ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ‘ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡಿಸಿ’; 200 ಕೋಟಿ ಬಗ್ಗೆ ತನಿಖೆ ಮಾಡಿ, ಎಸ್‌ಐಟಿ ಮೊರೆ ಹೋದ ಗಿರೀಶ್ ಮಟ್ಟಣ್ಣನವರ್

13-06-26 05:28 pm       HK News Staffer   ಕರಾವಳಿ

ಧರ್ಮಸ್ಥಳದ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನದೇ ತಂಡದ ವಿರುದ್ಧ ತಿರುಗಿ ಬಿದ್ದು, 200 ಕೋಟಿ ರೂ. ಫಂಡಿಂಗ್, ಷಡ್ಯಂತ್ರ ಹಾಗೂ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ, ಇದೀಗ ಗಿರೀಶ್ ಮಟ್ಟಣ್ಣನವರ್ ಪ್ರತಿದಾಳಿ ನಡೆಸಿದ್ದಾರೆ. ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಸೇರಿದಂತೆ ಆತ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿನ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಎಸ್‌ಐಟಿಗೆ ದೂರು ನೀಡಿದ್ದಾರೆ.

ಮಂಗಳೂರು, ಜೂನ್ 13: ಧರ್ಮಸ್ಥಳದ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾಸ್ಕ್‌ಮ್ಯಾನ್ ಚಿನ್ನಯ್ಯ ತನ್ನದೇ ತಂಡದ ವಿರುದ್ಧ ತಿರುಗಿ ಬಿದ್ದು, 200 ಕೋಟಿ ರೂ. ಫಂಡಿಂಗ್, ಷಡ್ಯಂತ್ರ ಹಾಗೂ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ, ಇದೀಗ ಗಿರೀಶ್ ಮಟ್ಟಣ್ಣನವರ್ ಪ್ರತಿದಾಳಿ ನಡೆಸಿದ್ದಾರೆ. ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಸೇರಿದಂತೆ ಆತ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿನ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಎಸ್‌ಐಟಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್ ಹಾಗೂ ಯೂಟ್ಯೂಬರ್ ಅಭಿಷೇಕ್ ಅವರೊಂದಿಗೆ ಚಿನ್ನಯ್ಯ ವಿರುದ್ಧ ದೂರು ಸಲ್ಲಿಸಿದರು. ಬಳಿಕ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, “ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಮಾಡಿರುವ ಆರೋಪಗಳ ಆಧಾರದ ಮೇಲೆ ನಮ್ಮೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ನನ್ನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಬೇಕಿದ್ದರೆ ಲೈವ್ ಆಗಿಯೇ ಮಾಡಲಿ. ಚಿನ್ನಯ್ಯ ಹೇಳಿರುವ 200 ಕೋಟಿ ರೂ. ಹಣದ ಆರೋಪ ಸೇರಿದಂತೆ ಆತ ಸಲ್ಲಿಸಿರುವ ರಿಟ್ ಅರ್ಜಿಯ ಪ್ರತಿಯೊಂದು ಅಂಶದ ಬಗ್ಗೆ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

ಇದಲ್ಲದೆ, ಚಿನ್ನಯ್ಯಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಎಸ್‌ಐಟಿ ಅರ್ಜಿ ಸಲ್ಲಿಸಬೇಕು ಹಾಗೂ ಆತನಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದರು. ಚಿನ್ನಯ್ಯ ಹೇಳಿಕೆಯಂತೆ ತಾವು ಚಂದ್ರಶೇಖರ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದ ವಿಚಾರವನ್ನು ಒಪ್ಪಿಕೊಂಡ ಗಿರೀಶ್ ಮಟ್ಟಣ್ಣನವರ್, “ಪಾಯಿಂಟ್ ತೋರಿಸುವ ಸಂದರ್ಭದಲ್ಲಿ ಚಿನ್ನಯ್ಯಗೆ ಕಣ್ಣು ಮಂಜು ಮಂಜಾಗುತ್ತಿದೆ, ವಿಚಿತ್ರ ಅನುಭವವಾಗುತ್ತಿದೆ ಎಂದು ಹೇಳಿದ್ದ. ಆ ಕಾರಣದಿಂದಲೇ ಮಾಟ-ಮಂತ್ರ ಸಂಬಂಧ ಸಲಹೆ ಪಡೆಯಲು ಚಂದ್ರಶೇಖರ ಸ್ವಾಮೀಜಿ ಅವರ ಬಳಿ ಹೋಗಿದ್ದೆವು. ಆದರೆ ಅವರು ಯಾವುದೇ ಪೊಲೀಸರಿಗೆ ಶಿಫಾರಸು ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.

ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪ್ರಕಾಶ್ ರಾಜ್ ಕರೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಅದಕ್ಕೆ ಅವರೇ ಉತ್ತರ ನೀಡುತ್ತಾರೆ. ಈ ಹೋರಾಟಕ್ಕೆ ನೈತಿಕವಾಗಿ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.

ಇದೇ ವೇಳೆ ಚಿನ್ನಯ್ಯಗೆ ಹಿಂಸೆ ನೀಡಿ ಕೈ-ಕಾಲು ಒತ್ತಿಸಿಕೊಂಡಿದ್ದೇವೆ ಎಂಬ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಗಿರೀಶ್ ಮಟ್ಟಣ್ಣನವರ್, “ಚಿನ್ನಯ್ಯ ನಮ್ಮೊಂದಿಗೆ ತುಂಬಾ ಆತ್ಮೀಯವಾಗಿದ್ದ. ನಾವು ಬೇಡ ಎಂದರೂ ಆತನೇ ಬಂದು ಕಾಲು ಒತ್ತುತ್ತಿದ್ದ. ನನಗೆ ಕಾಲಿನ ನೋವು ಇದ್ದ ಕಾರಣ ನನ್ನ ಪತ್ನಿ ತೈಲ ಕೊಟ್ಟಿದ್ದರು. ಅದರ ಬಗ್ಗೆ ಗೊತ್ತಿದ್ದ ಚಿನ್ನಯ್ಯ ಸ್ವಯಂಪ್ರೇರಿತವಾಗಿ ನನ್ನ ಕಾಲು ಒತ್ತುತ್ತಿದ್ದ. ಇದರಲ್ಲಿ ಯಾವುದೇ ಬಲವಂತ ಅಥವಾ ಹಿಂಸೆ ಇರಲಿಲ್ಲ” ಎಂದು ಸಮರ್ಥಿಸಿಕೊಂಡರು.

ಒಟ್ಟಾರೆಯಾಗಿ, ಧರ್ಮಸ್ಥಳ ಬುರುಡೆ ಪ್ರಕರಣ ಈಗ ಮತ್ತಷ್ಟು ಸಂಕೀರ್ಣ ಸ್ವರೂಪ ಪಡೆದುಕೊಂಡಿದ್ದು, ಚಿನ್ನಯ್ಯ ಮತ್ತು ಆತನ ವಿರುದ್ಧ ಆರೋಪ ಕೇಳಿಬರುತ್ತಿರುವವರ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇದೀಗ ಎಸ್‌ಐಟಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.