ಬ್ರೇಕಿಂಗ್ ನ್ಯೂಸ್
20-01-22 08:35 pm Mangalore Correspondent ಕರಾವಳಿ
ಮಂಗಳೂರು, ಜ.20 : ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ನಿಯಂತ್ರಣ ಹೇರಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ 5ಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟರೆ ಆ ಸಂಸ್ಥೆಯನ್ನು ಒಂದು ವಾರದ ಮಟ್ಟಿಗೆ ಮುಚ್ಚಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆದರೆ ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಇಸ್ಪೀಟ್ ದಂಧೆ ನಡೆಸುವವರು ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತೇ ನೀಡಿಲ್ಲ ಎನ್ನುವ ವಿಚಾರ ಹೊರಬಿದ್ದಿದೆ. ಮಂಗಳೂರು ನಗರದಲ್ಲಿ 18 ಕಡೆ ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಇಸ್ಪೀಟ್ ಜೂಜಾಟದ ದಂಧೆ ಪೊಲೀಸರ ಕೃಪಾಶ್ರಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ.
ಇಡೀ ಜಿಲ್ಲೆಯ ಕಾನೂನು, ಸುವ್ಯವಸ್ಥೆ, ಆಡಳಿತ ನೋಡಿಕೊಳ್ಳುವುದು ಜಿಲ್ಲಾಧಿಕಾರಿಯ ಹೊಣೆ. ಹಾಗಾಗಿ ಜಿಲ್ಲಾ ದಂಡಾಧಿಕಾರಿ, ಮ್ಯಾಜಿಸ್ಟ್ರೇಟ್ ಎನ್ನುವ ಹೆಗ್ಗಳಿಕೆ ಜಿಲ್ಲಾಧಿಕಾರಿಗೆ ಇದೆ. ಹಾಗಾಗಿ ಜಿಲ್ಲೆಯಲ್ಲಿ ಯಾವುದೇ ಅವ್ಯವಸ್ಥೆ, ಕಾನೂನು ಮೀರಿದ ದಂಧೆಗಳು ನಡೆಯುತ್ತಿದ್ದರೆ, ಅದಕ್ಕೂ ಹೊಣೆ ಜಿಲ್ಲಾಧಿಕಾರಿಯೇ. ಕೈಕೆಳಗಿನ ಪೊಲೀಸ್ ವ್ಯವಸ್ಥೆ ಮೂಲಕ ಅಕ್ರಮವನ್ನು ಹತ್ತಿಕ್ಕುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದಿರುತ್ತದೆ. ಆಯಾ ಸಂದರ್ಭಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಸರಕಾರ ಹೊರಡಿಸುವ ಆದೇಶ, ಸೂಚನೆಗಳನ್ನು ಪಾಲನೆ ಮಾಡುವುದು, ಪೊಲೀಸ್ ವ್ಯವಸ್ಥೆಯ ಮೂಲಕ ಕಾರ್ಯಗತಗೊಳಿಸುವುದು ಜಿಲ್ಲಾಧಿಕಾರಿ ಕರ್ತವ್ಯ. ಆದರೆ ಮಂಗಳೂರಿನ ರಿಕ್ರಿಯೇಶನ್ ಕ್ಲಬ್ ಮಟ್ಟಿಗೆ ಹೇಳುವುದಾದರೆ, ಜಿಲ್ಲಾಧಿಕಾರಿಯ ಆದೇಶ ಕಾರ್ಯಗತ ಆಗದಂತೆ ಪೊಲೀಸರೇ ಅಡ್ಡಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಾರ್ವಜನಿಕ ಸಭೆ, ಸಮಾರಂಭ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದ್ದರಿಂದ ರಾತ್ರಿಯ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದೆ. ರಾಜ್ಯ ಸರಕಾರದ ಆದೇಶ ಅನ್ವಯ ಜಿಲ್ಲೆಯಲ್ಲಿ ರಿಕ್ರಿಯೇಶನ್ ಕ್ಲಬ್ ಬಂದ್ ಮಾಡುವಂತೆ ಜನವರಿ 12ರಂದು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶವನ್ನು ಕ್ಲಬ್ ಮಾಲೀಕರು ಪಾಲಿಸಿಲ್ಲ. ಆದೇಶ ಜಾರಿ ಮಾಡುವ ಕೆಲಸವನ್ನು ಪೊಲೀಸರು ಮಾಡಿಲ್ಲ. ಯಾಕಂದ್ರೆ, ಪೊಲೀಸರ ಕೈಯನ್ನು ಈ ಕ್ಲಬ್ ಮಾಲೀಕರೇ ಕಟ್ಟಿ ಹಾಕಿದ್ದಾರೆ. ನೇರವಾಗಿ ಹೇಳೋದಾದ್ರೆ, ಪೊಲೀಸರಿಗೆ ಇಂತಿಷ್ಟು ಸಂದಾಯ ಮಾಡಿಯೇ ಇತ್ತೀಚೆಗೆ ಕ್ಲಬ್ ಆರಂಭಿಸಲಾಗಿತ್ತು ಎನ್ನುವ ಮಾಹಿತಿಗಳಿವೆ.

ಇಸ್ಪೀಟ್ ಕ್ಲಬ್ ಹೆಸರಲ್ಲಿ ಬರುತ್ತೆ ಭಾರೀ ಕಮಾಯಿ !
ಹೈಕೋರ್ಟ್ ಆದೇಶ, ಜಿಲ್ಲಾಧಿಕಾರಿ ಜೊತೆಗಿನ ಜಟಾಪಟಿ ಬಳಿಕ ಒಂದು ತಿಂಗಳ ಹಿಂದೆ ಮಂಗಳೂರಿನಲ್ಲಿ ರಿಕ್ರಿಯೇಶನ್ ಕ್ಲಬ್ ಆರಂಭಗೊಂಡಿತ್ತು. ಆದರೆ, ಕ್ಲಬ್ ಆರಂಭಿಸುವಾಗಲೇ ಪೊಲೀಸ್ ಇಲಾಖೆಯ ಮಾಮೂಲಿಯನ್ನು ಹೆಚ್ಚಿಸಲಾಗಿತ್ತು. ಈ ಹಿಂದೆ ತಿಂಗಳಿಗೆ ಐದೂವರೆ ಲಕ್ಷ ಕೊಡುತ್ತಿದ್ದುದನ್ನು ಎಂಟೂವರೆ ಲಕ್ಷಕ್ಕೆ ಏರಿಸಲಾಗಿತ್ತು ಎನ್ನಲಾಗುತ್ತಿದೆ. ಪ್ರತೀ ಕ್ಲಬ್ ಪರವಾಗಿ ಆಯಾ ಠಾಣೆ ಸೇರಿದಂತೆ ಪೊಲೀಸ್ ಇಲಾಖೆಯ ಆಯಕಟ್ಟಿನ ಜವಾಬ್ದಾರಿ ಇದ್ದವರಿಗೆ ಈ ಭಾರೀ ಮೊತ್ತದಲ್ಲಿ ತಲಾ ಇಂತಿಷ್ಟು ಸಂದಾಯ ಆಗಿತ್ತು ಎನ್ನುವ ಮಾಹಿತಿಯನ್ನು ಕ್ಲಬ್ ನಡೆಸುವ ಮಂದಿಯೇ ಹೇಳುತ್ತಾರೆ.

ನಗರ ವ್ಯಾಪ್ತಿಯಲ್ಲಿ ಒಟ್ಟು 18 ಕ್ಲಬ್ ಗಳಿಗೆ ಅನುಮತಿ ನೀಡಲಾಗಿದ್ದು, ಎಲ್ಲ ಕಡೆಯಿಂದಲೂ ಅಡ್ವಾನ್ಸ್ ಆಗಿ ಎರಡು ತಿಂಗಳ ಮಾಮೂಲಿಯನ್ನು ಪಡೆಯಲಾಗಿತ್ತು ಎಂದು ಹೇಳಲಾಗುತ್ತಿದೆ. ಮುಖ್ಯೋಪಾಧ್ಯಾಯರಿಂದ ಹಿಡಿದು ಆಯಕಟ್ಟಿನ ಅಧಿಕಾರಿಗಳಿಗೆ ಮತ್ತು ಆಯಾ ಠಾಣೆಗಳ ಕೆಳಹಂತದ ಅಧಿಕಾರಿ ವರ್ಗದ ವರೆಗೂ ಇಂತಿಷ್ಟು ಪೇಮೆಂಟ್ ಆಗಿದೆ. ಎರಡು ತಿಂಗಳ ಸಂದಾಯ ಮಾಡಿಯೇ ಕ್ಲಬ್ ಆರಂಭಿಸಿದ್ದರಿಂದ ಈಗ ಅವರ ಕುತ್ತಿಗೆ ಹಿಡಿಯಬೇಕು ಅಂದರೆ ಯಾರು ಹಿಡಿಯಬೇಕು? ಜಿಲ್ಲಾಧಿಕಾರಿ ಕ್ಲಬ್ ನಿಲ್ಲಿಸುವಂತೆ ಆದೇಶ ಮಾಡಿದ್ದರೆ, ಅದನ್ನು ಪಾಲಿಸಬೇಕಾದ ಕರ್ತವ್ಯ ಹೊಂದಿರುವ ಪೊಲೀಸರು ಹೊಣೆ ಭಾರದಿಂದ ನುಣುಚಿಕೊಳ್ಳುತ್ತಿದ್ದಾರೆ. ಅಡ್ವಾನ್ಸ್ ಗಿಂಬಳದ ಕಾರಣ ಕೊರೊನಾ ಹತ್ತಿಕ್ಕುವ ಜವಾಬ್ದಾರಿಯಿಂದ ದೂರ ನಿಂತಿದ್ದಾರೆ. ಹೈಗ್ರೇಡೆಡ್ ಅಧಿಕಾರಿಗಳಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಮಾತ್ರ ಇಸ್ಪೀಟ್ ಹಣದಿಂದ ದೂರವುಳಿದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ವಿಶೇಷ ಅಂದ್ರೆ, ತಲಾ 17 ಲಕ್ಷದಂತೆ ಒಂದು ಕ್ಲಬ್ ನಿಂದ ಸಂದಾಯ ಮಾಡಲು ಕೆಲವು ಕ್ಲಬ್ ಮಾಲೀಕರು ಬಡ್ಡಿಗೆ ಹಣ ತೆತ್ತಿದ್ದಾರಂತೆ. ಕೆಲವರು ತಾವು ಬಡ್ಡಿಗೆ ಪಡೆದು ಈ ಮಾಮೂಲಿ ನೀಡಿದ್ದಾರೆ ಎನ್ನುವುದನ್ನು ಚಿಂತೆಯಿಂದ ಹೇಳುತ್ತಿದ್ದಾರೆ. ಕಳೆದ ಬಾರಿಯೂ ಲಾಕ್ಡೌನ್ ಸಂದರ್ಭಗಳಲ್ಲಿ ಭರಪೂರ ಇಸ್ಪೀಟ್ ಕಾರುಬಾರು ನಡೆದಿತ್ತು. ಆದರೆ ಗಿರಾಕಿಗಳ ಹಾಜರಿ ಕಡಿಮೆಯಾಗಿದ್ದು ನಡುವೆ ನಿಲ್ಲಿಸಿದ್ದರಿಂದ ಮಾಮೂಲಿ ಕೊಡುವುದಕ್ಕಿಂತ ಹೆಚ್ಚು ಲಾಭ ಬಂದಿಲ್ವಂತೆ. ಹೀಗಾಗಿ ಈಗ ದೊಡ್ಡ ಮೊತ್ತದ ಬಟವಾಡೆ ಮಾಡಿ, ಮತ್ತೆ ಅರ್ಧಕ್ಕೆ ಕ್ಲಬ್ ನಿಂತು ಬಿಟ್ಟರೆ ಕುತ್ತಿಗೆ ಹಿಚುಕುವ ಸ್ಥಿತಿಯಾದೀತು ಎನ್ನುವುದು ಅವರ ಅಳಲು. ಕ್ಲಬ್ ನೋಂದಣಿ ಮತ್ತು ಅನುಮತಿ ಪ್ರಕಾರ, ರಿಕ್ರಿಯೇಶನ್ ಕ್ಲಬ್ಬಿನ ಸದಸ್ಯರಿಗೆ ಮಾತ್ರ ಅಲ್ಲಿ ರಮ್ಮಿ ಆಡಲು ಅನುಮತಿಯಿರುತ್ತದೆ. ಆದರೆ ಏಳು ಮಂದಿ ಸದಸ್ಯರ ಕ್ಲಬ್ಬಿನಲ್ಲಿ ಅವರಷ್ಟೇ ಆಡಿದರೆ ಪೊಲೀಸರಿಗೆ ಮಾಮೂಲಿ ಕೊಡುವ ಪ್ರಮೇಯ ಬರುವುದಿಲ್ಲ. ಮಂಗಳೂರಿನ ಬಾರ್, ಪಬ್ ಗಳ ಮೇಲ್ಭಾಗದಲ್ಲಿ, ಕೆಲವು ಕಟ್ಟಡಗಳ ಅಡಿಭಾಗದಲ್ಲಿ ಈ ರೀತಿಯ ರಾಜಾರೋಷ ಇಸ್ಪೀಟ್ ಅಡ್ಡಾಗಳಿದ್ದು ಅಂದರ್ ಬಾಹರ್ ಕುಳಗಳು ರಾತ್ರಿ ಹಗಲೆನ್ನದೆ ಅಲ್ಲಿ ಜೂಜಾಡುತ್ತಾರೆ.

5 ಮಕ್ಕಳಿಗೆ ಕೊರೊನಾ ಶೀತ ಬಂದರೆ ಶಾಲೆ ಬಂದ್ ಮಾಡೋರಿಗೆ, ಇಸ್ಪೀಟ್ ಕ್ಲಬ್ ದಂಧೆಕೋರರಿಗೆ ಕಡಿವಾಣ ಹಾಕಲು ಕಷ್ಟವಾದೀತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಾರದು. ಮಂಗಳೂರಿನಲ್ಲಿ ಬಿಜೆಪಿ ಪ್ರಭಾವಿ ನಾಯಕನೊಬ್ಬನ ಆಪ್ತನೇ ಇಸ್ಪೀಟ್ ಕ್ಲಬ್ ದಂಧೆಕೋರರ ಅಧಿನಾಯಕ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಳೆದ ಬಾರಿ ಮಂಗಳೂರಿನ ಸರಕಾರಿ ಬಂಗಲೆಯಲ್ಲಿ ಇಸ್ಪೀಟ್ ಎಲೆಗಳನ್ನು ತಲೆಗೆ ಸಿಕ್ಕಿಸಿ, ಕೇಕ್ ಕಟ್ ಮಾಡಿ ಬರ್ತ್ ಡೇ ಪಾರ್ಟಿ ಮಾಡಿದ್ದ ಫೋಟೋಗಳೂ ಜಾಲತಾಣದಲ್ಲಿ ಹರಿದಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಮ್ಯಾಜಿಸ್ಟ್ರೇಟ್ ಶಕ್ತಿಕೇಂದ್ರಗಳ ಹೊಯ್ದಾಟ
ಜಿಲ್ಲಾಧಿಕಾರಿ ಕೊರೊನಾ ಹಿನ್ನೆಲೆಯಲ್ಲಿ ಹೊರಡಿಸಿರುವ ಆದೇಶದಲ್ಲಿ ಇಸ್ಪೀಟ್ ಕ್ಲಬ್ ಗಳಲ್ಲಿ ಸಾಮಾಜಿಕ ಅಂತರ ಸಾಧ್ಯವಿಲ್ಲ. ಇಸ್ಪೀಟ್ ಎಲೆಗಳನ್ನು ಒಬ್ಬರಿಗೊಬ್ಬರು ಹಿಡಿದು ಎಣಿಸುವುದರಿಂದ ಕೊರೊನಾ ಹರಡುತ್ತದೆ ಎಂಬುದನ್ನು ಉಲ್ಲೇಖಿಸಿದ್ದರು. ಆದರೆ ಇದ್ಯಾವುದೇ ವಾರ್ನಿಂಗ್, ಮಾಮೂಲಿ ಪಡೆದ ಪೊಲೀಸರಿಗೆ ಮತ್ತು ಕಾಣಿಕೆ ಸಂದಾಯ ಮಾಡಿದ ಕ್ಲಬ್ ಮಾಲೀಕರಿಗೆ ಅನ್ವಯ ಆದಂತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಮತ್ತೊಂದೆಡೆ ರಿಕ್ರಿಯೇಶನ್ ಕ್ಲಬ್ ಮೇಲೆ ದಾಳಿ ನಡೆಸುವುದು, ಅದರ ಮೇಲೆ ಹತೋಟಿ ಸಾಧಿಸುವ ವಿಚಾರದಲ್ಲಿ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಯ ನಡುವೆ ಸಮನ್ವಯ ಇಲ್ಲ. ಪೊಲೀಸ್ ಮುಖ್ಯಸ್ಥರಿಗೆ ನಗರದ ಮಟ್ಟಿಗೆ ಮ್ಯಾಜಿಸ್ಟ್ರೇಟ್ ಪವರ್ ಇರುವುದರಿಂದ ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳುವುದರ ವಿಚಾರದಲ್ಲಿ ಇಬ್ಬರ ನಡುವೆ ಹೊಯ್ದಾಟ ಇದೆ. ಅದೇ ನೆಪದಲ್ಲಿ ಡೀಸಿ ಆದೇಶ ಮಾಡಿದ್ದರೂ ಅದನ್ನು ಬದಿಗೆ ಸರಿಸಲಾಗಿದೆ ಎಂದು ಹೇಳಲಾಗುತ್ತಿದೆ.
Recreation clubs in Mangalore operate without any restraint amid DCs order to close due to covid spike. It is alleged that the Police department is in full support of Recreation clubs operating in city.
05-02-26 05:52 pm
HK News Desk
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
05-02-26 10:01 pm
Mangalore Correspondent
ಆಯುಷ್ ಇಲಾಖೆಯಲ್ಲಿ ಅವ್ಯವಹಾರ ; ಜಿಲ್ಲಾ ಆಯುಷ್ ಅಧಿಕ...
05-02-26 09:29 pm
Nantoor Accident, Protest: ನಂತೂರಿನಲ್ಲಿ ಬಸ್ಸಿನ...
05-02-26 06:20 pm
Accident in Mangalore, Nantoor: ನಂತೂರಿನಲ್ಲಿ ಭ...
04-02-26 10:15 pm
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm