ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ? ಸರ್ಕಾರಕ್ಕೆ ರೈತರಿಗಿಂತ ಪ್ರಚಾರವೇ ಮುಖ್ಯವೇ? ಎಎಪಿ ಪ್ರಶ್ನೆ

10-09-26 05:10 pm       HK News Staffer   ಕರ್ನಾಟಕ

ರಾಜ್ಯದ ಭಾಗಶಃ ಎಲ್ಲಾ ಭಾಗಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳ ಹೆಸರಿನಲ್ಲಿ ವೈಭವೀಕರಣ ಮತ್ತು ಪ್ರಚಾರಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಟೀಕಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 10: ರಾಜ್ಯದ  ಭಾಗಶಃ ಎಲ್ಲಾ ಭಾಗಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳ ಹೆಸರಿನಲ್ಲಿ ವೈಭವೀಕರಣ ಮತ್ತು ಪ್ರಚಾರಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಟೀಕಿಸಿದ್ದಾರೆ.

ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತ ಘೋಷಿಸಲು ಒತ್ತಾಯಿಸಿ ಶಾಸಕರೇ ಧರಣಿ, ಸತ್ಯಾಗ್ರಹ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಿ ರಾಜ್ಯಕ್ಕೆ ಬರ ಪರಿಹಾರ ಮತ್ತು ಅಗತ್ಯ ನೆರವು ತರುವ ರಾಜಕೀಯ ಇಚ್ಛಾಶಕ್ತಿ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಟ್ರ್ಯಾಕ್ಟರ್‌ಗಳನ್ನು ಕಳುಹಿಸಿ ರೈತರ ಜಮೀನುಗಳನ್ನು ಉಳುಮೆ ಮಾಡಿಸುತ್ತೇವೆ” ಎಂಬ ಆಕರ್ಷಕ ಘೋಷಣೆಗಳಿಂದ ರೈತರ ಬದುಕು ಉದ್ಧಾರವಾಗುವುದಿಲ್ಲ. ರೈತರ ಕೈಗೆ ತಕ್ಷಣದ ಪರಿಹಾರ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿಗೆ ಅಗತ್ಯ ನೆರವು ತಲುಪಬೇಕು. ಇದಕ್ಕಾಗಿ ಸರ್ವಪಕ್ಷಗಳ ಸಭೆ ಕರೆದು ಕೇಂದ್ರದ ಮುಂದೆ ಒಗ್ಗಟ್ಟಿನ ಹಕ್ಕೊತ್ತಾಯ ಮಂಡಿಸುವ ಕೆಲಸವನ್ನು ಸರ್ಕಾರ ಮೊದಲು ಮಾಡಲಿ ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.

ಒಂದೆಡೆ ವಾಲ್ಮೀಕಿ ನಿಗಮದ ಹಗರಣದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿದಿನ ಪಾದಯಾತ್ರೆ ನಡೆಸಿ ರಾಜಕೀಯ ವೈಭವೀಕರಣದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ “ನಾನೇನು ಕಮ್ಮಿ ಇಲ್ಲ” ಎಂಬಂತೆ ವೈಭವೀಕರಣದ ರಾಜಕಾರಣದಲ್ಲಿ ತೊಡಗಿದ್ದಾರೆ. ಜನರ ಸಂಕಷ್ಟಕ್ಕೆ ಪರಿಹಾರ ನೀಡುವ ಬದಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರಚಾರದ ರಾಜಕಾರಣಕ್ಕೆ ಆದ್ಯತೆ ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಕಾವೇರಿ ಕೊಳ್ಳದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೆರೆ-ಕಟ್ಟೆಗಳು ಬರಿದಾಗುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿಯೂ ಸರ್ಕಾರ ರೈತರ ಹಿತಾಸಕ್ತಿಯನ್ನು ಸ್ಪಷ್ಟವಾಗಿ ರಕ್ಷಿಸಬೇಕು. ಇದೇ ವೇಳೆ ರಿಯಲ್ ಎಸ್ಟೇಟ್ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಅನಗತ್ಯ ಯೋಜನೆಗಳು ಮತ್ತು ಗೊಂದಲಗಳನ್ನು ಸೃಷ್ಟಿಸುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇವಲ ನೆಪಕ್ಕಾಗಿ ಕೂಲಿ ಕಾರ್ಮಿಕರ ಬಳಿಗೆ ತೆರಳಿ ಟೀ ಕುಡಿಯುವುದರಿಂದ ಜನಪರ ಸರ್ಕಾರವಾಗಲು ಸಾಧ್ಯವಿಲ್ಲ. ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರಕ್ಕೆ ಕಡಿವಾಣ ಮತ್ತು ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವೇ ನಿಜವಾದ ಜನಸೇವೆ.
ಮುಂದಿರುವ ಎರಡು ವರ್ಷಗಳನ್ನು ವೈಭವೀಕರಣಕ್ಕೆ ಬಳಸುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಮುಂಬರುವ ಜನತಾ ನ್ಯಾಯಾಲಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದ್ದಾರೆ.