ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್ ನಾಯಕರಲ್ಲಿ ಕ್ಷಮೆಯಾಚಿಸಿದ ಜಮೀರ್‌ ; ಮಂತ್ರಿ ಸ್ಥಾನ ಸಿಗದಿದ್ದರೂ 2028ರ ಚುನಾವಣೆಗೆ ಕೆಲಸ ಮಾಡ್ತೀನಿ, ಸಚಿವ ಸ್ಥಾನಕ್ಕೆ ಮತ್ತೆ ಜಮೀರ್ ಲಾಬಿ !

28-07-26 08:12 pm       HK News Staffer   ಕರ್ನಾಟಕ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಚಟುವಟಿಕೆ ತಾರಕಕ್ಕೇರುತ್ತಿರುವ ನಡುವೆಯೇ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ರಾಜಕೀಯ ಹೇಳಿಕೆ ನೀಡಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ಆಡಿಯೋ ವಿವಾದದಿಂದ ತಮಗೆ ರಾಜಕೀಯವಾಗಿ ಹಿನ್ನಡೆಯಾಗಿರುವುದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿರುವ ಅವರು, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಬಳಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಜುಲೈ 28: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಚಟುವಟಿಕೆ ತಾರಕಕ್ಕೇರುತ್ತಿರುವ ನಡುವೆಯೇ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ರಾಜಕೀಯ ಹೇಳಿಕೆ ನೀಡಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ಆಡಿಯೋ ವಿವಾದದಿಂದ ತಮಗೆ ರಾಜಕೀಯವಾಗಿ ಹಿನ್ನಡೆಯಾಗಿರುವುದನ್ನು ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿರುವ ಅವರು, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಬಳಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಜಮೀರ್, "ವೈರಲ್ ಆಗಿರುವ ಆಡಿಯೋದಲ್ಲಿ ಕೇಳಿಬರುವ ಧ್ವನಿ ನನ್ನದಲ್ಲ. ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸತ್ಯ ಹೊರಬರಲಿದೆ. ಆದರೂ ಈ ವಿವಾದದಿಂದ ವೈಯಕ್ತಿಕ ಹಾಗೂ ರಾಜಕೀಯವಾಗಿ ನನಗೆ ಹಿನ್ನಡೆಯಾಗಿದೆ ಎಂಬುದು ಸತ್ಯ" ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇರಬಹುದು ಎಂಬ ನಿರೀಕ್ಷೆ ಇತ್ತಾದರೂ ಅದು ಈಡೇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಹೈಕಮಾಂಡ್ ಯಾರನ್ನೂ ಒತ್ತಾಯದ ಮೇರೆಗೆ ಮಂತ್ರಿಯನ್ನಾಗಿ ಮಾಡುವುದಿಲ್ಲ. ಪಕ್ಷಕ್ಕೆ ಹಾಗೂ ಜನರಿಗೆ ಯಾರು ಉಪಯುಕ್ತರಾಗುತ್ತಾರೆ ಎಂಬುದನ್ನು ಆಂತರಿಕ ಸಮೀಕ್ಷೆಯ ಮೂಲಕ ಪರಿಶೀಲಿಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಸಂಬಂಧದ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೂ ತೆರೆ ಎಳೆದ ಜಮೀರ್, "ನಾನು ಪಕ್ಷಕ್ಕೆ ಅಥವಾ ಸಿದ್ದರಾಮಯ್ಯ ಅವರಿಗೆ ಎಂದಿಗೂ ದ್ರೋಹ ಮಾಡಿಲ್ಲ. ನನ್ನ ವಿರುದ್ಧ ಕೆಲವರು ಸುಳ್ಳು ಪ್ರಚಾರ ನಡೆಸಿದ್ದಾರೆ. ಒಂದು ವೇಳೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಹಿರಿಯ ನಾಯಕರ ಬಳಿ ಕ್ಷಮೆ ಕೇಳಿದ್ದೇನೆ" ಎಂದು ಹೇಳಿದರು.

ಇತ್ತೀಚೆಗೆ ನಡೆದ ದಾವಣಗೆರೆ ಉಪಚುನಾವಣೆ ಸಂಬಂಧವೂ ತಮ್ಮ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಆರೋಪಿಸಿದ ಅವರು, ಆರಂಭದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರೂ, ನಂತರ ಮೃತ ನಾಯಕನ ಕುಟುಂಬಕ್ಕೆ ಟಿಕೆಟ್ ನೀಡುವ ನಿರ್ಧಾರವನ್ನು ತಾವು ಬೆಂಬಲಿಸಿದ್ದಾಗಿ ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಎದುರಾಗುವ ಅಡೆತಡೆಗಳ ಕುರಿತು ಮಾತನಾಡಿದ ಜಮೀರ್, "ಹೊರಗಿನವರು ವಿರೋಧಿಸುವುದಕ್ಕಿಂತ ನಮ್ಮವರೇ ಬೆಳೆಯುವುದನ್ನು ಸಹಿಸುವುದಿಲ್ಲ. ಇದು ಒಂದೇ ಸಮುದಾಯದ ಸಮಸ್ಯೆಯಲ್ಲ, ಎಲ್ಲ ಜಾತಿಗಳಲ್ಲೂ ಇದೇ ಪರಿಸ್ಥಿತಿ ಇದೆ" ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಸೇರ್ಪಡೆ ಕುರಿತ ಊಹಾಪೋಹಗಳನ್ನು ಸಂಪೂರ್ಣ ತಳ್ಳಿ ಹಾಕಿದ ಅವರು, "ಕಾಂಗ್ರೆಸ್ ನನಗೆ ಗೌರವ ಮತ್ತು ಸಚಿವ ಸ್ಥಾನ ನೀಡಿದೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ. ಮಂತ್ರಿ ಸ್ಥಾನ ಸಿಗದಿದ್ದರೂ 2028ರ ಚುನಾವಣೆಗೆ ಪಕ್ಷದ ಕೆಲಸ ಮಾಡಲು ಹೈಕಮಾಂಡ್ ಹೇಳಿದರೆ ನಾನು ಸಿದ್ಧ" ಎಂದು ತಮ್ಮ ನಿಲುವು ಪುನರುಚ್ಚರಿಸಿದರು.