ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ; ಅಡುಗೆ ಕೋಣೆಯಲ್ಲಿ ಜಿರಳೆಗಾಗಿ ಹುಡುಕಾಟ! ರಜಾ ದಿನದಂದು ಒಬ್ಬಂಟಿ ದಾಳಿ ಬಗ್ಗೆಯೇ ಅನುಮಾನ

25-08-26 09:37 pm       HK News Staffer   ಕರಾವಳಿ

ಸಾಂಬಾರಿನಲ್ಲಿ ಜಿರಳೆ ಇದೆಯೆಂದು ದೂರು ನೀಡಿದ್ದಾರೆಂಬ ನೆಪದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸರ್ಕಾರಿ ರಜಾ ದಿನದಂದೇ ತೊಕ್ಕೊಟ್ಟಿನ ವೃಂದಾವನ ಹೊಟೇಲಿಗೆ ದಾಳಿ ನಡೆಸಿದ್ದಾರೆ. ಅಡುಗೆ ಕೋಣೆಯಲ್ಲಿ ತಪಾಸಣೆ ನಡೆಸಿದ್ದು, ಅಲ್ಲಿ ಜಿರಳೆ ಹರಿದಾಡುತ್ತಿದೆಯೆಂದು ಹೇಳಿ ಶುಚಿತ್ವ ಕಾಪಾಡದ ಹೊಟೇಲ್ ಮಾಲಕರಿಗೆ ನೋಟೀಸು ನೀಡಿ, ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿ ನಿರ್ಗಮಿಸಿದ್ದಾರೆ.

ಉಳ್ಳಾಲ, ಆ.25: ಸಾಂಬಾರಿನಲ್ಲಿ ಜಿರಳೆ ಇದೆಯೆಂದು ದೂರು ನೀಡಿದ್ದಾರೆಂಬ ನೆಪದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸರ್ಕಾರಿ ರಜಾ ದಿನದಂದೇ ತೊಕ್ಕೊಟ್ಟಿನ ವೃಂದಾವನ ಹೊಟೇಲಿಗೆ ದಾಳಿ ನಡೆಸಿದ್ದಾರೆ. ಅಡುಗೆ ಕೋಣೆಯಲ್ಲಿ ತಪಾಸಣೆ ನಡೆಸಿದ್ದು, ಅಲ್ಲಿ ಜಿರಳೆ ಹರಿದಾಡುತ್ತಿದೆಯೆಂದು ಹೇಳಿ ಶುಚಿತ್ವ ಕಾಪಾಡದ ಹೊಟೇಲ್ ಮಾಲಕರಿಗೆ ನೋಟೀಸು ನೀಡಿ, ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿ ನಿರ್ಗಮಿಸಿದ್ದಾರೆ. 

ಇತ್ತೀಚೆಗೆ ಮಂಗಳೂರಿನ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಹಾಗೂ ಕೆಲವು ಪ್ರಮುಖ ರೆಸ್ಟೋರೆಂಟ್‌ಗಳ ಮೇಲೆ ಡಾ.ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಈದ್ ಮಿಲಾದ್ ರಜಾ ದಿನವೂ ಡಾ.ಪ್ರವೀಣ್ ಕುಮಾರ್ ಆಹಾರ ಇಲಾಖೆಯ ಕಾರು ಚಾಲಕನೊಂದಿಗೆ ಒಬ್ಬಂಟಿಯಾಗಿ ತೊಕ್ಕೊಟ್ಟಿನ ವೃಂದಾವನ ಹೊಟೇಲ್ ಮೇಲೆ ದಾಳಿ ನಾಟಕ ಮಾಡಿದ್ದು ತಪಾಸಣೆ ನಡೆಸಿದ್ದಾರೆ. 

ಮಧ್ಯಾಹ್ನ 1.30 ಗಂಟೆಗೆ ಪ್ರವೀಣ್ ಅವರು ತನ್ನ ಇಲಾಖೆಯ ಕಾರು ಚಾಲಕ ಲೋಕೇಶ್ ಅವರೊಂದಿಗೆ ಹೊಟೇಲ್ ಗೆ ಬಂದಿದ್ದು, ಶಟರ್ ಹಾಕಿ ತಪಾಸಣೆ ಕೈಗೊಂಡಿದ್ದಾರೆ.
ಸಾಂಬಾರಿನಲ್ಲಿ ಜಿರಳೆ ಇರುವ ದೂರಿಗೆ ಜಿಲ್ಲಾ ಮಟ್ಟದ ಅಧಿಕಾರಿಯೇ ಶೋಧ ಕಾರ್ಯಕ್ಕೆ ಬಂದಿರುವುದು ಸ್ಥಳೀಯರನ್ನ ಬೆರಗುಗೊಳಿಸಿದೆ. ಒಬ್ಬರೇ ಅಧಿಕಾರಿ ಹೊಟೇಲಿನ ಶಟರ್ ಎಳೆದು ಜಿರಳೆಗಾಗಿ ಶೋಧ ನಡೆಸಿದ್ದು ಸ್ಥಳೀಯರಿಗೆ ಅನುಮಾನ ಮೂಡಿಸಿದೆ. ಹೀಗಾಗಿ ಸ್ಥಳೀಯ ವ್ಯಾಪಾರಿಗಳು ಹೆಡ್ ಲೈನ್ ಕರ್ನಾಟಕ ಮಾಧ್ಯಮ ಪ್ರತಿನಿಧಿಯನ್ನ ಸ್ಥಳಕ್ಕೆ ಕರೆಸಿದ್ದಾರೆ. ಮಾಧ್ಯಮ ಪ್ರತಿನಿಧಿಯನ್ನ ಕಂಡ ಆಹಾರ ಸುರಕ್ಷತಾ ಅಧಿಕಾರಿಗಳು ತರಕಾರಿ ಹಾಗೂ ಡಬ್ಬದ ಮೇಲಿದ್ದ ಒಂದೆರಡು ಜಿರಳೆ ಮರಿಗಳನ್ನ ತೋರಿಸಿ ಭಾರೀ ದೊಡ್ಡ ಕಾರ್ಯಾಚರಣೆ ನಡೆಸಿರುವ ರೀತಿ ಬಿಂಬಿಸಿದ್ದಾರೆ. ಬಳಿಕ ಹೊಟೇಲ್ ಮಾಲಕ ಬಂದ ತಕ್ಷಣವೇ ಅವರಲ್ಲಿ ಮೊಬೈಲ್ ನಂಬರ್ ಇಸ್ಕೊಂಡು ಕಾರ್ಯಾಚರಣೆ ನಿಲ್ಲಿಸಿ ತೆರಳಿದ್ದಾರೆ.

 

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ.ಪ್ರವೀಣ್ ಕುಮಾರ್, ಗ್ರಾಹಕನೋರ್ವ ಸಾಂಬಾರಿನಲ್ಲಿ ಜಿರಳೆಯಿದೆಯೆಂದು ದೂರು ನೀಡಿರುವ ನಿಟ್ಟಿನಲ್ಲಿ ದಾಳಿಯನ್ನ ನಡೆಸಲಾಗಿದೆ. ಹೊಟೇಲಿನ ಅಡುಗೆ ಕೋಣೆಯಲ್ಲಿ ಆಹಾರ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಯಿಲ್ಲದೆ, ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನ ರಾಶಿ ಹಾಕಲಾಗಿತ್ತು. ಎಲ್ಲಾ ಆಹಾರ ಪದಾರ್ಥಗಳನ್ನ ತೆರವುಗೊಳಿಸಿ ಅಡುಗೆ ಕೋಣೆಯನ್ನ ತೊಳೆಸಿ ಶುಚಿಗೊಳಿಸಲಾಗಿದೆ. ಆಹಾರ ಪದಾರ್ಥಗಳನ್ನ ಪ್ರತ್ಯೇಕವಾಗಿ ಜೋಡಿಸಿಡಲು‌ ಹೊಟೇಲು ಮಾಲಕರಿಗೆ ಸೂಚನೆ ನೀಡಲಾಗಿದೆ. ಶುಚಿತ್ವ ಕಾಪಾಡದ ನಿಟ್ಟಿನಲ್ಲಿ ಹೊಟೇಲು ಮಾಲಕರಿಗೆ ನೋಟೀಸು ನೀಡಿ, ಎಡಿಸಿ (ಅಪರ ಜಿಲ್ಲಾಧಿಕಾರಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸೋದಾಗಿ ತಿಳಿಸಿದ್ದಾರೆ.

ತೊಕ್ಕೊಟ್ಟಿನಲ್ಲಿ ಯಾವುದೇ ಉಪಹಾರ ಅಥವಾ ಊಟದ ಹೊಟೇಲ್ ಗಳಿಗೆ ದಾಳಿ ನಡೆಸಿದರೂ ಶುಚಿತ್ವವಿಲ್ಲದ ದೃಶ್ಯಗಳು ಕಾಣಸಿಗುವುದು ಸಾಮಾನ್ಯ. ಅಧಿಕಾರಿಗಳು ಆಗಿಂದಾಗ್ಗೆ ಹೊಟೇಲ್, ಆಹಾರ ಮಾರಾಟ ಕೇಂದ್ರಗಳಿಗೆ ದಾಳಿ ಮಾಡಿ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರೆ ಇಂತಹ ಪ್ರಹಸನದ ಅಗತ್ಯ ಬೀಳದು.