ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು ಕಾ‌ಂಗ್ರೆಸ್ ಹುನ್ನಾರ ನಡೆಸುತ್ತಿದೆಯಾ..? ಗೃಹ ಸಚಿವರು ಜವಾಬ್ದಾರಿಯಿಂದ‌ ನುಣುಚಿಕೊಳ್ಳಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ

11-07-26 04:26 pm       HK News Staffer   ಕರಾವಳಿ

ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದ ಬಾಂಗ್ಲಾದೇಶಿಗಳನ್ನು ಮಂಗಳೂರಿನಲ್ಲಿ ಬಂಧನ ಮಾಡಿರುವುದು ಗಂಭೀರ ವಿಷಯವಾಗಿದ್ದು ಇದು ರಾಜ್ಯದ ಆಂತರಿಕ ಸುರಕ್ಷತೆ ಹಾಗೂ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಜುಲೈ 11: ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದ ಬಾಂಗ್ಲಾದೇಶಿಗಳನ್ನು ಮಂಗಳೂರಿನಲ್ಲಿ ಬಂಧನ ಮಾಡಿರುವುದು ಗಂಭೀರ ವಿಷಯವಾಗಿದ್ದು ಇದು ರಾಜ್ಯದ ಆಂತರಿಕ ಸುರಕ್ಷತೆ ಹಾಗೂ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುತ್ತದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆತಂಕ ವ್ಯಕ್ತಪಡಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅಕ್ರಮವಾಗಿ ಒಳನುಗ್ಗಿದ ಬಾಂಗ್ಲಾನ್ನರಿಗೆ ಉಳಿಗಾಲವಿಲ್ಲದ ಸ್ಥಿತಿಯಾಗಿದೆ. ಇದರ ಪರಿಣಾಮ ಇವರು ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಮಂಗಳೂರು ಅತ್ಯಂತ ಸೂಕ್ಷ್ಮ ಸ್ಥಳವಾಗಿದ್ದು ಇಂತಹ‌ ಪ್ರದೇಶದಲ್ಲಿ ಬಾಂಗ್ಲಾದೇಶಿಗಳು ಅಡಗಿರುವುದು ಹಲವಾರು ಪ್ರಶ್ನೆಗಳನ್ನು ಎತ್ತುತ್ತದೆ. ಇವರು ಅಕ್ರಮವಾಗಿ ದೇಶದೊಳಗೆ ನುಸುಳಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಕಾಂಟ್ರಾಕ್ಟರ್ ಮೂಲಕ ಪಶ್ಚಿಮ ಬಂಗಾಳದಿಂದ ಮಂಗಳೂರಿಗೆ ಬಂದಿದ್ದಾರೆ. 

2011 ರಿಂದಲೂ ರಾಜ್ಯಕ್ಕೆ ಬಾಂಗ್ಲಾದೇಶಿಗಳು ಬರುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಹಿಂದೆಯೂ ರಾಜ್ಯದಲ್ಲಿ ಅಡಗಿರುವ ಬಾಂಗ್ಲಾದೇಶಿಗಳನ್ನು ಪತ್ತೆಹಚ್ಚಿದ ಪ್ರಕರಣಗಳಿವೆ. ಒಂದೆಡೆ ರಾಜ್ಯದಲ್ಲಿ SIR ಪ್ರಕ್ರಿಯೆ ನಡೀತಿದ್ದು ಇನ್ನೊಂದೆಡೆ ರಾಜ್ಯ ಸರಕಾರ‌ PRC ನೀಡಲು ಪ್ರಕ್ರಿಯೆ ಆರಂಭಿಸಿದೆ. ಇದರ ನಡುವೆಯೇ ಬಾಂಗ್ಲಾ ನಿವಾಸಿಗಳ ಪತ್ತೆಯಾಗಿದ್ದು ರಾಜ್ಯದಲ್ಲಿ ಈ ರೀತಿ ಎಷ್ಟು ಬಾಂಗ್ಲಾದೇಶಿಗಳು ಅಡಗಿಕೊಂಡಿದ್ದಾರೆ ಎಂಬ ಬಗ್ಗೆ ತ‌ನಿಖೆ ಆಗಬೇಕು.

ಪಶ್ಚಿಮ ಬಂಗಾಳದ ಮೂಲಕ ಇವರು ಮಂಗಳೂರಿಗೆ ಬಂದು ಮೂರು ತಿಂಗಳಿನಿಂದ ನೆಲೆಸಿದ್ದಾರೆ. ಇವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಯಾವುದೇ ರಾಜ್ಯದ ಏಜೆನ್ಸಿಗಳು ಪ್ರಯತ್ನಿಸಿಲ್ಲ. ರಾಜ್ಯದ ಗೃಹ ಸಚಿವರು ಕೇವಲ ಹೇಳಿಕೆಗಳನ್ನು ಕೊಡುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ನುಸುಳುಕೋರರು ಮಾತ್ರವಲ್ಲ, ಡ್ರಗ್ಸ್, ಸೈಬರ್ ಕ್ರೈಮ್ ಇದೆ. ಯಾವುದರ ಬಗ್ಗೆಯೂ ಗೃಹ ಸಚಿವರು ಗಮನ ಕೊಡುತ್ತಿಲ್ಲ. ತನ್ನ ಕರ್ತವ್ಯ ಲೋಪ, ಜವಾಬ್ದಾರಿಯಿಂದ‌ ನುಣುಚಿಕೊಳ್ಳಲು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಇದೊಂದು ಗೃಹ ಸಚಿವರ ಮೋಡಸ್ ಆಪರೇಂಡಿ ಅಥವಾ ಪ್ಯಾಟರ್ನ್ ಆಗಿದೆ ಎಂದು ಚೌಟ ದೂರಿದರು. 

ಬಾಂಗ್ಲಾ ನಿವಾಸಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ತೋರುತ್ತಿದ್ದು ಅವರನ್ನು ಮತದಾರ ಪಟ್ಟಿಗೆ ಸೇರಿಸಲು ಹುನ್ನಾರ ನಡೆಸುತ್ತಿದೆಯಾ ಎಂಬ ಶಂಕೆ ಬರುತ್ತಿದೆ. ಬಾಂಗ್ಲಾದೇಶಿಯರನ್ನು ಕರೆತಂದು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಹುನ್ನಾರ ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆಯಾ? ಎಂದು ಪ್ರಶ್ನಿಸಿದ ಸಂಸದ ಚೌಟ, ಅಕ್ರಮ ವಲಸಿಗರ ಪತ್ತೆಗಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಾಲಿಸಿ ತರಬೇಕು. ಡಿಟೆಕ್ಟ್ , ಡಿಟೈನ್ ಆ್ಯಂಡ್ ಡಿಪೋರ್ಟ್ ಮಾಡುವಂತಹ ಕೆಲಸ ಆಗಬೇಕಾಗಿದೆ. ಇಲ್ಲೀಗಲ್ ಇಮಿಗ್ರಂಟ್ (ಅಕ್ರಮ ವಲಸೆ) ಕುರಿತು ಸ್ಪಷ್ಟವಾದ ನೀತಿಯನ್ನು ರಾಜ್ಯ ಗೃಹ ಇಲಾಖೆ ರಚಿಸಬೇಕು ಎಂದು ಆಗ್ರಹಿಸಿದರು.