Ullal, Mangalore Police: ಮೊದಲ ಪತ್ನಿಗೆ ಜೀವನಾಂಶ ಆದೇಶಕ್ಕೆ ಕ್ಯಾರೆನ್ನದ ಆರೋಪಿ ; ಕೋರ್ಟ್ ವಾರೆಂಟ್ ತಪ್ಪಿಸುತ್ತಿದ್ದ ಆರೋಪಿಗೆ ಒಂದು ತಿಂಗಳ ಜೈಲು ಶಿಕ್ಷೆ, ಪೊಲೀಸರನ್ನ ಅಣಕಿಸಿ ಪೋಸ್ಟ್ ಹಾಕಿದ್ದಕ್ಕೆ ಸುಮೊಟೊ ಪ್ರಕರಣ 

06-09-25 10:59 pm       Mangalore Correspondent   ಕರಾವಳಿ

ಮೊದಲ ಪತ್ನಿಯನ್ನು ದೂರಕ್ಕಟ್ಟಿ ಕೋರ್ಟ್ ಆದೇಶವಿದ್ದರೂ ಜೀವನಾಂಶ ನೀಡದೆ ಒಂದು ವರ್ಷದಿಂದ ವಂಚಿಸಿದ್ದಲ್ಲದೆ, ಅರೆಸ್ಟ್ ವಾರೆಂಟ್ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ನವಾಝ್ (34)  ಎಂಬಾತನಿಗೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಉಳ್ಳಾಲ, ಸೆ.6 : ಮೊದಲ ಪತ್ನಿಯನ್ನು ದೂರಕ್ಕಟ್ಟಿ ಕೋರ್ಟ್ ಆದೇಶವಿದ್ದರೂ ಜೀವನಾಂಶ ನೀಡದೆ ಒಂದು ವರ್ಷದಿಂದ ವಂಚಿಸಿದ್ದಲ್ಲದೆ, ಅರೆಸ್ಟ್ ವಾರೆಂಟ್ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ನವಾಝ್ (34)  ಎಂಬಾತನಿಗೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬಬ್ಬುಕಟ್ಟೆಯ ಖಾಸಗಿ ಶಾಲೆಯ ಸ್ಕೂಲ್ ಬಸ್ಸು ಚಾಲಕನಾಗಿದ್ದ ನವಾಝ್ ವಿರುದ್ಧ ಆತನ ಮೊದಲ ಪತ್ನಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶದ ದಾವೆ ಹೂಡಿದ್ದರು. ನವಾಝ್ 36 ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಒಂದು ವರ್ಷದ ಹಿಂದೆ ಕೋರ್ಟ್ ಆದೇಶ ಆಗಿತ್ತು. ಆದರೆ ಜೀವನಾಂಶ ನೀಡದೆ ವಂಚನೆ ಮಾಡಿರುವುದಾಗಿ ಮೊದಲ ಪತ್ನಿ ಸೈದಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಸೈದಾಗೆ ಜೀವನಾಂಶವನ್ನು ನೀಡದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ ನವಾಝ್ ವಿರುದ್ಧ ಕಳೆದ ಒಂದು ವರುಷದಿಂದಲೂ ಕೋರ್ಟ್ ವಾರೆಂಟ್ ಗಳನ್ನ ಜಾರಿ ಮಾಡುತ್ತಲೇ ಇತ್ತು. ಸೆ.2ರಂದು ಕೋರ್ಟ್ ನವಾಝ್ ವಿರುದ್ಧ ಮತ್ತೆ ಬಂಧನ ವಾರೆಂಟ್ ಹೊರಡಿಸಿತ್ತು.
ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಪನೀರು ಸಮೀಪದ ಕಾಯರ್ ಪಳಿಕೆ ಎಂಬಲ್ಲಿನ ಮನೆಯೊಂದರಲ್ಲಿ ತಲೆಮರೆಸಿದ್ದ ಆರೋಪಿ ನವಾಝ್ ನನ್ನ ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. 

ಪೊಲೀಸರು ಆರೋಪಿಯನ್ನ ಬಂಧಿಸಿ ಕರಕೊಂಡು ಹೋಗುತ್ತಿರುವ ವೇಳೆ ಮನೆಯಲ್ಲಿದ್ದ ನವಾಝ್ ತಾಯಿ ಜುಬೇದ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಉಳ್ಳಾಲ ಪೊಲೀಸರು ಆರೋಪಿಯ ವಿರುದ್ಧ ಬಂಧನ ವಾರೆಂಟ್ ಇರೋದಾಗಿ ಮಹಿಳೆಯಲ್ಲಿ ಸಮಜಾಯಿಷಿ ನೀಡಿದ್ದರು. ಆದರೂ ಆರೋಪಿಯನ್ನ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುವ ದೃಶ್ಯವನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು "ಯಾವುದೇ ವಾರೆಂಟ್ ಇಲ್ಲದೆ ಉಳ್ಳಾಲದ ಭ್ರಷ್ಟ ಪೊಲೀಸರು ನವಾಝ್ ಎಂಬಾತನನ್ನ ಎಳಕೊಂಡು ಹೋಗುತ್ತಿರೋದಾಗಿ ಬಿಂಬಿಸಿ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು. 

ಜಾಲತಾಣಗಳಲ್ಲಿ ಸುಳ್ಳು ಸಂದೇಶ ಹರಿಬಿಟ್ಟು ಪೊಲೀಸರ ಬಗ್ಗೆ ಅಪನಂಬಿಕೆ ಹುಟ್ಟಿಸುವ ರೀತಿ ಮಾಡಿರುವ ಕೃತ್ಯದ ವಿರುದ್ಧ ಕ್ರಮ ಜರಗಿಸುವಂತೆ ಮಂಗಳೂರು ಕಮೀಷನರ್ ಸುಧೀರ್ ರೆಡ್ಡಿ ಉಳ್ಳಾಲ ಪೊಲೀಸರಿಗೆ ಆದೇಶಿಸಿದ್ದರು. ಕಮಿಷನರ್ ಆದೇಶದಂತೆ ಉಳ್ಳಾಲ ಪೊಲೀಸರು ಆರೋಪಿ ನವಾಝ್ ತಾಯಿ ಜುಬೇದಾ ಮತ್ತು ಆರೋಪಿ ಪರ ವಕೀಲರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. 

ಇದೇ ವೇಳೆ, ನವಾಜ್ ವಿರುದ್ಧ ಕಠಿಣ ಕ್ರಮಕ್ಕೆ ಸೈದಾ ಕೋರ್ಟಿಗೆ ಮನವಿ ಮಾಡಿದ್ದರು. ಇದರಂತೆ, ಸೆ.6ರಂದು ಆರೋಪಿ ನವಾಝ್ ಗೆ ಅಕ್ಟೋಬರ್ 5ರ ವರೆಗೆ ಒಂದು ತಿಂಗಳ ಶಿಕ್ಷೆ ವಿಧಿಸಿ ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

A family court has sentenced a 34-year-old man from Mastikatte to one month in jail for willfully ignoring a court order to pay maintenance to his first wife, and for evading arrest warrants over the past year. The accused, Mohammad Nawaz, a school bus driver at a private institution in Babbukatte, had been ordered by the District Family Court a year ago to pay ₹36,000 as monthly maintenance to his first wife, Saida.