ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ ಜೀವ ಉಳಿಸಿಕೊಂಡ ರೈತ

07-07-26 09:02 pm       HK News Staffer   ಕರ್ನಾಟಕ

ಮೈಸೂರಿನ ಸರಗೂರು ತಾಲೂಕಿನ ಕೋಹಳ ಗ್ರಾಮದ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ತಾಯಿ ಹುಲಿ ದಾಳಿಗೆ ಯತ್ನಿಸಿದ ಘಟನೆ ಭಾರೀ ಆತಂಕ ಸೃಷ್ಟಿಸಿದೆ. ಕ್ಷಣಮಾತ್ರದ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ರೈತ ಪ್ರಾಣಾಪಾಯದಿಂದ ಪಾರಾಗಿದ್ದು, ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿಯನ್ನು ಸೆರೆಹಿಡಿಯಲು ಬೋನ್ ಅಳವಡಿಸಿದೆ.

ಮೈಸೂರು, ಜು.07: ಮೈಸೂರಿನ ಸರಗೂರು ತಾಲೂಕಿನ ಕೋಹಳ ಗ್ರಾಮದ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ತಾಯಿ ಹುಲಿ ದಾಳಿಗೆ ಯತ್ನಿಸಿದ ಘಟನೆ ಭಾರೀ ಆತಂಕ ಸೃಷ್ಟಿಸಿದೆ. ಕ್ಷಣಮಾತ್ರದ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ರೈತ ಪ್ರಾಣಾಪಾಯದಿಂದ ಪಾರಾಗಿದ್ದು, ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿಯನ್ನು ಸೆರೆಹಿಡಿಯಲು ಬೋನ್ ಅಳವಡಿಸಿದೆ.

ದೆಗ್ಗಲ್‌ಹುಂಡಿ ಗ್ರಾಮದ ರಾಜು ಎಂಬ ರೈತ, ಕೋಹಳ ಗ್ರಾಮದ ವ್ಯಾಪ್ತಿಯಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಜಮೀನಿನ ಪೊದೆಯೊಳಗೆ ಏಕಾಏಕಿ ಶಬ್ದ ಕೇಳಿಬಂದಿದ್ದು, ಅದನ್ನು ಕಾಡುಹಂದಿ ಇರಬಹುದೆಂದು ಭಾವಿಸಿದ ರಾಜು ಜೋರಾಗಿ ಕೂಗಿದ್ದಾರೆ. ಆದರೆ ಕ್ಷಣಾರ್ಧದಲ್ಲೇ ಪೊದೆಯಿಂದ ಎರಡು ಮರಿಗಳೊಂದಿಗೆ ಹೊರಬಂದ ತಾಯಿ ಹುಲಿ ಗರ್ಜನೆ ಮಾಡಿ ದಾಳಿಗೆ ಮುಂದಾಗಿದೆ.

ಹುಲಿಯನ್ನು ಕಂಡು ಬೆಚ್ಚಿಬಿದ್ದ ರಾಜು ಜೋರಾಗಿ ಕಿರುಚುತ್ತಾ ಸಮೀಪದಲ್ಲಿದ್ದ ಮರವನ್ನು ಏರಿ ಕುಳಿತುಕೊಂಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮರದ ಮೇಲೆಯೇ ಜೀವ ಭಯದಲ್ಲಿ ಕಳೆದ ಅವರು, ಹುಲಿ ಸ್ಥಳದಿಂದ ತೆರಳಿದ ಬಳಿಕವೇ ಕೆಳಗಿಳಿಯುವ ಧೈರ್ಯ ಮಾಡಿದ್ದಾರೆ.

ಅಷ್ಟರಲ್ಲೇ ಅಪಾಯ ಮುಗಿದಿರಲಿಲ್ಲ. ಬಳಿಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಂದಿಗೆ ಮಾತನಾಡುತ್ತಿದ್ದ ವೇಳೆ ತಾಯಿ ಹುಲಿಯ ಮರಿ ಮತ್ತೆ ರಾಜುವಿನತ್ತ ದಾಳಿಗೆ ಯತ್ನಿಸಿದೆ. ಕೈಯಲ್ಲಿದ್ದ ಮಚ್ಚನ್ನು ಬೀಸುತ್ತಾ ಜೋರಾಗಿ ಕಿರುಚಿದ ರಾಜು, ಮರಿಹುಲಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಮರಿಹುಲಿ ಕಾಡಿನತ್ತ ಓಡಿ ಹೋಗಿದೆ ಎಂದು ರಾಜು ತಿಳಿಸಿದ್ದಾರೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಎಫ್ ಕೆ. ಪರಮೇಶ್ ಮಾತನಾಡಿ, ರೈತನ ಮೇಲೆ ಹುಲಿ ದಾಳಿ ಯತ್ನಿಸಿರುವ ಮಾಹಿತಿ ಬಂದ ತಕ್ಷಣ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹುಲಿಯನ್ನು ಸೆರೆಹಿಡಿಯಲು ಬೋನ್ ಅಳವಡಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಗ್ರಾಮಸ್ಥರು ಹಾಗೂ ರೈತರು ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಜಮೀನುಗಳತ್ತ ತೆರಳದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಹುಲಿ ಚಲನವಲನ ಮುಂದುವರಿದಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನು ಎರಡು ದಿನಗಳ ಹಿಂದಷ್ಟೇ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಸಮೀಪ ರೈತ ಮತ್ತು ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದ 12 ವರ್ಷದ ತಾಯಿ ಹುಲಿ ಹಾಗೂ ಅದರ 25 ದಿನಗಳ ಐದು ಮರಿಗಳನ್ನು ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿತ್ತು. ಈ ಘಟನೆಯ ಬೆನ್ನಲ್ಲೇ ಮತ್ತೊಮ್ಮೆ ಹುಲಿ ದಾಳಿ ಯತ್ನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.