Mangalore Peace meeting Home Minister: ಎಳೆಯ ಮಕ್ಕಳಲ್ಲಿ ವಿಷಬೀಜ ಬಿತ್ತಬೇಡಿ, ಇಫ್ತಾರ್ ಹೋಗಿದ್ದಕ್ಕೆ ವಿಕೃತಿಗಳು ದ್ವೇಷ ಕಾರಿದ್ದವು! ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಇಟ್ಟು ಕಿರುಚಬೇಕೇ..? ಸೈದ್ಧಾಂತಿಕ ಸಂಘರ್ಷಕ್ಕೆ ಮದ್ದಿಲ್ಲ..! ಶಾಂತಿ ಸಭೆಯಲ್ಲಿ ಯಾರು ಏನಂದ್ರು?

09-07-25 07:37 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಸರಣಿ ಕೊಲೆ ಮತ್ತು ಆನಂತರ ಬೆಳವಣಿಗೆಯ ಪರಿಣಾಮ ಕೋಮು ದ್ವೇಷದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸರ್ವಧರ್ಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪ್ರಮುಖರು, ಶಾಸಕರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತು. ಹಲವು ಪ್ರಮುಖರು ತಮ್ಮ ವಿಚಾರಗಳನ್ನು ಹೇಳಿ ಶಾಂತಿ ಸೌಹಾರ್ದಕ್ಕೆ ಏನೇನು ಆಗಬೇಕೆಂದು ಸಲಹೆಗಳನ್ನು ನೀಡಿದರು.

ಮಂಗಳೂರು, ಜುಲೈ 9 : ಮಂಗಳೂರಿನಲ್ಲಿ ಸರಣಿ ಕೊಲೆ ಮತ್ತು ಆನಂತರ ಬೆಳವಣಿಗೆಯ ಪರಿಣಾಮ ಕೋಮು ದ್ವೇಷದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸರ್ವಧರ್ಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪ್ರಮುಖರು, ಶಾಸಕರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತು. ಹಲವು ಪ್ರಮುಖರು ತಮ್ಮ ವಿಚಾರಗಳನ್ನು ಹೇಳಿ ಶಾಂತಿ ಸೌಹಾರ್ದಕ್ಕೆ ಏನೇನು ಆಗಬೇಕೆಂದು ಸಲಹೆಗಳನ್ನು ನೀಡಿದರು.

‘’ಎಳೆಯ ಮಕ್ಕಳಲ್ಲಿ ವಿಷಬೀಜ ಬಿತ್ತಬೇಡಿ. ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ನಮ್ಮ ಪೂಜಾಪದ್ಧತಿಯೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ, ಉಳಿದದ್ದೆಲ್ಲ ಕನಿಷ್ಠ ಎಂದು ಬೋಧಿಸುವುದು ಮಕ್ಕಳ ಮನಸ್ಸಿನಲ್ಲಿ ಮೂಲಭೂತವಾದ ಬಿತ್ತುತ್ತದೆ. ಎಲ್ಲರ ಮನೆಗಳಲ್ಲಿ, ಎಲ್ಲ ಕಡೆಯ ಶಾಲೆಗಳಲ್ಲೂ ಎಲ್ಲ ಧರ್ಮಗಳೂ ಒಂದೇ ಎನ್ನುವ ಸೌಹಾರ್ದ ಭಾವನೆ ಬಿತ್ತಬೇಕು. ಹಾಗಾದಾಗ ಮಾತ್ರ ಶಾಂತಿ, ಸಾಮರಸ್ಯ ನೆಲೆಸಬಹುದು ಎಂದು ವಿಶ್ವ ಹಿಂದು ಪರಿಷತ್ ಪ್ರಮುಖ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂಬಿ ಪುರಾಣಿಕ್ ಹೇಳಿದರು.

ನಾನೊಂದು ಬಾರಿ ಇಫ್ತಾರ್ ಕೂಟಕ್ಕೆ ಹೋಗಿದ್ದನ್ನು ಗುರಿಯಾಗಿಸಿ ನನ್ನ ಬಗ್ಗೆ ವಿಕೃತ ಮನಸ್ಸುಗಳು ದ್ವೇಷ ಕಾರಿದ್ದು ನನಗೆ ತೀವ್ರ ನೋವು ತಂದಿತ್ತು. ಎಲ್ಲರಿಂದಲ್ಲ, ಕೆಲವು ವರ್ಗದವರಿಂದ ತೀವ್ರ ಟೀಕೆ ಎದುರಿಸಬೇಕಾಯಿತು. ಸೌಹಾರ್ದ ಸಮಾಜದಲ್ಲಿ ಇಂತಹದ್ದು ಆಗಬಾರದು. ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಯಾರೇ ಇರಲಿ, ಸೌಹಾರ್ದ, ಸಾಮರಸ್ಯದಲ್ಲಿ ಬದುಕದ ಹೊರತು ಸಮಾಜದಲ್ಲಿ ಶಾಂತಿ ನೆಲೆಸದು. ಒಬ್ಬರ ಬಗ್ಗೆ ಗೌರವ ಇಲ್ಲದಿದ್ದರೆ ಸಹಬಾಳ್ವೆ ಸಾಧ್ಯವಾಗದು. ಗೋವುಗಳ ಬಗ್ಗೆ ಒಂದು ಸಮಾಜಕ್ಕೆ ಭಕ್ತಿ ಭಾವನೆ ಇದೆ. ಅದನ್ನು ಗೌರವಿಸುವ ಭಾವನೆ ಬಾರದೇ ಸೌಹಾರ್ದ ಬರದು.

ಧಾರ್ಮಿಕ ಕೇಂದ್ರಗಳಲ್ಲಿ ಕಿರುಚಾಟ ಬೇಕೇ..?

ನನ್ನದೇ ಶ್ರೇಷ್ಠ ಎಂದು ಹೇಳಿದರೆ ಅಲ್ಲಿ ವಿಕೃತಿ ಹುಟ್ಟುತ್ತದೆ. ಅದರಿಂದ ಸಮಾಜಕ್ಕೆ ತೊಂದರೆ ಎದುರಾಗುತ್ತದೆ. ಸ್ಪೀಕರ್ ಕ್ಷೇತ್ರ ಉಳ್ಳಾಲದಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಅಲ್ಲಿಯೇ ಸುತ್ತ ಹಲವು ಧಾರ್ಮಿಕ ಕೇಂದ್ರಗಳಿವೆ. ಬೇಕಾಬಿಟ್ಟಿ ಧ್ವನಿವರ್ಧಕ ಇಟ್ಟು ಕಿರುಚಾಡುವುದನ್ನು ಮಾಡುತ್ತಾರೆ. ಇದರಿಂದ ಕಲಿಯುವ ಮಕ್ಕಳಿಗೂ ತೊಂದರೆಯಾಗುತ್ತದೆ ಎನ್ನುವ ಭಾವನೆ ಅವರಲ್ಲೂ ಮೂಡಬೇಕು. ಐದು ಕಿಮೀಗೆ ಒಂದರಂತೆ ಧಾರ್ಮಿಕ ಕೇಂದ್ರಗಳಿರುವಾಗ ಅಷ್ಟೊಂದು ಕಿರುಚಾಟ ಬೇಕೇ. ಪ್ರವಚನಗಳಿದ್ದರೆ ತಮಗೆ ಮಾತ್ರ ಕೇಳಿದರೆ ಸಾಕಾಗದೇ ಎಂದು ಪುರಾಣಿಕ್ ಸಲಹೆ ಮುಂದಿಟ್ಟರು.

ಉದ್ರೇಕಕಾರಿ ಭಾಷಣ ಮಾಡಿ ಯುವಕರನ್ನು ಉದ್ರೇಕಿಸುವುದು ಸುಲಭ. ಆದರೆ ಅದರಿಂದಾಗುವ ಪರಿಣಾಮಗಳನ್ನು ಯಾರೂ ಕೇಳಿಸಿಕೊಳ್ಳಲ್ಲ. ಸಮಾಜಕ್ಕೇನು ತೊಂದರೆ ಆಗುತ್ತೆ ಎಂದು ಯೋಚಿಸುವುದಿಲ್ಲ. ಇದರಿಂದ ಸಾಮರಸ್ಯದ ಸಮಾಜ ಸಾಧ್ಯವಿಲ್ಲ. ಇಲ್ಲಿ ಕುಳಿತು ಭಾಷಣ ಮಾಡಿದರೆ ಮಾತ್ರ ಶಾಂತಿ ಆಗಲ್ಲ. ಸರಕಾರಿ ವ್ಯವಸ್ಥೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದರೆ ಮಾತ್ರ ಶಾಂತಿ ನೆಲೆಸುತ್ತದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಪರವಾಗಿ ಇಬ್ರಾಹಿಂ ಕೋಡಿಜಾಲ್ ಹೇಳಿದರು.  

ಸೋಶಿಯಲ್ ಮೀಡಿಯಾ ವಾರ್ ಬಂದ್

ಹೊಸತಾಗಿ ಎಸ್ಪಿ, ಕಮಿಷನರ್ ಖಡಕ್ ಕ್ರಮ ಜರುಗಿಸಿದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ವಾರ್ ಬಂದ್ ಆಗಿದೆ. ಯಾರೇ ಆಗಲಿ, ತಮ್ಮ ಸೈದ್ಧಾಂತಿಕ ವಿಚಾರವನ್ನು ಧಾರ್ಮಿಕ ವೇದಿಕೆಗಳಲ್ಲಿ ಬಿತ್ತುವುದು ನಿಲ್ಲಿಸಬೇಕು. ಸಂವಿಧಾನದ ಪೀಠಿಕೆಯನ್ನು ಪ್ರಸಾರ ಮಾಡುವ ಕೆಲಸ ಶಾಲೆಗಳಲ್ಲಿ ಆಗಬೇಕು. ಯಕ್ಷಗಾನ ಮೇಳಗಳಲ್ಲಿ ಇನ್ನೊಂದು ಧರ್ಮವನ್ನು ಹೀಯಾಳಿಸುವುದು ಪೊಲೀಸರಿಂದ ಕಡಿವಾಣ ಹಾಕಬೇಕು. ರಾಜಕೀಯದವರು ಎಲ್ಲ ಸೇರಿ ಕ್ರಿಕೆಟ್ ಆಡುವ ರೀತಿಯಲ್ಲೇ ಭಜನಾ ಮಂದಿರ, ಮಸೀದಿ ಕಮಿಟಿಯವರು ಜೊತೆ ಸೇರಿ ಕ್ರಿಕೆಟ್ ಆಡಿದರೆ ಸೌಹಾರ್ದ ಬೆಳೆಯುತ್ತದೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.

ಅಪಘಾತವಾದರೆ ರಕ್ಷಣೆಗೆ ಯಾರೂ ಬರಲ್ಲ..

  ಬಿಷಪ್ ಪರವಾಗಿ ಆಗಮಿಸಿದ್ದ ರಾಯ್ ಕ್ಯಾಸ್ಟಲಿನೋ, ಸಮಾಜದಲ್ಲಿ ವಿಭಜಿಸುವುದಕ್ಕಾಗಿ, ಕೋಮು ದ್ವೇಷ ಹರಡುವುದಕ್ಕಾಗಿ ನಮ್ಮ ನಡುವೆ ಕಣ್ಣಿಗೆ ಕಾಣದ ಫೋರ್ಸ್ ಒಂದಿದೆ. ಸಮಾಜದಲ್ಲಿ ಗಲಭೆ ನಡೆಸುವುದಕ್ಕಾಗಿಯೇ ಇದು ಕೆಲಸ ಮಾಡುತ್ತದೆ. ಕಾನೂನು ಮೂಲಕ ಇವನ್ನೆಲ್ಲ ನಿಗ್ರಹಿಸಲು ಸಾಧ್ಯವಿದೆ. ಸೂಕ್ತ ಕ್ರಮ ಜರುಗಿಸುವುದೇ ಎಲ್ಲದಕ್ಕೂ ಉತ್ತರವಾಗುತ್ತದೆ ಎಂದರು. ಎಸ್ಡಿಪಿಐನಿಂದ ಜಲೀಲ್ ಕೃಷ್ಣಾಪುರ ಮಾತನಾಡಿ, ರಸ್ತೆ ನಡುವೆ ಅಪಘಾತವಾಗಿ ನರಳಿದರೂ ಯಾರೂ ಹತ್ತಿರ ಬರಲ್ಲ. ಆದರೆ ಒಂದೆಡೆ ಮಾರಕಾಸ್ತ್ರದಿಂದ ದಾಳಿಯಾದರೆ ಸಾವಿರ ಜನ ಸೇರುತ್ತಾರೆ. ಇಂತಹ ಮನಸ್ಥಿತಿ ಹೋಗಲಾಡಿಸಬೇಕು. ಯಾವುದೇ ಜೀವಗಳ ಬಗ್ಗೆಯೂ ಕರುಣೆ ತೋರಿದರೆ ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ನಮ್ಮ ನಡುವೆ ಅಪನಂಬಿಕೆ ಎದುರಾದ ವೇಳೆ ದ್ವೇಷದ ವಾತಾವರಣ ಉಂಟಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳುವುದು ಆಡಳಿತದ ಕರ್ತವ್ಯ. ನೂರಾರು ವರ್ಷಗಳಿಂದ ಕೃಷ್ಣಾಷ್ಟಮಿ, ಗಣೇಶೋತ್ಸವ ನಡೆದುಬಂದಿದೆ. ಈ ಬಾರಿ ರಾತ್ರಿ 11 ಗಂಟೆಗೆ ಮುಗಿಸಬೇಕು ಎಂದು ಆಯುಕ್ತರು ಸೂಚನೆ ಕೊಟ್ಟಿರುವುದು ಮತ್ತೆ ವೈಮನಸ್ಸಿಗೆ ಕಾರಣವಾಗುತ್ತದೆ. ಹಿಂದಿನಿಂದ ನಡೆದುಬಂದ ಪ್ರಕ್ರಿಯೆಗಳಿಗೆ ಅನುಮತಿ ನೀಡಬೇಕು. ಯಾವಾಗ ಗಾಯ ಆಗುತ್ತೋ ಆಕೂಡಲೇ ಇಂತಹ ಸಭೆ ಆಗಬೇಕಿತ್ತು. ಯಾವುದೇ ಅಶಾಂತಿಯಾದರೂ ಇಡೀ ಜಿಲ್ಲೆಗೆ ತೊಂದರೆಯಾಗುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡಲು ದಿಟ್ಟ ಹೆಜ್ಜೆ ಇಟ್ಟಿದ್ದೀರಿ. ಅದಕ್ಕಾಗಿ ಅಭಿನಂದನೆಗಳು, ಇದೇ ರೀತಿಯ ವ್ಯವಸ್ಥೆಯನ್ನು ಹಲವು ವರ್ಷಗಳ ವರೆಗೂ ಉಳಿಸಿಕೊಂಡು ಹೋಗಬೇಕು ಮತ್ತು ಅಶಾಂತಿ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು. ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ರಶೀದ್ ಮಾತನಾಡಿ, ವಿಳಂಬ ಆದರೂ ಉತ್ತಮ ಕಾರ್ಯಕ್ರಮ ಮಾಡಿದ್ದೀರಿ. ಸರ್ಕಾರ ಇಲ್ಲಿನ ಎಲ್ಲರ ಅಭಿಪ್ರಾಯಗಳನ್ನು ಪಡೆದು ಕಾರ್ಯರೂಪಕ್ಕೆ ತರಬೇಕು. ಇದು ಕೇವಲ ಸಭೆಗೆ ಸೀಮಿತ ಆಗಬಾರದು. ಎಲ್ಕ ಜಾತಿ ಧರ್ಮದಲ್ಲಿ ಕಿಡಿಗೇಡಿ, ರೌಡಿಗಳಿದ್ದಾರೆ, ಅವರನ್ನು ಯಾವತ್ತು ಧರ್ಮದ ರಕ್ಷಕರೆಂದು ತಿಳಿಯಬಾರದು. ಎಲ್ಲ ಧಾರ್ಮಿಕ ಉತ್ಸವಗಳಲ್ಲಿ ಎಲ್ಲರಿಗೂ ಅವಕಾಶ ನೀಡುವ ವ್ಯವಸ್ಥೆ ಆಗಬೇಕು ಎಂದರು.

ಸೈದ್ಧಾಂತಿಕ ಸಂಘರ್ಷಕ್ಕೆ ಮದ್ದಿಲ್ಲ..  

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಲಕ್ಷ್ಮೀಶ ಗಬ್ಲಡ್ಕ ನೀಡಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಆಗ್ರಹಿಸುತ್ತೇನೆ. ಇಲ್ಲಿ ನಡೆಯುತ್ತಿರುವುದು ಮತೀಯ ಜೊತೆಗೆ ಸೈದ್ಧಾಂತಿಕ ರೀತಿಯ ಸಂಘರ್ಷ. ಇದನ್ನು ಕಾನೂನು ಮಾತ್ರದಿಂದ ಸುಲಭದಲ್ಲಿ ಸರಿಪಡಿಸಲಾಗದು. ಸದ್ಯಕ್ಕೆ ಪೊಲೀಸ್ ಇಲಾಖೆ ದಂಧೆಗಳನ್ನು ನಿಲ್ಲಿಸಿದ್ದಾರೆ. ಕಮ್ಯುನಲ್ ಮತ್ತು ಇಲ್ಲಿ ನಡೆಯುವ ದಂಧೆಗಳಿಗೆ ಸಂಪರ್ಕ ಇದೆ. ಸೌಹಾರ್ದ ಬೆಳೆಸಲು ಸಂವಿಧಾನ ಅರಿವು ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ತರಬೇಕು. ಜನರ ಮನಸ್ಸಿನಲ್ಲಿ ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಆಯೋಜಿಸಬೇಕು. ನಾವೆಲ್ಲ ಹಿಂದಿನವರು ತುಳು, ಬ್ಯಾರಿ ಭಾಷೆಯನ್ನು ಮಾತೃಭಾಷೆ ಎನ್ನುವಂತೆ ಮಾತಾಡುತ್ತಿದ್ದೆವು. ಈಗಿನ ಯುವಜನರು ಬ್ಯಾರಿಯೂ ಗೊತ್ತಿಲ್ಲ. ಮುಸ್ಲಿಮ್ ಮಕ್ಕಳು ತುಳುವೂ ತಿಳಿದಿಲ್ಲ ಎನ್ನುವ ಸ್ಥಿತಿಯಾಗಿದೆ. ಅಂತರ ಸೃಷ್ಟಿಯಾಗಿದ್ದರಿಂದ ಈ ರೀತಿ ಆಗಿದೆ ಎನ್ನುವುದು ನನ್ನ ಭಾವನೆ ಎಂದರು.

In response to a recent spate of communal killings and rising tensions in the coastal region, a high-level peace meeting was held in Mangaluru under the leadership of Karnataka Home Minister Dr. G. Parameshwara. The gathering included religious leaders, representatives from various community organizations, local MLAs, and officials from the police and district administration.