ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಪೂಜಾರಿ ; ಉಡುಪಿಗೆ ಕಿಶನ್ ಹೆಗ್ಡೆ ಪಕ್ಷದ ಸಾರಥ್ಯ, ಕರಾವಳಿಯಲ್ಲಿ ಬಂಟ- ಬಿಲ್ಲವ ಸಂಯೋಜನೆ

10-09-26 10:27 am       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಆಯ್ಕೆಗೊಳಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಮಾಡಿದೆ. ಇದೇ ವೇಳೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಆಯ್ಕೆಗೊಳಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಮಾಡಿದೆ. ಇದೇ ವೇಳೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರನ್ನು ಆಯ್ಕೆ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮಿಥುನ್ ರೈ, ಐವಾನ್ ಡಿಸೋಜ, ಪದ್ಮರಾಜ್, ಎಂ.ಜಿ ಹೆಗಡೆ ಹೆಸರು ಮುಂಚೂಣಿಯಲ್ಲಿ ಬಂದಿತ್ತು. ಎರಡು ವಾರದ ಹಿಂದೆ ಮಿಥುನ್ ರೈ ಹೆಸರೇ ಫೈನಲ್ ಆಗಿದೆಯೆಂಬ ಮಾತು ಕೇಳಿಬಂದಿತ್ತು. ಆದರೆ ಪಕ್ಷದ ಅಧ್ಯಕ್ಷ ಹುದ್ದೆಗೇರಿದವರು ಚುನಾವಣೆ ಸ್ಪರ್ಧಿಸುವಂತಿಲ್ಲ ಎಂಬ ಷರತ್ತು ಹಾಕಿದ್ದಕ್ಕೆ ಮಿಥುನ್ ರೈ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನಲಾಗಿದೆ. ಆನಂತರ, ಐವಾನ್ ಮತ್ತು ಪದ್ಮರಾಜ್ ಹೆಸರು ಮುನ್ನೆಲೆಗೆ ಬಂದಿತ್ತು. ಇದೀಗ ಕರಾವಳಿಯಲ್ಲಿ ಪ್ರಬಲವಾಗಿರುವ ಬಿಲ್ಲವ ಸಮುದಾಯದ ಪದ್ಮರಾಜ್ ಅವರನ್ನು ಜಿಲ್ಲಾಧ್ಯಕ್ಷ ಹುದ್ದೆಗೆ ಫೈನಲ್ ಮಾಡಲಾಗಿದೆ. 
 
ಇದೇ ವೇಳೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಂಟ ಸಮುದಾಯದ ಕಿಶನ್ ಹೆಗ್ಡೆ ಅವರನ್ನು ಅಂತಿಮಗೊಳಿಸಿದ್ದು ಆಮೂಲಕ ಬಿಲ್ಲವ- ಬಂಟ ಸಂಯೋಜನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಿಶನ್ ಹೆಗ್ಡೆ ಕಳೆದ ಬಾರಿಯೇ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದೊಳಗಿನ ತಿಕ್ಕಾಟ, ಸಹಕಾರ ಕ್ಷೇತ್ರದಲ್ಲಿನ ಒಳಜಗಳ ಅವರ ಆಯ್ಕೆಗೆ ಹಿನ್ನಡೆಯಾಗಿತ್ತು. ಆದರೆ ಈಚೆಗೆ ಆರು ತಿಂಗಳಿನಿಂದ ಸ್ವತಃ ಡಿಕೆ ಶಿವಕುಮಾರ್ ಅವರೇ ಕಿಶನ್ ಹೆಗ್ಡೆ ಅವರನ್ನು ಕರೆದು ತಿಕ್ಕಾಟ ಬದಿಗಿಟ್ಟು ಪಕ್ಷದಲ್ಲಿ ಮುನ್ನಡೆಯುವಂತೆ ಸೂಚಿಸಿದ್ದರು. ಇದರ ಫಲ ಎಂಬಂತೆ, ಇದೀಗ ಪಕ್ಷದ ಜಿಲ್ಲಾ ಸಾರಥಿ ಸ್ಥಾನ ಒಲಿದುಬಂದಿದೆ. 

ಪದ್ಮರಾಜ್ ಕಳೆದ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಎಂಟ್ರಿಯಾಗಿದ್ದರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಬಿಲ್ಲವ ಸಮುದಾಯದ ಬಿಕೆ ಹರಿಪ್ರಸಾದ್ ಆಯ್ಕೆಯಾಗಿದ್ದು ಪದ್ಮರಾಜ್ ಪಾಲಿಗೆ ಪ್ಲಸ್ ಆಗಿತ್ತು. ಎರಡು ವರ್ಷದಲ್ಲೇ ಪಕ್ಷದ ಸಾರಥಿ ಸ್ಥಾನ ಸಿಕ್ಕಿದ್ದು ಪದ್ಮರಾಜ್ ಪಕ್ಷದಲ್ಲಿ ದೂರಗಾಮಿ ಯೋಚನೆ ಇಟ್ಟು ಮುಂದುವರಿದಂತೆ ಕಾಣುತ್ತದೆ. ಕೆಪಿಸಿಸಿ ಮೂಲಕ ರಾಜ್ಯದಲ್ಲಿ ಒಟ್ಟು 35 ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಹೊಸ ಅಧ್ಯಕ್ಷರ ನೇಮಕಗೊಳಿಸಿ ಆದೇಶ ಮಾಡಲಾಗಿದೆ.