ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾಂಗ್ಲಾನ್ನರ ಪತ್ತೆ ; ಮುಕ್ಕದಲ್ಲಿ ಸುರತ್ಕಲ್ ಪೊಲೀಸರ ಕಾರ್ಯಾಚರಣೆ, ಅಕ್ರಮ ಆಧಾರ್ ಮಾಡಿಸಿಕೊಂಡ ಖದೀಮರು

10-07-26 02:22 pm       HK News Staffer   ಕ್ರೈಂ

ದೇಶಾದ್ಯಂತ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಮೂಲಕ ಬಾಂಗ್ಲಾದೇಶಿಗರ ಪತ್ತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ವೇಳೆ, ಮತದಾರ ಪಟ್ಟಿ ಸೇರದೆ ಕಾರ್ಮಿಕರ ಸೋಗಿನಲ್ಲಿ ಬಂದು ಆಧಾರ್ ಮಾಡಿಸಿ ನೆಲೆ ಕಂಡುಕೊಳ್ಳುತ್ತಿರುವ ಬಾಂಗ್ಲಾ ಮೂಲದ ನಿವಾಸಿಗಳ ಪತ್ತೆಗಾಗಿ ಮಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.‌

ಮಂಗಳೂರು, ಜುಲೈ 10: ದೇಶಾದ್ಯಂತ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಮೂಲಕ ಬಾಂಗ್ಲಾದೇಶಿಗರ ಪತ್ತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ವೇಳೆ, ಮತದಾರ ಪಟ್ಟಿ ಸೇರದೆ ಕಾರ್ಮಿಕರ ಸೋಗಿನಲ್ಲಿ ಬಂದು ಆಧಾರ್ ಮಾಡಿಸಿ ನೆಲೆ ಕಂಡುಕೊಳ್ಳುತ್ತಿರುವ ಬಾಂಗ್ಲಾ ಮೂಲದ ನಿವಾಸಿಗಳ ಪತ್ತೆಗಾಗಿ ಮಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.‌

ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಮುಕ್ಕದಲ್ಲಿ ಕಟ್ಟಡ ಕಾಮಗಾರಿಗೆಂದು ಬಂದು ನೆಲೆ ಕಂಡುಕೊಂಡಿದ್ದ ಎಂಟು ಮಂದಿ ಬಾಂಗ್ಲಾದೇಶಿಗರನ್ನು ಸೆರೆ ಹಿಡಿಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮುಕ್ಕದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಕಟ್ಟಡ ಕಾಮಗಾರಿಗೆ ಬಂದಿದ್ದ ಕಾರ್ಮಿಕರನ್ನು ಪರಿಶೀಲನೆಗೆ ಒಳಪಡಿಸಿದಾಗ ಬಾಂಗ್ಲಾ ಮೂಲದವರು ಅನ್ನುವುದು ಪತ್ತೆಯಾಗಿದೆ.‌

ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದಲ್ಲದೆ, ಸ್ಥಳೀಯ ಏಜಂಟರ ಮೂಲಕ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಇವರನ್ನು ಅಜರುಲ್ ಇಸ್ಲಾಂ, ಮುಹಮ್ಮದ್ ರಕೀಬ್, ಜಾಹಿದ್ ಹುಸೇನ್, ಮಹಮ್ಮದ್ ಬಿಲಾಲ್ ಹುಸೇನ್, ಸೋಯೆಬ್ ಉಲ್ಲಾ, ಮಹಮ್ಮದ್ ಸಂಟುಲ್, ಮೌಕರ್ ಆಲಿ, ಅಜರುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು ಭಾರತದ ಗಡಿಭಾಗ ಬಾಂಗ್ಲಾದ ರಾಜಶಾಹಿ ಎಂಬಲ್ಲಿನ ನಿವಾಸಿಗಳು ಎಂದು ತಿಳಿದುಬಂದಿದೆ.  

ಬಾಂಗ್ಲಾದಿಂದ ಅಕ್ರಮವಾಗಿ ಭಾರತದ ಗಡಿಯಿಂದ ನುಸುಳಿಕೊಂಡು ಪಶ್ವಿಮ ಬಂಗಾಳದ ಮೂಲಕ ಕರ್ನಾಟಕಕ್ಕೆ ಕೂಲಿ ಕಾರ್ಮಿಕರಾಗಿ ಬಂದಿದ್ದು ಇಲ್ಲಿ ಸ್ಥಳೀಯ ಏಜಂಟರ ಮೂಲಕ ಆಧಾರ್ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಇವರ ಬಗ್ಗೆ ವಿದೇಶಿಗರ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.