ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ್ಯಂತ್ರ ನಡೆಸಿದವರು ಯಾರೆಂದು ಬೇಕಲ್ವಾ? ಆಸ್ತಿಕರ ನೋವಿನ ಬಗ್ಗೆ ಪ್ರಕಾಶ್ ರಾಜ್ ಕ್ಷಮೆ ಕೇಳ್ತಾರಾ..? ಸೂಲಿಬೆಲೆ ಕಣಕ್ಕೆ

17-06-26 10:12 pm       HK News Staffer   ಕರ್ನಾಟಕ

ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಹಾಗೂ ಅಪಪ್ರಚಾರ ಪ್ರಕರಣದಲ್ಲಿ ಹಲವು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿವೆ.

ಬೆಂಗಳೂರು, ಜೂನ್ 17: ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ಹಾಗೂ ಅಪಪ್ರಚಾರ ಪ್ರಕರಣದಲ್ಲಿ ಹಲವು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿವೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿ, ನಟ ಪ್ರಕಾಶ್ ರಾಜ್ ನೀಡಿರುವ ಸ್ಪಷ್ಟನೆ ಮತ್ತು ಎಸ್ಐಟಿ ತನಿಖೆ ನಡುವೆಯೇ ಇದೀಗ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಹೆಸರಲ್ಲಿ ಚಕ್ರವರ್ತಿ ಸೂಲಿಬೆಲೆ ಕಣಕ್ಕಿಳಿದಿದ್ದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಕ್ರವರ್ತಿ ಸೂಲಿಬೆಲೆ, ಧರ್ಮಸ್ಥಳ ಸೇರಿದಂತೆ ರಾಜ್ಯದ ಹಲವು ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಸಂಘಟಿತ ಷಡ್ಯಂತ್ರ ನಡೆದಿರುವ ಅನುಮಾನ ವ್ಯಕ್ತಪಡಿಸಿದರು. “ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲು ಪ್ರಯತ್ನಿಸಲಾಗಿದೆ. ಚಿನ್ನಯ್ಯನಿಗೆ ಆಮಿಷ ಒಡ್ಡಲಾಗಿದೆ ಎಂದು ಆತನೇ ನ್ಯಾಯಾಲಯದಲ್ಲಿ ಹೇಳಿದ್ದಾನೆ. ಇದು ಕೇವಲ ಸರ್ಕಾರಕ್ಕೆ ಮಾತ್ರವಲ್ಲ, ರಾಜ್ಯದ ಏಳು ಕೋಟಿ ಜನರಿಗೆ ಮಾಡಿದ ಮೋಸ” ಎಂದು ಆರೋಪಿಸಿದರು.

ಪ್ರಕಾಶ್ ರಾಜ್ ವಿರುದ್ಧ ಪ್ರಶ್ನೆಗಳ ಸುರಿಮಳೆ 

ಇದೇ ವೇಳೆ ನಟ ಪ್ರಕಾಶ್ ರಾಜ್ ಅವರ ಮಾತುಗಳನ್ನು ಉಲ್ಲೇಖಿಸಿದ ಸೂಲಿಬೆಲೆ, “ಚಿನ್ನಯ್ಯನಿಗೆ ‘ನಾನು ನಿನ್ನ ತಬ್ಬಿಕೊಳ್ಳುತ್ತೇನೆ’ ಎಂದು ಪ್ರಕಾಶ್ ರಾಜ್ ಹೇಳಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಅವರ ಉದ್ದೇಶ ಏನಿತ್ತು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ವೀರೇಂದ್ರ ಹೆಗ್ಗಡೆ ಅವರನ್ನು ‘ಜಂಟಲ್‌ಮ್ಯಾನ್’ ಎಂದು ಹೇಳುವ ಪ್ರಕಾಶ್ ರಾಜ್, ಧರ್ಮಸ್ಥಳದ ವಿರುದ್ಧ ಮೂಡಿದ ಅನುಮಾನಗಳಿಂದ ಜನರ ಆಸ್ತಿಕತೆಗೆ ಉಂಟಾದ ನೋವಿನ ಬಗ್ಗೆ ಕ್ಷಮೆ ಕೇಳುತ್ತಾರೆಯೇ?” ಎಂದು ಪ್ರಶ್ನಿಸಿದರು.

“ಪ್ರಕಾಶ್ ರಾಜ್ ಕರೆ ಮಾಡಿದ್ದು ನಿಜ

ಪ್ರಕಾಶ್ ರಾಜ್ ತಮ್ಮ ಸುದ್ದಿಗೋಷ್ಠಿಯಲ್ಲಿ ಚಿನ್ನಯ್ಯನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದನ್ನು ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿದ ಸೂಲಿಬೆಲೆ, “ಚಿನ್ನಯ್ಯನೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಗೊತ್ತಾದ ಬಳಿಕ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಯಾವ ಕ್ರಮ ಕೈಗೊಂಡರು? ಈ ವಿಚಾರವನ್ನು ತನಿಖೆಯಲ್ಲಿ ದಾಖಲಿಸಿದ್ದಾರೆಯೇ?” ಎಂದು ಪ್ರಶ್ನಿಸಿದರು. ಪ್ರಕಾಶ್ ರಾಜ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಚಿನ್ನಯ್ಯನಿಂದ ತಮಗೆ ಕರೆ ಬಂದಿದ್ದನ್ನು ಒಪ್ಪಿಕೊಂಡಿದ್ದರು. ಆದರೆ, “ನಾನು ಕೇವಲ ಜವಾಬ್ದಾರಿಯುತ ನಾಗರಿಕನಾಗಿ ಆತನ ಧ್ವನಿ ಸಂದೇಶವನ್ನು ಪೊಲೀಸ್ ಅಧಿಕಾರಿಗಳಿಗೆ ತಲುಪಿಸಿದ್ದೇ ಹೊರತು, ಯಾವುದೇ ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ. 200 ಕೋಟಿ ರೂ. ಎಲ್ಲಿಂದ ತರಲಿ? ಧರ್ಮಸ್ಥಳದ ವಿರುದ್ಧ ನಾನು ಯಾಕೆ ಅಪಪ್ರಚಾರ ಮಾಡಲಿ?” ಎಂದು ಸ್ಪಷ್ಟನೆ ನೀಡಿದ್ದರು.

“ಎಲ್ಲಿದೆ ಮೂಳೆಗಳ ರಾಶಿ?” ವಸಂತ್ ಗಿಳಿಯಾರ್ ಪ್ರಶ್ನೆ

ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ಸದಸ್ಯ ವಸಂತ್ ಗಿಳಿಯಾರ್ ಮಾತನಾಡಿ, “ಮೂಳೆಗಳ ರಾಶಿ ಸಿಕ್ಕಿದೆ ಎಂದು ಯೂಟ್ಯೂಬ್‌ಗಳಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆಯಿತು. ಆದರೆ ಆ ಮೂಳೆಗಳ ರಾಶಿ ಎಲ್ಲಿದೆ? ಸುಳ್ಳು ವರದಿಗಳನ್ನು ಆರಂಭದಲ್ಲೇ ಎಸ್ಐಟಿ ತಡೆದಿದ್ದರೆ ಇಷ್ಟು ಹಾನಿಯಾಗುತ್ತಿರಲಿಲ್ಲ” ಎಂದು ಆರೋಪಿಸಿದರು. ಅಲ್ಲದೆ, “ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಕಿವಿಗೆ ಹೆಡ್‌ಫೋನ್ ಹಾಕಿ ನಿರ್ದೇಶನ ನೀಡಲಾಗುತ್ತಿತ್ತು ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ಆತ ಮುಖಕ್ಕೆ ಮಾಸ್ಕ್ ಧರಿಸಿ ಸ್ಥಳ ಗುರುತಿಸಲು ಹೋಗುತ್ತಿದ್ದಾಗ ಅತ್ತಿತ್ತ ಓಡಾಡುತ್ತಿದ್ದ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ” ಎಂದು ಹೇಳಿದರು.

ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಹೀಗಾಗಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ವೀರೇಂದ್ರ ಹೆಗ್ಗಡೆ ಅವರಂತಹ ಗೌರವಾನ್ವಿತ ವ್ಯಕ್ತಿಗಳ ವಿರುದ್ಧ ಷಡ್ಯಂತ್ರ ನಡೆಸಿದವರ ಮುಖವಾಡ ಕಳಚಬೇಕು. ಸರ್ಕಾರವು ಈ ತನಿಖೆಯ ಮಧ್ಯಂತರ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಸಂತ್ ಗಿಳಿಯಾರ್ ಆಗ್ರಹಿಸಿದ್ದಾರೆ.

“ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ?”

ವಿಕಾಸ್ ಕುಮಾರ್ ಪುತ್ತೂರು ಮಾತನಾಡಿ, “ಚಿನ್ನಯ್ಯನೇ ಷಡ್ಯಂತ್ರ ನಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಷಡ್ಯಂತ್ರದ ಹಿಂದಿನ ಸೂತ್ರಧಾರರು ಯಾರು ಎಂಬುದು ಬಯಲಾಗಬೇಕು. ಅಂದು ಎಡಪಂಥೀಯರ ಮನವಿಯ ಮೇರೆಗೆ ಎಸ್ಐಟಿ ರಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. ಆ ಎಡಪಂಥೀಯರು ಯಾರು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದರು.