ಬಿಡದಿ ಟೌನ್‌ಶಿಪ್‌ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ಅಟ್ಟಾಡಿಸಿ ಪೊರಕೆಯಲ್ಲಿ ಹೊಡೆದು ಓಡಿಸಿದ ರೈತ ಮಹಿಳೆಯರು, ಅವನ್ಯಾವನು ನಮ್ಮ ಭೂಮಿ ಕಿತ್ತುಕೊಳ್ಳೋಕೆ ಎಂದ ರೈತರು!

13-07-26 07:39 pm       HK News Staffer   ಕ್ರೈಂ

ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೀಗ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರು ಪೊರಕೆ‌ಯಿಂದ ಹಲ್ಲೆ ನಡೆಸಿದ್ದಾರೆ.

ರಾಮನಗರ, ಜುಲೈ 13: ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೀಗ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರು ಪೊರಕೆ‌ಯಿಂದ ಹಲ್ಲೆ ನಡೆಸಿದ್ದಾರೆ.

ಟೌನ್‌ಶಿಪ್‌ಗೆ ಸರ್ವೇ ಮಾಡಲು ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ನೂರಾರು ರೈತರು ಯೋಜನೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಯಾವುದೇ ಕಾರಣಕ್ಕೂ ಸರ್ವೇ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳು ಬಂದಿದ್ದ ಕಾರು ತಡೆದು ಪ್ರತಿಭಟಿಸಿದರು. ‌ಕೆಲವರು ಅಧಿಕಾರಿಗಳ ಕಾರಿಗೆ ಕಲ್ಲು ತೂರಿದರು.

ಯೋಜನೆ ಪರ ಇದ್ದವರು ಸರ್ವೇ ಮಾಡುವಂತೆ ಕೇಳಿಕೊಂಡರು. ಪರ-ವಿರೋಧ ಹೋರಾಟ ವಿಕೋಪಕ್ಕೆ ತೆರಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದರು. ಎರಡೂ ಕಡೆಯವರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಪೊಲೀಸರ ಮಾತಿಗೆ ಜಗ್ಗದೇ ಇದ್ದಾಗ ಮುಂಜಾಗ್ರತಾ ಕ್ರಮವಾಗಿ ಗುಂಪು ಚದುರಿಸಿ, ಅಧಿಕಾರಿಗಳಿಗೆ ಭದ್ರತೆ ನೀಡಿ ಸ್ಥಳದಿಂದ ಕರೆದುಕೊಂಡು ಹೋದರು.

ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ನಾವು ಪ್ರಾಣ ಬೇಕಾದರೂ ಬಿಡುತ್ತೇವೆ, ಟೌನ್‌ ಶಿಪ್​ಗೆ ಜಮೀನು ಬಿಟ್ಟುಕೊಡುವುದಿಲ್ಲ‌ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ನೂರಾರು ರೈತರು ಹಾಗೂ ಮಹಿಳೆಯರು ಸ್ಥಳಕ್ಕೆ ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. "ನಮ್ಮ ಪೂರ್ವಜರ ಜಮೀನು ಕಿತ್ತುಕೊಳ್ಳಲು ಮುಖ್ಯಮಂತ್ರಿ ಡಿಕೆ ಯಾರು? ಅವನ್ಯಾವನು ನಮ್ಮ ಭೂಮಿ ಕಿತ್ತುಕೊಳ್ಳೋಕೆ, ನಮ್ಮ ಜಮೀನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಪ್ರಾಣ ಹೋದರೂ ಸರಿ, ಭೂಮಿ ಬಿಡುವುದಿಲ್ಲ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಟೌನ್‌ಶಿಪ್ ಹೋರಾಟದ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, "ಇದು ವಿಷಾದನೀಯ. ಸರ್ಕಾರದ ಅಧಿಕಾರಿಗಳು ಏಕಾಏಕಿ ಯಾವುದೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಾಗ ಈ ಘಟನೆ ನಡೆದಿದೆ. ರೈತ ಮಹಿಳೆಯರು ಯಾವುದೇ ಕಾರಣಕ್ಕೂ ಕಾನೂನು ಮೀರಬಾರದು. ನಿಮ್ಮ ಜೊತೆ ನಾವಿದ್ದೇವೆ. ಯೋಜನೆ ನಿಲ್ಲಿಸಲು ಕಾನೂನಿನ ಮೂಲಕ ಹಲವು ಪ್ರಯತ್ನಗಳು ನಡೆಯುತ್ತಿವೆ. ನಿಮಗೆ ಚಿಂತೆ ಬೇಡ. ಸರ್ಕಾರದ ಚಿತಾವಣೆಯಿಂದ ಗ್ರಾಮದಲ್ಲಿ ಅಹಿತಕರ ಘಟನೆಯಾಗಿದೆ. ಪೊಲೀಸರು ಕೂಡ ಸಂಯಮದಿಂದ ವರ್ತಿಸಬೇಕು" ಎಂದರು.

ಬಿಡದಿ ಟೌನ್‌ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೇ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಶ್ರೀನಿವಾಸ ಗೌಡ ಅವರು ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್, ಶ್ರೀನಿವಾಸ್ ರಿಂದ ಮಾಹಿತಿ ಪಡೆದು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ನಾವು ಸುಮ್ಮನೆ ನೋಡ್ತಾ ಕೂರಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಮನವಿ ಮಾಡಿದ್ದಾರೆ.