ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ ಕೃತ್ಯಕ್ಕೆ ಸಂಚು ಹಿನ್ನೆಲೆ, ಪರಪ್ಪನ ಅಗ್ರಹಾರ ಜೈಲಿನ ಎಸ್ಐ, ಮನೋವೈದ್ಯ ಸೇರಿ ಮೂವರ ಬಂಧನ 

09-07-25 01:53 pm       Bangalore Correspondent   ಕರ್ನಾಟಕ

ಬೆಂಗಳೂರು, ಕೋಲಾರ ಸೇರಿದಂತೆ ಐದು ಕಡೆ ಎನ್ಐಎ ದಾಳಿ ನಡೆಸಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಜೈಲಿನ ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನೊಬ್ಬನ ತಾಯಿ ಅನೀಸ್ ಫಾತೀಮಾ ಅವರನ್ನು ಬಂಧಿಸಲಾಗಿದೆ.

ಬೆಂಗಳೂರು, ಜುಲೈ 9 : ಬೆಂಗಳೂರು, ಕೋಲಾರ ಸೇರಿದಂತೆ ಐದು ಕಡೆ ಎನ್ಐಎ ದಾಳಿ ನಡೆಸಿದ್ದು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಜೈಲಿನ ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನೊಬ್ಬನ ತಾಯಿ ಅನೀಸ್ ಫಾತೀಮಾ ಅವರನ್ನು ಬಂಧಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಇವರು ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಸಂಗತಿ ಬಯಲಾಗಿದೆ. 

ಇದಲ್ಲದೆ, ಮಂಗಳೂರಿನ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಸ್ಫೋಟ ಸೇರಿದಂತೆ ದಕ್ಷಿಣ ಭಾರತದಲ್ಲಿ ಸಂಭವಿಸಿದ ಹಲವು ಉಗ್ರ ಕೃತ್ಯಗಳ ಮಾಸ್ಟರ್ ಮೈಂಡ್ ಎನ್ನಲಾದ ಉಗ್ರ ನಾಸೀರ್ ಜೊತೆ ಸಂಪರ್ಕ ಹೊಂದಿದ್ದರು ಎನ್ನುವ ಅಂಶವೂ ತಿಳಿದುಬಂದಿದೆ. 

2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್‌ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ ಎನ್ನುವುದು ತನಿಖೆಯಲ್ಲಿ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧಿಸಿ ನಾಸೀರ್‌ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್‌ ಜೈಲಿನಲ್ಲಿದ್ದಾನೆ. ಭಯೋತ್ಪಾದನೆ ಬಗ್ಗೆ ಯುವಜನರ ಮೈಂಡ್‌ ವಾಶ್‌ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ನಾಸೀರ್‌, ಹಲವು ಯುವಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ ಎಂದೂ ಸಹ ಎನ್‌ಐಎ ತನಿಖೆ ವೇಳೆ ವ್ಯಕ್ತವಾಗಿದೆ. 

ಜೈಲಿನಲ್ಲಿದ್ದೇ ಉಗ್ರ ಚಟುವಟಿಕೆಗಳ ಬಗ್ಗೆ ನಾಸೀರ್​ ಸಂಚು ಹೂಡುತ್ತಿದ್ದು ಯುವಕರ ತಂಡವನ್ನು ತಯಾರಿಸುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಫೋಟ ಕೃತ್ಯಗಳ ಮಾಸ್ಟರ್ ಮೈಂಡ್ ಈತ ಎನ್ನಲಾಗಿದೆ. ಸ್ಲೀಪರ್ ಸೆಲ್ ಜತೆ ನೇರ ಸಂಪರ್ಕ ಹೊಂದಿದ್ದ ಉಗ್ರ ನಾಸೀರ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ. ಅದಕ್ಕಾಗಿ ಜೈಲಿನಲ್ಲಿ ಇದ್ದುಕೊಂಡೇ ಯುವಕರ ತಂಡ ಕಟ್ಟಿದ್ದ ಎನ್ನಲಾಗಿದೆ. 

ಉಗ್ರ ನಾಸೀರ್, ಕೊಲೆ ಕೇಸ್​​ನಲ್ಲಿ ಶಾಮೀಲಾಗಿದ್ದ ಭಯೋತ್ಪಾದಕ ಕೃತ್ಯಕ್ಕಾಗಿ ಯುವಕರ ತಂಡವನ್ನು ಕಟ್ಟಿದ್ದ. ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಇರುವ ತಂಡ ರೆಡಿ ಮಾಡಿದ್ದ. ಈ ತಂಡ 2023ರಲ್ಲಿ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳ ಸಮೇತ ಬೆಂಗಳೂರಿನ ಆರ್​.ಟಿ.ನಗರ, ಹೆಬ್ಬಾಳದಲ್ಲಿ ಸಿಕ್ಕಿಬಿದ್ದಿತ್ತು. ಇದೀಗ ಪ್ರಮುಖ ಆರೋಪಿ ಜುನೈದ್​ಗಾಗಿ ಎನ್​ಐಎ ಹುಡುಕಾಟ ನಡೆಸುತ್ತಿದೆ. ಈ ವಿಚಾರ ಸಂಬಂಧ ದಾಳಿ ನಡೆಸಿದಾಗ ಡಾ. ನಾಗರಾಜ್, ಚಂದ್ ಪಾಷಾ ಹಾಗೂ ಅನೀಸ್ ಫಾತೀಮಾ ಸಿಕ್ಕಿಬಿದ್ದಿದ್ದಾರೆ.

ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬಾತನಿಗೆ ಎನ್‌ಐಎ ನೋಟಿಸ್‌ ನೀಡಿದೆ. ಶಂಕಿತರಿಗೆ ಸಿಮ್‌ ಕಾರ್ಡ್‌ ನೀಡಿದ ಆರೋಪದಲ್ಲಿ ಸತೀಶ್‌ ಗೌಡಗೆ ನೋಟಿಸ್‌ ನೀಡಲಾಗಿದೆ. ಸತೀಶ್‌ ಮನೆಯಲ್ಲಿ ಇಲ್ಲದ ಕಾರಣ ಕಾರಣ ಕುಟುಂಬಸ್ಥರಿಗೆ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

The National Investigation Agency (NIA) conducted raids at five locations across Karnataka, including Bengaluru and Kolar, as part of an ongoing probe into a major terror conspiracy. The raids led to the arrest of Dr. Nagaraj, a psychiatrist at Parappana Agrahara Central Jail, ASI Chand Pasha, and Anees Fatima, the mother of a suspected terrorist.