ, ಆ. 20: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ಇಕ್ಬಾಲ್ ಶೇಖ್ ಎಂಬ ಬಾಲಕ ದೇಹದಲ್ಲಿ ಉರಿ ಬರುವ ವಿಚಿತ್ರ ರೋಗದಿಂದ ಬಳಲುತ್ತಿದ್ದು, ಇಡೀ ದಿನ ಕೆರೆಯ ನೀರಿನಲ್ಲೇ ಮುಳುಗಿಯೇ ಕಾಲ ಕಳೆಯಬೇಕಾದ ಸ್ಥಿತಿಯಲ್ಲಿದ್ದಾನೆ. ವಿಚಿತ್ರ ರೋಗದಿಂದ ಪಾರು ಮಾಡಲು ಬಾಲಕನ ಹೆತ್ತವರು ಸಹಾಯ ಯಾಚಿಸಿ ವಿಡಿಯೋ ಮಾಡಿದ್ದು ಇದನ್ನು ಗಮನಿಸಿದ ಉದ್ಯಮಿ ಅನಂತ್ ಅಂಬಾನಿ ನೆರವಿಗೆ ಬಂದಿದ್ದಲ್ಲದೆ, ತುರ್ತು ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್ ಮಾಡಿಸಿದ್ದಾರೆ.

ಇಕ್ಬಾಲ್‌ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿ ಮಾಡಿದ್ದ ಮನವಿಯನ್ನು ಗಮನಿಸಿದ್ದ ಅನಂತ್ ಅಂಬಾನಿ, ಚಿಕಿತ್ಸೆಗಾಗಿ ಮುಂಬೈನ ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ದೇಹದಾದ್ಯಂತ ಉರಿ ಕಾಣಿಸಿಕೊಳ್ಳುವ ವಿಚಿತ್ರ ಆರೋಗ್ಯ ಸಮಸ್ಯೆಗೆ ಕಾರಣವೇನು ಎಂದು ತಿಳಿಯಲು ಮುಂದಾಗಿದ್ದಾರೆ. ಕುಟುಂಬಸ್ಥರು, ಆತನಿಗೆ ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಹಲವು ಬಾರಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಸುಧಾರಣೆ ಕಂಡುಬಂದಿರಲಿಲ್ಲ. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಕುಟುಂಬವು ಸಾರ್ವಜನಿಕರಿಂದ ಸಹಾಯ ಕೋರಿತ್ತು. 

ನೀರಿನಲ್ಲೇ ವಾಸ ; ಕೆರೆಯಲ್ಲೇ ಉಪಾಹಾರ ! 

ಬಾಲಕನ ವಿಚಿತ್ರ ಸ್ಥಿತಿ ಎಷ್ಟು ಬಿಗಡಾಯಿಸಿತು ಎಂದರೆ ಕೆರೆಯ ನೀರಿನಲ್ಲೇ ಕುಳಿತು ಆಹಾರ ಸೇವಿಸುವ ಸ್ಥಿತಿಯ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋದಲ್ಲಿ ಬಾಲಕ ಕೆರೆಯ ನೀರಿನಲ್ಲಿ ಕುಳಿತುಕೊಂಡೇ ಉಪಾಹಾರ ಸೇವಿಸುತ್ತಿರುವುದು ಕಂಡುಬಂದಿತ್ತು, ಇಕ್ಬಾಲ್ ನೀರಿನಿಂದ ಹೊರಬಂದ ತಕ್ಷಣ ದೇಹದಾದ್ಯಂತ ತೀವ್ರ ಸುಡುವ ಅನುಭವವಾಗುತ್ತದೆ ಎಂದು ಹೇಳುತ್ತಿದ್ದ. ಹೀಗಾಗಿ ಗಂಟೆಗಟ್ಟಲೆ ಕೆರೆಯಲ್ಲೇ ಮುಳುಗಿ ಇರುತ್ತಿದ್ದ. ಕೆಲವೊಮ್ಮೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ತೆರಳಿ ಅಲ್ಲಿಯೇ ಸಮಯ ಕಳೆಯುತ್ತಿದ್ದ. ಇಕ್ಬಾಲ್ ತನ್ನ ಮೇಲೆ ಯಾವುದೋ ಅತೀಂದ್ರಿಯ ಶಕ್ತಿ ಆವರಿಸಿಕೊಂಡಿರುವಂತೆ ಭಾಸವಾಗುತ್ತದೆ ಎಂದೂ ಹೇಳಿಕೊಂಡಿದ್ದಾನೆ. 

ಬೆಳಗ್ಗೆಯಿಂದ ತಡರಾತ್ರಿ ವರೆಗೂ ಕೆರೆಗಳಲ್ಲಿ ಈಜುತ್ತಾ ಅಥವಾ ನೀರಿನಲ್ಲಿ ಕುಳಿತೇ ಕಾಲ ಕಳೆಯುತ್ತಾನೆ. ಆದರೆ ಗಂಟೆಗಟ್ಟಲೆ ನೀರಿನಲ್ಲಿ ಮುಳುಗಿರುವುದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಚರ್ಮ ಮೃದುವಾಗಿ ಬಿಳಿಯಾಗಬಹುದು. ಚರ್ಮದ ನೈಸರ್ಗಿಕ ರಕ್ಷಣಾ ಪದರ ದುರ್ಬಲವಾಗಿ, ಸೋಂಕು ಉಂಟಾಗುವ ಸಾಧ್ಯತೆ ಇದೆ ಎಂದು ವೈದರು ಹೇಳಿದ್ದಾರೆ.