ಪ್ರಸಾದ್ ಅತ್ತಾವರ ಮೇಲೆ ಮತ್ತಷ್ಟು ವಂಚನೆ ದೂರು ; ವಿಜಯಪುರದ ವ್ಯಕ್ತಿ ಮಂಗಳೂರಿಗೆ

03-04-21 06:11 pm       Mangalore Correspondent   ಕರಾವಳಿ

ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಸಾದ್ ಅತ್ತಾವರ ಮೇಲೆ ಮತ್ತಷ್ಟು ಕೇಸು ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.

ಮಂಗಳೂರು, ಎ.3: ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಸಾದ್ ಅತ್ತಾವರ ಮೇಲೆ ಮತ್ತಷ್ಟು ಕೇಸು ಸುತ್ತಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಪ್ರಸಾದ ಅತ್ತಾವರ ತಮ್ಮಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ವಿವಿಧ ಕಡೆಗಳಿಂದ ದೂರುಗಳು ಕೇಳಿಬಂದಿದ್ದು, ವಿಜಯಪುರದ ವ್ಯಕ್ತಿಯೊಬ್ಬರು ದೂರು ಹೇಳಿಕೊಂಡು ಮಂಗಳೂರಿಗೆ ಬಂದಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಹಣ ಪಡೆದು ವಂಚಿಸಿರುವ ಬಗ್ಗೆ ವಿಜಯಪುರದ ವ್ಯಕ್ತಿಯೊಬ್ಬರು ಮಂಗಳೂರಿಗೆ ಬಂದು ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಕಮಿಷನರ್, ನೀವು ದೂರು ನೀಡಿದರೆ ತನಿಖೆ ನಡೆಸುತ್ತೀವಿ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ, ಒಬ್ಬರು ದೂರು ಹೇಳಿಕೊಂಡು ಬಂದಿದ್ದಾರೆ. ದೂರು ಕೊಡಲು ಹೇಳಿದ್ದೇನೆ ಎಂದಿದ್ದಾರೆ ಕಮಿಷನರ್.

ಮಾಹಿತಿ ಪ್ರಕಾರ, ಪ್ರಸಾದ್ ಅತ್ತಾವರ ಬೆಂಗಳೂರಿನಲ್ಲಿ ಒಂದು ಫೈನಾನ್ಸ್ ಸಂಸ್ಥೆಯನ್ನು ಮಾಡಿಕೊಂಡಿದ್ದಾನೆ. ಆ ಸಂಸ್ಥೆಗೆ ಹಣ ಹೂಡಿಕೆ ಮಾಡಲು ತಿಳಿಸುತ್ತಿದ್ದ. ಉದ್ಯೋಗ, ಭಡ್ತಿ, ದೊಡ್ಡ ಹುದ್ದೆಯ ಆಮಿಷಕ್ಕೆ ಒಳಗಾದವರನ್ನು ಈ ಸಂಸ್ಥೆಗೆ ಹಣ ಹೂಡಿಕೆ ಮಾಡಲು ತಿಳಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಅಲ್ಲದೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಇದೇ ಮಾದರಿಯಲ್ಲಿ ತನಗೆ ರಾಷ್ಟ್ರೀಯ ನಾಯಕರು ಗೊತ್ತು, ಯಡಿಯೂರಪ್ಪ ಖಾಸಾ ದೋಸ್ತ್ ಎನ್ನುತ್ತಲೇ ಜಡ್ಜ್ ಸಹಿತ ಹಲವಾರು ಮಂದಿಯಿಂದ ನೂರಾರು ಕೋಟಿ ರೂಪಾಯಿ ಪೀಕಿಸಿಕೊಂಡು ಸಿಕ್ಕಿಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಯುವರಾಜ್ ಸ್ವಾಮಿ ಎಂದು ತನ್ನನ್ನು ಹೇಳಿಕೊಳ್ಳುತ್ತಿದ್ದ ಆತನನ್ನು ಬೆಂಗಳೂರಿನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆ ಸ್ವಾಮಿಗೂ ಪ್ರಸಾದ್ ಅತ್ತಾವರನಿಗೂ ಲಿಂಕ್ ಇದೆಯಾ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. 

ಪ್ರಸಾದ್ ಅತ್ತಾವರ ಬೆಂಗಳೂರಿನಲ್ಲಿ ಸಾಕಷ್ಟು ನೆಟ್ವರ್ಕ್ ಇಟ್ಟುಕೊಂಡಿದ್ದು ಪ್ರಭಾವಿಗಳ ಟಚ್ ಹೊಂದಿದ್ದ. ಆದರೆ, ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ ಮಂಗಳೂರಿನ ಪ್ರೊಫೆಸರ್ ಒಬ್ಬರನ್ನು ವಂಚಿಸಿ, 17.5 ಲಕ್ಷ ರೂ.ಗಳನ್ನು ಪಡೆದು ಪೊಲೀಸ್ ಕೇಸಲ್ಲಿ ಸಿಕ್ಕಿಬಿದ್ದ ಬಳಿಕ ಅಲ್ಲೀವರೆಗೂ ಟಚ್ಚಲ್ಲಿದ್ದ ಪ್ರಭಾವಿಗಳು ಕೂಡ ದೂರ ಸರಿದಿದ್ದಾರೆ. ಸದ್ಯಕ್ಕೆ ಪ್ರಸಾದ್ ಅತ್ತಾವರ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

Read: ಕುಲಪತಿ ಹುದ್ದೆ ಕೊಡಿಸುತ್ತೇನೆಂದು ಭಾರೀ ಮೋಸ ; ಪ್ರಸಾದ ಅತ್ತಾವರ ಅರೆಸ್ಟ್ !

After the arrest of Prasad Attavar over duping professor in Mangalore, many have come forward alleging him of cheating many in lakhs.