ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅಭಿವೃದ್ಧಿಗೆ ತೊಡಕಾಗಿದ್ದ ಕೇರಳ ಲಾಬಿಗೆ ಕೊನೆಗೂ ಮುಕ್ತಿ, ಮೈಸೂರು ವಿಭಾಗಕ್ಕೆ ಸೇರಿಸಲು ಕೇಂದ್ರ ಅನುಮತಿ, ಸಂಸದ ಚೌಟ ಪ್ರಯತ್ನಕ್ಕೆ ಬಲುದೊಡ್ಡ ಯಶಸ್ಸು

21-08-26 09:54 pm       HK News Staffer   ಕರಾವಳಿ

ಕೇರಳದ ಪಾಲ್ಘಾಟ್ (ದಕ್ಷಿಣ) ರೈಲ್ವೇ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗಜೆಟ್ ನೋಟಿಫಿಕೇಶನ್ ಹೊರಬೀಳಲಿದೆ. ಆಮೂಲಕ ಈ ಭಾಗದ ಬಹುಕಾಲದ ರೈಲ್ವೇ ಬೇಡಿಕೆಯೊಂದು ಈಡೇರುವ ಹಂತ ಬಂದಿದೆ.

ಮಂಗಳೂರು, ಆ.21 : ಕೇರಳದ ಪಾಲ್ಘಾಟ್ (ದಕ್ಷಿಣ) ರೈಲ್ವೇ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗಜೆಟ್ ನೋಟಿಫಿಕೇಶನ್  ಹೊರಬೀಳಲಿದೆ. ಆಮೂಲಕ ಈ ಭಾಗದ ಬಹುಕಾಲದ ರೈಲ್ವೇ ಬೇಡಿಕೆಯೊಂದು ಈಡೇರುವ ಹಂತ ಬಂದಿದೆ. 

ಉಳ್ಳಾಲದಿಂದ ಅತ್ತಾವರ, ಪಡೀಲ್ ಮತ್ತು ಸುರತ್ಕಲ್ ಬಳಿಯ ತೋಕೂರು ವರೆಗಿನ 36 ಕಿಮೀ ವ್ಯಾಪ್ತಿಯ ರೈಲ್ವೇ ಜಾಲವು ಹಿಂದಿನಿಂದಲೂ ಕೇರಳದ ಪಾಲ್ಘಾಟ್ ವಿಭಾಗದಲ್ಲಿ ಇರುವುದರಿಂದ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಲೀ, ರೈಲ್ವೇ ಅಭಿವೃದ್ಧಿ ಕೈಗೊಳ್ಳುವುದಕ್ಕೂ ಪಾಲ್ಘಾಟ್ ವಿಭಾಗದ ಅಧಿಕಾರಿಗಳೇ ಬಂದು ಪರಿಶೀಲನೆ ನಡೆಸಬೇಕಿತ್ತು. ಹೀಗಾಗಿ ಅನಗತ್ಯ ವಿಳಂಬ, ಸಣ್ಣ ಸೇತುವೆ ಅಥವಾ ಹಳಿ ಬದಲಾವಣೆಗೂ ಕೇರಳದ ಲಾಬಿಗಳು ಅಡ್ಡಿಯಾಗುತ್ತಿದ್ದವು. ಅಡಕತ್ತರಿಯಲ್ಲಿ ಸಿಲುಕಿದ್ದ ಮಂಗಳೂರು ಭಾಗವನ್ನು ಸಂಸದ ಚೌಟ ನಿರಂತರ ಪ್ರಯತ್ನದಿಂದಾಗಿ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರಿಸಲಾಗಿದೆ. ಅಕ್ಟೋಬರ್ 1, 2026ರ ಬಳಿಕ ಇದು ಗಜೆಟ್ ನೋಟಿಫಿಕೇಶನ್ ಮೂಲಕ ಅಧಿಕೃತವಾಗಲಿದೆ ಎಂದು ರೈಲ್ವೇ ಮಂಡಳಿಯ ಎಕ್ಸಿಕ್ಯುಟಿವ್ ಡೈರೆಕ್ಟರ್ ದಿನೇಶ್ ಕುಮಾರ್ ವಶಿಷ್ಟ ತಿಳಿಸಿದ್ದಾರೆ. ‌

ಕೇಂದ್ರ ಸರ್ಕಾರದ ಈ ಐತಿಹಾಸಿಕ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಮಂಗಳೂರು ಭಾಗದ ರೈಲ್ವೆ ಸಂಪರ್ಕ ಜಾಲವು ಸದ್ಯ ದಕ್ಷಿಣ ರೈಲ್ವೆ ವ್ಯಾಪ್ತಿಯ ಪಾಲ್ಘಾಟ್‌ ವಿಭಾಗ ಹಾಗೂ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮೈಸೂರು ವಿಭಾಗದೊಂದಿಗೆ ಹಂಚಿಕೊಂಡಿದೆ. ಇದರಿಂದ ಭೌಗೋಳಿಕವಾಗಿ ಕರ್ನಾಟಕದಲ್ಲಿದ್ದರೂ ಮಂಗಳೂರಿನ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇರಳದ ಲಾಬಿ ಅಡ್ಡಿಯಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಸೇರಿ ಸಾಕಷ್ಟು ಆಡಳಿತಾತ್ಮಕ ಸಮಸ್ಯೆ, ಸವಾಲುಗಳು ಎದುರಾಗುತ್ತಿದ್ದವು. ಹೀಗಾಗಿ, ಮಂಗಳೂರು ಭಾಗದ ಪೂರ್ತಿ ರೈಲು ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ ನೈಋತ್ಯ ವಲಯಕ್ಕೆ ಸೇರಿಸಬೇಕೆಂಬುದು ಈ ಭಾಗದ ಜನರ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿದ್ದು ಸಂಸದನಾಗಿ ಬಹಳ ಸಂತಸ ತಂದಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.

2024ರಲ್ಲಿ ಸಂಸದನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಮಂಗಳೂರು ಭಾಗದ ರೈಲ್ವೆ ಅಭಿವೃದ್ಧಿಗೆ ಸವಾಲಾಗಿದ್ದ ವ್ಯಾಪ್ತಿ ಸಮಸ್ಯೆ ಸರಿಪಡಿಸಲು ಪ್ರಯತ್ನ ಆರಂಭಿಸಿದ್ದೆ. ಈ ವಿಚಾರವನ್ನು ಮೊದಲು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ತಂದು, ಲಭ್ಯವಿರುವ ಎಲ್ಲಾ ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಲಾಗಿತ್ತು. ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ವಿ. ಸೋಮಣ್ಣ ಅವರು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಮನವರಿಕೆ ಮಾಡಲಾಗಿತ್ತು. ಲೋಕಸಭೆಯಲ್ಲೂ ವಿವಿಧ ವಲಯಗಳಲ್ಲಿ ಹಂಚಿಕೊಂಡಿರುವ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕೆಂದು ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿತ್ತು. ಎರಡು ವರ್ಷಗಳಿಂದ ರೈಲ್ವೆ ಸಚಿವಾಲಯ ಹಾಗೂ ಇಲಾಖೆಗಳೊಂದಿಗೆ ನಡೆಸಿದ್ದ ನಿರಂತರ ಫಾಲೋಅಪ್‌ ಹಾಗೂ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದು ಕ್ಯಾ. ಚೌಟ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಾಳಿತಾತ್ಮಕ ಗೊಂದಲ ನಿವಾರಣೆಯಾಗಿ ರೈಲ್ವೆ ಅಭಿವೃದ್ಧಿ ವಿಚಾರಗಳಲ್ಲಿ ಹೆಚ್ಚಿನ ಅನುಕೂಲತೆ ಹಾಗೂ ತ್ವರಿತ ನಿರ್ಧಾರಗಳು ಆಗಲಿವೆ. ಇಲಾಖೆಗಳ ನಡುವಿನ ಸಮನ್ವಯತೆ ಕೂಡ ಹೆಚ್ಚಲಿದ್ದು, ಪ್ರಯಾಣಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ವಿಸ್ತರಣೆ ಮತ್ತು ಸಂಪರ್ಕದ ಅಭಿವೃದ್ಧಿಗೂ ಇದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸಂಸದರು ವಿವರಿಸಿದ್ದಾರೆ.