ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪಶ್ಚಿಮ ಬಂಗಾಳ ಮೂಲದ ಇಬ್ಬರು ಏಜಂಟರ ಬಂಧನ, ಕೊಲ್ಕತ್ತಾಕ್ಕೆ ತೆರಳಿದ ಮಂಗಳೂರು ಪೊಲೀಸರು

14-07-26 01:01 pm       HK News Staffer   ಕ್ರೈಂ

ಮಂಗಳೂರಿನಲ್ಲಿ ನಾಲ್ಕು ದಿನಗಳ ಅಂತರದಲ್ಲಿ 19 ಬಾಂಗ್ಲಾದೇಶ ಮೂಲದ ಕಾರ್ಮಿಕರು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕಾರ್ಮಿಕರನ್ನು ಕಟ್ಟಡ ಕೆಲಸಕ್ಕೆ ಪೂರೈಕೆ ಮಾಡುತ್ತಿರುವ ಏಜಂಟರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಇದರಂತೆ, ಉರ್ವಾ ಪೊಲೀಸರು ಇಬ್ಬರು ಪಶ್ಚಿಮ ಬಂಗಾಳ ಮೂಲದ ಏಜಂಟರನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಂಗಳೂರು, ಜುಲೈ 14: ಮಂಗಳೂರಿನಲ್ಲಿ ನಾಲ್ಕು ದಿನಗಳ ಅಂತರದಲ್ಲಿ 19 ಬಾಂಗ್ಲಾದೇಶ ಮೂಲದ ಕಾರ್ಮಿಕರು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕಾರ್ಮಿಕರನ್ನು ಕಟ್ಟಡ ಕೆಲಸಕ್ಕೆ ಪೂರೈಕೆ ಮಾಡುತ್ತಿರುವ ಏಜಂಟರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಇದರಂತೆ, ಉರ್ವಾ ಪೊಲೀಸರು ಇಬ್ಬರು ಪಶ್ಚಿಮ ಬಂಗಾಳ ಮೂಲದ ಏಜಂಟರನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ನಿವಾಸಿಗಳಾದ ದಿಲ್ವಾರ್ ಹುಸೇನ್(29) ಮತ್ತು ಮೊಯ್ದುಲ್ ಇಸ್ಲಾಂ (35) ಬಂಧಿತರು. ಇವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಇದೇ ವೇಳೆ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್, ಪಶ್ಚಿಮ ಬಂಗಾಳ ಮೂಲದ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಬಾಂಗ್ಲಾ ಮೂಲದ ಕಾರ್ಮಿಕರನ್ನು ಪೂರೈಕೆ ಮಾಡುತ್ತಿರುವುದು, ಅವರಿಗೆ ಅಕ್ರಮವಾಗಿ ದಾಖಲೆಗಳನ್ನು ಮಾಡಿಕೊಡುತ್ತಿರುವ ವಿಚಾರದಲ್ಲಿ ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಮಂಗಳೂರಿನ ಪೊಲೀಸರ ತಂಡ ಈಗಾಗಲೇ ಕೊಲ್ಕತ್ತಾಕ್ಕೆ ತೆರಳಿದ್ದು, ಅಲ್ಲಿಂದ ಕಾರ್ಮಿಕರನ್ನು ಪೂರೈಕೆ ಮಾಡುತ್ತಿರುವ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ತಿಳಿದುಬಂದ ಮಾಹಿತಿ ಪ್ರಕಾರ, ಮೊಯ್ದೀನ್ ಇಸ್ಲಾಂ, ರಸೂಲ್ ಇಸ್ಲಾಂ ಮತ್ತು ದಿಲ್ವಾರ್ ಹುಸೈನ್ ಎಂಬವರು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಕಡೆಯಿಂದ ಮಂಗಳೂರಿಗೆ ಕಾರ್ಮಿಕರನ್ನು ಪೂರೈಸುತ್ತಿದ್ದಾರೆ. ಇವರಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೂ ಹಲವರು ಈ ಸಂಚಿನಲ್ಲಿ ತೊಡಗಿರುವ ಶಂಕೆಯಲ್ಲಿ ತನಿಖೆ ಮುಂದುವರಿದಿದೆ.

ಉರ್ವಾ ಠಾಣೆ ವ್ಯಾಪ್ತಿಯ ಕುಂಟಿಕಾನ ಮತ್ತು ಕೋಡಿಕಲ್ ನಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಒಟ್ಟು 11 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಪರಿಶೀಲನೆ ವೇಳೆ ಬಾಂಗ್ಲಾ ಮೂಲದವರು ಎನ್ನುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಇಬ್ಬರು ಓಡಿ ಪರಾರಿಯಾಗಿದ್ದಾರೆಂಬ ಮಾಹಿತಿ ಇದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕರ್ನಾಟಕ ಕರಾವಳಿ ಮತ್ತು ಕೇರಳದಲ್ಲಿ ಅತಿ ಹೆಚ್ಚು ಬಾಂಗ್ಲಾ ಮೂಲದವರು ಕಟ್ಟಡ ನಿರ್ಮಾಣ ಇನ್ನಿತರ ಕೆಲಸಕ್ಕೆ ಬಂದು ಇಲ್ಲಿಯೇ ಉಳಿದುಕೊಂಡಿದ್ದಾರೆ. ಸದ್ಯ ಎಸ್ಐಆರ್ ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಶಂಕೆಯ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.