ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದ ಪೊಲೀಸ್ ಇನ್ಸ್‌ಪೆಕ್ಟರ್ ; ಹೇಯ್ ಈ ರೀತಿ ಮಾತನಾಡಿದ್ರೆ ನಾನೇ ಠಾಣೆಗೆ ನುಗ್ತೀನಿ ಎಂದ ಪ್ರತಾಪ್ ಸಿಂಹ

12-09-26 09:36 pm       HK News Staffer   ಕರ್ನಾಟಕ

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂಬ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ್ ಮಾತು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೈಸೂರು, ಸೆ 12: ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂಬ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ್ ಮಾತು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಧನಂಜಯ್ ಆಡಿರುವ ಮಾತುಗಳು ಹಿಂದೂ ಯುವಕರನ್ನು ಕೆರಳಿಸಿದೆ. ಮಸೀದಿ ಮುಂದೆ ಮೆರವಣಿಗೆ ಹೋಗುವಂತಿಲ್ಲ. ಅಕಸ್ಮಾತ್ ಹೋದರ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹೆದರಿಸಿದ್ದಾರೆ.

ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರ್ತಿವಿ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.ಗಣೇಶ ಮೆರವಣಿಗೆ ಯಾವ ರಸ್ತೆಯಲ್ಲಿ ಹೋಗುತ್ತೆ ಅಂತ ಮೊದಲೇ ಹೇಳ್ಬೇಕು" ಡಿಜೆ ಮಾದರಿ ಸ್ಪೀಕರ್ ಬಳಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಇನ್ಸ್​​ಪೆಕ್ಟರ್ ಧನಂಜಯ್​ ಅವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಇನ್ನೊಂದು ಸಲ ಆ ರೀತಿ ಮಾತನಾಡಿದ್ರೆ ಠಾಣೆಗೆ ನುಗ್ಗುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಇನ್ಸ್ ಪೆಕ್ಟರ್ ಅವರು ರೋಡ್ ಸೈಡ್ ತರ್ಲೆ ರೀತಿ ಮಾತನಾಡಿದ್ದಾರೆ. ಅದು ಸರಿಯಲ್ಲ ಎಂದರು.

ಆ ಮನುಷ್ಯ ವೀರಾವೇಶದಿಂದ ಮಾತನಾಡಿದ್ದಾರೆ. ಅಂತಹ ಬಹಳಷ್ಟು ಮಂದಿಯನ್ನು ನಾವು ನೋಡಿದ್ದೇವೆ. ಇನ್ಸ್ ಪೆಕ್ಟರ್ ಆದವರು ಗೌರವಯುತವಾಗಿ ಮಾತನಾಡಬೇಕು. ಆ ಸ್ಥಾನಕ್ಕೆ ತಕ್ಕಂತೆ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.