ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆಸಿದ್ದ ಕೆ.ಎನ್ ರಾಜಣ್ಣಗೆ ಮುಖಭಂಗ, ಡಿಕೆಶಿ ಆಪ್ತ ಎಸ್.ರವಿಗೆ ಹೈಕಮಾಂಡ್ ಮಣೆ

10-09-26 03:50 pm       HK News Staffer   ಕರ್ನಾಟಕ

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಗಾದಿಗೆ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್. ರವಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್ ರಾಜಣ್ಣ ತೀವ್ರ ಲಾಬಿ ನಡೆಸಿದ್ದರು. ಸಿದ್ದರಾಮಯ್ಯ ಮೂಲಕ ನಡೆಸಿದ ಪ್ರಯತ್ನವೂ ಫಲಕೊಡಲಿಲ್ಲ.

ಬೆಂಗಳೂರು, ಸೆ.10: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಗಾದಿಗೆ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಎಸ್. ರವಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಕೆ.ಎನ್ ರಾಜಣ್ಣ ತೀವ್ರ ಲಾಬಿ ನಡೆಸಿದ್ದರು. ಸಿದ್ದರಾಮಯ್ಯ ಮೂಲಕ ನಡೆಸಿದ ಪ್ರಯತ್ನವೂ ಫಲಕೊಡಲಿಲ್ಲ. 

ಹೈಕಮಾಂಡ್ ಎಸ್.ರವಿ ಹೆಸರನ್ನು ಅಂತಿಮಗೊಳಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಆಯ್ಕೆಯಾಗಿದ್ದಾರೆ. ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ 4 ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಪ್ರಭಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ರವಿ, ರಾಜಣ್ಣ, ಶಿವರಾಮ ಹೆಬ್ಬಾರ್ ಹೆಸರು ಮುನ್ನೆಲೆಗೆ ಬಂದಿತ್ತು. ರಾಜಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ದೆಹಲಿಯಲ್ಲಿ ಲಾಬಿ ನಡೆಸಿದ್ದರೆ, ಸಿಎಂ ಡಿಕೆ ಶಿವಕುಮಾರ್ ಸದ್ದಿಲ್ಲದೆ ತಂತ್ರಗಾರಿಕೆ ನಡೆಸಿದ್ದರು. 

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದರು. ದೆಹಲಿಗೆ ತೆರಳಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಭೇಟಿ ಮಾಡಿ ಒತ್ತಡ ಹೇರಿದ್ದರು. ಲಾಬಿ ಜೋರಾಗಿದ್ದರಿಂದ ಸಿಎಂ ಡಿಕೆಶಿ ಇಬ್ಬರ ನಡುವೆ ಅಧಿಕಾರ ಹಂಚಿಕೆಯ ಸೂತ್ರ ಹೆಣೆದಿದ್ದರು. ಆದರೆ ಹೈಕಮಾಂಡ್ ಎಸ್.ರವಿ ಹೆಸರನ್ನು ಅಂತಿಮಗೊಳಿಸಿದ್ದು ರಾಜಣ್ಣ ಅವರಿಗೆ ಮುಖಭಂಗ ಆಗಿದೆ. 

ಅಪೆಕ್ಸ್ ಬ್ಯಾಂಕ್ ನಲ್ಲಿ ಒಟ್ಟು 21 ನಿರ್ದೇಶಕರ ಸ್ಥಾನಗಳಿದ್ದು 20 ಸ್ಥಾನಕ್ಕೆ ಮಾತ್ರ ಚುನಾವಣೆ ಆಗಿದೆ. ಬಾಗಲಕೋಟೆ ಜಿಲ್ಲೆಗೆ ಚುನಾವಣೆ ನಡೆಯಬೇಕಾಗಿದೆ. ಸದ್ಯ ಆಯ್ಕೆಯಾಗಿರುವ 19 ನಿರ್ದೇಶಕರ ಪೈಕಿ ಕಾಂಗ್ರೆಸ್ ಬೆಂಬಲಿತರು 15 ಮಂದಿ ಇದ್ದಾರೆ. ಇತರೆ 3 ಮಂದಿ ಬಿಜೆಪಿ, ಜೆಡಿಎಸ್ ಬೆಂಬಲಿತರು ಇದ್ದಾರೆ.