ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹೊಣೆಯನ್ನೂ ಹೊರಬೇಕು ; ಆರೆಸ್ಸೆಸ್- ಬಿಜೆಪಿ ಉತ್ತರದಾಯಿತ್ವ ಬಗ್ಗೆ ಪ್ರಶ್ನಿಸಿದ ಪ್ರಿಯಾಂಕ ಖರ್ಗೆ

10-07-26 07:42 pm       HK News Staffer   ಕರ್ನಾಟಕ

ರಾಮಮಂದಿರ ನಿರ್ಮಾಣದ ಶ್ರೇಯಸ್ಸು ಪಡೆದವರೇ, ದೇಣಿಗೆ ಹಣದ ಕಳ್ಳತನದ ಹೊಣೆಯನ್ನೂ ಹೊತ್ತುಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಪರೋಕ್ಷವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರೇ ಹೊಣೆಯಾಗಬೇಕು ಎಂದು ಟಾಂಗ್ ನೀಡಿದ್ದಾರೆ.

ಬೆಂಗಳೂರು, ಜುಲೈ 10: ರಾಮಮಂದಿರ ನಿರ್ಮಾಣದ ಶ್ರೇಯಸ್ಸು ಪಡೆದವರೇ, ದೇಣಿಗೆ ಹಣದ ಕಳ್ಳತನದ ಹೊಣೆಯನ್ನೂ ಹೊತ್ತುಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಪರೋಕ್ಷವಾಗಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರೇ ಹೊಣೆಯಾಗಬೇಕು ಎಂದು ಟಾಂಗ್ ನೀಡಿದ್ದಾರೆ.

ದೇಣಿಗೆ ಹಣ ಕಳವು ಮಾಡಿದವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಲ್ಲದೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಬಗ್ಗೆ ಬಹಿರಂಗ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕಿದರು. ರಾಮ ಮಂದಿರ ನಿರ್ಮಾಣದ ಶ್ರೇಯಸ್ಸನ್ನು ನೀವು ಪಡೆದಿದ್ದರೆ, 'ಚಂದಾ ಚೋರಿ'ಯ ಶ್ರೇಯಸ್ಸನ್ನೂ ನೀವೇ ಪಡೆಯಬೇಕು. ನೀವು ನೋಂದಾಯಿತ ಸಂಸ್ಥೆಯಲ್ಲದಿದ್ದರೂ 'ದಕ್ಷಿಣೆ' ಪಡೆಯುತ್ತೀರಿ. ಅದರಲ್ಲಿ ಎಷ್ಟು ಹಣ ನಿಮ್ಮ ಬಳಿ ಬಂದಿದೆ? ನಿಮ್ಮೊಳಗೇ ಕುಳಿತು ಚರ್ಚೆ ಮಾಡುವ ಬದಲು ಸಾರ್ವಜನಿಕರ ಮುಂದೆ ಬನ್ನಿ. ಕಳ್ಳರು ಯಾರು, ಎಷ್ಟು ಹಣ ನಿಮ್ಮ ಬಳಿ ಬಂದಿದೆ, ನೀವು ಮತ್ತು ಪ್ರಧಾನಮಂತ್ರಿ ಏಕೆ ಮೌನವಾಗಿದ್ದೀರಿ ಎಂಬುದನ್ನು ತಿಳಿಸಿ. ಮೋಹನ್ ಭಾಗವತ್ ಹಾಗೂ ಉಳಿದವರಿಗೆ ನಾನು ಬಹಿರಂಗ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕುತ್ತೇನೆ ಎಂದು ಹೇಳಿದರು. 

ಇದೇ ವೇಳೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಪ್ರಧಾನಿ ಮೋದಿ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು. ಪ್ರಧಾನಿ ಮೋದಿ ನಡೆಸುವ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, "ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪೇ ಚರ್ಚಾ" ಅಥವಾ "ಒಎಸ್‌ಎಂ (ಆನ್-ಸ್ಕ್ರೀನ್ ಮಾರ್ಕಿಂಗ್) ಪೇ ಚರ್ಚಾ" ಯಾವಾಗ ನಡೆಸುತ್ತಾರೆ ಎಂದು ಪ್ರಶ್ನಿಸಿದರು. ಕಳೆದ 10 ವರ್ಷಗಳಲ್ಲಿ ಸುಮಾರು 90 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. 

ಸರ್ಕಾರ ಅಸಾಮರ್ಥ್ಯದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದಾರೆ. ಇದಕ್ಕೆ ಯಾರು ಹೊಣೆ? ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಲ್ಲಿದ್ದಾರೆ? ಅವರು ಇನ್ನೂ ರಾಜೀನಾಮೆ ನೀಡದಿರುವುದೇಕೆ? ಕಳೆದ 10 ವರ್ಷಗಳಲ್ಲಿ ಸುಮಾರು 90 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ಸರ್ಕಾರಕ್ಕೆ ಅದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಭಾರತದ ಭವಿಷ್ಯವನ್ನು ಹೀಗೆ ನೋಡಿಕೊಳ್ಳುತ್ತೀರಾ? 'ವಿಕಸಿತ ಭಾರತ' ನಿರ್ಮಿಸಬೇಕಾದ ಯುವಜನರೊಂದಿಗೆ ಈ ರೀತಿಯ ವರ್ತನೆಯೇ? ಪ್ರಧಾನ ಮಂತ್ರಿ 'ಪರೀಕ್ಷಾ ಪೇ ಚರ್ಚಾ' ನಡೆಸಲು ಆಸಕ್ತಿ ತೋರಿಸುತ್ತಾರೆ. ಹಾಗಾದರೆ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪೇ ಚರ್ಚಾ' ಅಥವಾ 'ಒಎಸ್‌ಎಂ ಪೇ ಚರ್ಚಾ' ಯಾವಾಗ ನಡೆಸುತ್ತಾರೆ?" ಎಂದು ಪ್ರಶ್ನಿಸಿದರು.