Mangalore, Honey Trap, Kundapur, Crime: ಹುಡುಗಿ ಆಸೆಗೆ ಬಿದ್ದು ಕುಂದಾಪುರಕ್ಕೆ ತೆರಳಿದ್ದ ಮಂಗಳೂರಿನ ಯುವಕನಿಗೆ ಹನಿಟ್ರ್ಯಾಪ್ ; ಹಣಕ್ಕಾಗಿ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ, ಮಹಿಳೆ ಸೇರಿ ಖದೀಮರ ಜಾಲ ಪೊಲೀಸ್ ಬಲೆಗೆ 

04-09-25 01:10 pm       Udupi Correspondent   ಕ್ರೈಂ

ಹುಡುಗಿ ಆಸೆಗೆ ಬಿದ್ದ ಮಂಗಳೂರಿನ ಯುವಕನೊಬ್ಬನನ್ನು ಕುಂದಾಪುರಕ್ಕೆ ಕರೆಸಿಕೊಂಡು ಹನಿಟ್ಯ್ರಾಪ್ ಮಾಡಿ, ಸಾವಿರಾರು ರೂ. ಹಣವನ್ನು ದೋಚಿದ ಘಟನೆ ನಡೆದಿದ್ದು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸಹಿತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಕುಂದಾಪುರ, ಸೆ.4 : ಹುಡುಗಿ ಆಸೆಗೆ ಬಿದ್ದ ಮಂಗಳೂರಿನ ಯುವಕನೊಬ್ಬನನ್ನು ಕುಂದಾಪುರಕ್ಕೆ ಕರೆಸಿಕೊಂಡು ಹನಿಟ್ಯ್ರಾಪ್ ಮಾಡಿ, ಸಾವಿರಾರು ರೂ. ಹಣವನ್ನು ದೋಚಿದ ಘಟನೆ ನಡೆದಿದ್ದು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸಹಿತ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ನಾವುಂದ ಬಡಾಕೆರೆಯ ಅಬ್ದುಲ್‌ ಸವಾದ್‌ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಪುಲ್ಲಾ (38), ಹಂಗಳೂರಿನ ಮೊಹಮ್ಮದ್‌ ನಾಸೀರ್‌ ಶರೀಫ್‌ (38), ಮೂಡುಗೋಪಾಡಿಯ ಅಬ್ದುಲ್‌ ಸತ್ತಾರ್‌ (23), ನಾಗೋಡಿಯ ಅಬ್ದುಲ್‌ ಅಜೀಜ್‌ (26) ಹಾಗೂ ಮಹಿಳೆ ಎಂ ಕೋಡಿಯ ಆಸ್ಮಾ (43) ಎಂದು ಗುರುತಿಸಲಾಗಿದೆ. 

ಮಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಸಂದೀಪ್‌ ಕುಮಾರ್‌ (37) ಹನಿಟ್ರ್ಯಾಪ್ ಗೆ ಬಿದ್ದ ವ್ಯಕ್ತಿ. ಸಂದೀಪ್ ಕುಮಾರ್ ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದಾಗ ಅಬ್ದುಲ್‌ ಸವಾದ್‌ ಮತ್ತು ಆತನ ಸ್ನೇಹಿತರ ಪರಿಚಯವಾಗಿತ್ತು. ಈ ವೇಳೆ ಆಸ್ಮಾ ಎಂಬ ಮಹಿಳೆಯನ್ನೂ ಅವರು ಪರಿಚಯಿಸಿದ್ದರು. ಆನಂತರ, ಆಸ್ಮಾ ಸಂದೀಪ್ ಜೊತೆ ಸಲುಗೆಯಿಂದ ವ್ಯವಹರಿಸಿ ಸಂಪರ್ಕ ಸಾಧಿಸಿದ್ದಾಳೆ. ಅಲ್ಲದೆ, ತನ್ನೊಂದಿಗೆ ಅನೈತಿಕ ಸಂಬಂಧಕ್ಕೂ ಕರೆಸಿದ್ದಾಳೆ. ಸಂದೀಪ್ ನನ್ನು ಸೆಪ್ಟೆಂಬರ್ 2 ರಂದು ಕೊಟೇಶ್ವರಕ್ಕೆ ಬರುವಂತೆ ತಿಳಿಸಿದ್ದಳು. 

ಅದೇ ರೀತಿ ಸಂದೀಪ್‌ ತೆರಳಿದ್ದು ಆಸ್ಮಾ ಆಟೋ ರಿಕ್ಷಾದಲ್ಲಿ ಮೂಡುಗೋಪಾಡಿಯ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಳು. ಇದೇ ವೇಳೆಗೆ ಸವಾದ್ ಮತ್ತು ಇತರರು ಅಲ್ಲಿಗೆ ಎಂಟ್ರಿ ಕೊಟ್ಟಿದ್ದು ಸಂದೀಪ್ ನನ್ನು ಹಿಡಿದು ಹಾಕಿದ್ದಾರೆ. ಬಳಿಕ 3 ಲಕ್ಷ ಹಣ ಕೊಡುವಂತೆ ಬೆದರಿಸಿದ್ದಾರೆ. ಸಂದೀಪ್‌ ಕೈಗಳನ್ನು ನೈಲಾನ್‌ ಹಗ್ಗದಿಂದ ಕಟ್ಟಿ ಹಲ್ಲೆ ಮಾಡಿದ್ದಾರೆ. ಸೈಪುಲ್ಲಾ ರಾಡ್‌ನಿಂದ ಭುಜ, ಬೆನ್ನಿಗೆ ಹೊಡೆದು ಪ್ಯಾಂಟ್‌ ಜೇಬಿನಲ್ಲಿದ್ದ 6,200 ರೂ. ನಗದನ್ನು ಕಿತ್ತುಕೊಂಡಿದ್ದಾರೆ. ಅನಂತರ, ಗೂಗಲ್‌ ಪೇ ಮೂಲಕ ಹಣ ಹಾಕುವಂತೆ ಒತ್ತಾಯಿಸಿದ್ದು ಸೈಪುಲ್ಲಾನ ಮೊಬೈಲ್‌ ಗೆ 5 ಸಾವಿರ ವರ್ಗಾಯಿಸಿದ್ದ. 

ಇನ್ನಷ್ಟು ಹಣ ಕೇಳಿದ್ದು ಇಲ್ಲ ಎಂದಾಗ “ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹೂತು ಹಾಕುತ್ತೇವೆ’ ಎಂದು ಬೆದರಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ಹೆದರಿದ ಸಂದೀಪ್‌ ಮತ್ತೆ ಸೈಪುಲ್ಲಾ ಮೊಬೈಲ್‌ ನಂಬರ್‌ಗೆ ಒಟ್ಟು 30 ಸಾವಿರ ರೂ. ವರ್ಗಾಯಿಸಿದ್ದರು. ಅಲ್ಲದೆ, ಎಟಿಎಂ ಕಾರ್ಡ್ ಕಿತ್ತುಕೊಂಡು ಸಂದೀಪನನ್ನು ಕೊಠಡಿಯಲ್ಲಿ ಕೂಡಿಹಾಕಿ ಅದರಿಂದ 40 ಸಾವಿರ  ಪಡೆದಿದ್ದಾರೆ. ರಾತ್ರಿ 11.30ರ ವೇಳೆಗೆ ಸಂದೀಪ್‌ನನ್ನು ಬಿಟ್ಟು ಕಳುಹಿಸಿದ್ದರು. ಬಳಿಕ ಸಂದೀಪ್‌ ಕುಂದಾಪುರ ನಗರ ಠಾಣೆಗೆ ದೂರು ನೀಡಿದ್ದರು.

ದೂರಿನ ಬೆನ್ನಲ್ಲೇ ಉಡುಪಿ ಎಸ್‌ಪಿ ಹರಿರಾಮ್‌ ಶಂಕರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಚ್‌.ಡಿ. ಕುಲಕರ್ಣಿ ನೇತೃತ್ವದಲ್ಲಿ ಕುಂದಾಪುರ ನಗರ ಠಾಣೆಯ ಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ಸಿಬಂದಿಗಳಾದ ಪ್ರಿನ್ಸ್‌, ಘನಶ್ಯಾಮ್‌, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್‌, ಭಾಗೀರತಿ, ನಾಗಶ್ರೀ ಮತ್ತು ರೇವತಿ ಅವರು ಪಾಲ್ಗೊಂಡಿದ್ದರು. ಆರೋಪಿಗಳನ್ನು ಕುಂದಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಲಾಗಿದೆ.

A Mangalore-based youth was lured to Kundapur and fell victim to a honeytrap, where he was assaulted and extorted for money. Acting swiftly on the complaint, Kundapur police arrested six individuals, including the woman involved in the trap. The arrested have been identified as Abdul Savad alias Achchu (28) from Navunda Badakere, Saipulla (38) from Gulwadi Bolkatte, Mohammed Naseer Sharif (38) from Hanglur, Abdul Sattar (23) from Moodugopady, Abdul Azeez (26) from Nagodi, and the woman Asma (43) from Kodi.