18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಮಹತ್ವದ ತೀರ್ಪು ; 38 ಭಯೋತ್ಪಾದಕರಿಗೆ ಮರಣದಂಡನೆ, 11ಮಂದಿಗೆ ಜೀವಾವಧಿ ಶಿಕ್ಷೆ

07-07-26 03:22 pm       HK News Staffer   ದೇಶ - ವಿದೇಶ

2008ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಪ್ರಕರಣದ 49 ಅಪರಾಧಿಗಳಲ್ಲಿ 38 ಮಂದಿಗೆ ವಿಧಿಸಿದ್ದ ಮರಣದಂಡನೆ ಹಾಗೂ ಉಳಿದ 11 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ. ಜೊತೆಗೆ, ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ, ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಹಮದಾಬಾದ್, ಜು.07: 2008ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಪ್ರಕರಣದ 49 ಅಪರಾಧಿಗಳಲ್ಲಿ 38 ಮಂದಿಗೆ ವಿಧಿಸಿದ್ದ ಮರಣದಂಡನೆ ಹಾಗೂ ಉಳಿದ 11 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ. ಜೊತೆಗೆ, ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಿ, ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎ.ವೈ. ಕೊಗ್ಜೆ ಮತ್ತು ಸಮೀರ್ ಡೇವ್ ಅವರ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹೈಕೋರ್ಟ್ ವಿಶೇಷ ಪೀಠ ರಚಿಸಿತ್ತು. 2025ರ ಮಾರ್ಚ್‌ನಿಂದ ನಿಯಮಿತವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮರಣದಂಡನೆ ದೃಢೀಕರಣ ಅರ್ಜಿ ಹಾಗೂ ಅಪರಾಧಿಗಳ ಮೇಲ್ಮನವಿಗಳ ಜಂಟಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇದೀಗ ವಿಶೇಷ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

ಈ ಪ್ರಕರಣದಲ್ಲಿ ಫೆಬ್ರವರಿ 18, 2022ರಂದು ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿತ್ತು. 38 ಅಪರಾಧಿಗಳಿಗೆ ಮರಣದಂಡನೆ ಹಾಗೂ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಭಾರತೀಯ ಕಾನೂನು ಪ್ರಕಾರ ಕೆಳ ನ್ಯಾಯಾಲಯ ವಿಧಿಸುವ ಮರಣದಂಡನೆಗೆ ಹೈಕೋರ್ಟ್ ಅನುಮೋದನೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇತ್ತು. ಇದೀಗ ಹೈಕೋರ್ಟ್ ಅನುಮೋದನೆ ನೀಡಿರುವುದರಿಂದ ಮರಣದಂಡನೆಗೆ ನ್ಯಾಯಾಂಗ ಮಾನ್ಯತೆ ದೊರೆತಿದೆ. ಆದಾಗ್ಯೂ, ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕಾನೂನುಬದ್ಧ ಅವಕಾಶ ಇನ್ನೂ ಇದೆ.

2008ರ ಜುಲೈ 26ರಂದು ಅಹಮದಾಬಾದ್ ನಗರದ ವಿವಿಧ ಭಾಗಗಳಲ್ಲಿ ಕೇವಲ 70 ನಿಮಿಷಗಳ ಅಂತರದಲ್ಲಿ 21 ಬಾಂಬ್ ಸ್ಫೋಟಗಳು ನಡೆದಿದ್ದವು. ಸಿವಿಲ್ ಆಸ್ಪತ್ರೆ, ಎಲ್.ಜಿ. ಆಸ್ಪತ್ರೆ, ಬಸ್‌ಗಳು, ಬೈಸಿಕಲ್‌ಗಳು, ಕಾರುಗಳು ಹಾಗೂ ಜನಸಂದಣಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ಈ ಭೀಕರ ದಾಳಿಯಲ್ಲಿ 56 ಮಂದಿ ಮೃತಪಟ್ಟರೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸ್ಫೋಟಗಳ ಬಳಿಕ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಲಾದ ಇ-ಮೇಲ್‌ಗಳ ಮೂಲಕ ಇಂಡಿಯನ್ ಮುಜಾಹಿದೀನ್ ಸಂಘಟನೆ ದಾಳಿಯ ಹೊಣೆ ಹೊತ್ತಿತ್ತು.

ದೇಶದ ಅತಿದೊಡ್ಡ ಭಯೋತ್ಪಾದನಾ ಪ್ರಕರಣಗಳಲ್ಲಿ ಒಂದಾಗಿ ಪರಿಗಣಿಸಲಾದ ಈ ಪ್ರಕರಣದಲ್ಲಿ ಸುದೀರ್ಘ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬಳಿಕ ವಿಶೇಷ ನ್ಯಾಯಾಲಯ 49 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಇದೀಗ ಹೈಕೋರ್ಟ್ ಕೂಡ ಆ ತೀರ್ಪನ್ನು ಎತ್ತಿಹಿಡಿಯುವ ಮೂಲಕ, 18 ವರ್ಷಗಳ ಕಾನೂನು ಹೋರಾಟಕ್ಕೆ ಮಹತ್ವದ ಅಂತ್ಯ ಹಾಡಿದೆ.