ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸ್ಪರ್ಶ, ಜುಲೈ 17ಕ್ಕೆ ಮೋದಿಯಿಂದ ಲೋಕಾರ್ಪಣೆ !

13-07-26 09:16 pm       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಜನತೆಯ ಬಹುದಿನಗಳ ಕನಸಾಗಿದ್ದ ಬಂಟ್ವಾಳ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ 'ಅಮೃತ ಭಾರತ ಸ್ಟೇಷನ್‌ ಸ್ಕೀಮ್‌' ಯೋಜನೆಯಡಿ ₹26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಮರುನಿರ್ಮಾಣಗೊಂಡಿರುವ ನಿಲ್ದಾಣವನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಬಂಟ್ವಾಳ, ಜು.13: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಜನತೆಯ ಬಹುದಿನಗಳ ಕನಸಾಗಿದ್ದ ಬಂಟ್ವಾಳ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ 'ಅಮೃತ ಭಾರತ ಸ್ಟೇಷನ್‌ ಸ್ಕೀಮ್‌' ಯೋಜನೆಯಡಿ ₹26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಮರುನಿರ್ಮಾಣಗೊಂಡಿರುವ ನಿಲ್ದಾಣವನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಅಮೃತ ಭಾರತ ಸ್ಟೇಷನ್‌ ಸ್ಕೀಮ್‌ನ ಎರಡನೇ ಹಂತದಡಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಸಂಪೂರ್ಣ ಕಾಯಕಲ್ಪ ನೀಡಲಾಗಿದ್ದು, ನೈಋತ್ಯ ರೈಲ್ವೆ ವಲಯದಲ್ಲಿ ಸಮಗ್ರ ಆಧುನೀಕರಣಗೊಂಡ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಇದು ಒಂದಾಗಿದೆ.

ಈ ಯೋಜನೆಯಡಿ ನಿಲ್ದಾಣವನ್ನು ಕೇವಲ ಸುಂದರಗೊಳಿಸುವುದಲ್ಲದೆ, ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಹಾಗೂ ಆಧುನಿಕ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪ್ರಮುಖ ಸೌಲಭ್ಯಗಳು

  • ಸುಸಜ್ಜಿತ ಹಾಗೂ ವಿಶಾಲವಾದ ವೇಟಿಂಗ್ ಹಾಲ್‌ಗಳು 
  • ನವೀಕರಿಸಿದ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳು 
  • ವಾಹನಗಳ ಸುಗಮ ಸಂಚಾರಕ್ಕೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ 
  • ಪ್ಲಾಟ್‌ಫಾರ್ಮ್‌ಗಳಿಗೆ ಸಂಪೂರ್ಣ ಮೇಲ್ಛಾವಣಿ ಹಾಗೂ ಗುಣಮಟ್ಟದ ನೆಲಹಾಸು 
  • ಕರಾವಳಿಯ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಕಮಾನುಗಳು

ಡಿಜಿಟಲ್ ಸೌಲಭ್ಯಗಳೂ ಲಭ್ಯ

ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಹಲವು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

  • ಉನ್ನತ ಗುಣಮಟ್ಟದ ಎಲ್‌ಇಡಿ ಬೆಳಕಿನ ವ್ಯವಸ್ಥೆ 
  • ಡಿಜಿಟಲ್ ಕೋಚ್ ಇಂಡಿಕೇಶನ್ ಬೋರ್ಡ್‌ಗಳು 
  • ಅತ್ಯಾಧುನಿಕ ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆ 
  • ವಿಶಾಲ ಡಿಜಿಟಲ್ ಗಡಿಯಾರಗಳು 
  • ಸುಂದರ ಗಾರ್ಡನ್ ಹಾಗೂ ಲ್ಯಾಂಡ್‌ಸ್ಕೇಪಿಂಗ್ ಅಭಿವೃದ್ಧಿ 

ದೇಶಾದ್ಯಂತ 75 ನಿಲ್ದಾಣಗಳ ಏಕಕಾಲದ ಲೋಕಾರ್ಪಣೆ

ಅಮೃತ ಭಾರತ ಸ್ಟೇಷನ್ ಯೋಜನೆಯ ಎರಡನೇ ಹಂತದಡಿ ದೇಶದಾದ್ಯಂತ ಮರುನಿರ್ಮಾಣಗೊಂಡಿರುವ 75 ರೈಲ್ವೆ ನಿಲ್ದಾಣಗಳನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಬಂಟ್ವಾಳ ನಿಲ್ದಾಣದ ಜೊತೆಗೆ, ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಮತ್ತು ಅಳ್ನಾವರ ರೈಲ್ವೆ ನಿಲ್ದಾಣಗಳೂ ಇದೇ ವೇಳೆ ಉದ್ಘಾಟನೆಯಾಗಲಿವೆ. ಬಂಟ್ವಾಳ ರೈಲ್ವೆ ನಿಲ್ದಾಣದ ಈ ಆಧುನಿಕ ಮೇಕ್‌ಓವರ್ ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷಿತ, ಸುಲಭ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ.