ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ; ದೇವಿಯ ವಿಗ್ರಹದ ಬೆಳ್ಳಿ ಕವಚ, ಕರಿಮಣಿ, ಚಿನ್ನಾಭರಣ ಕಳವು

20-08-26 08:06 pm       HK News Staffer   ಕ್ರೈಂ

ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಕಚೇರಿಯ ಅಂಗಣದಲ್ಲಿರುವ ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ವಿಗ್ರಹದ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಪ್ರಭಾವಳಿಗಳನ್ನ ದೋಚಿರುವ ಘಟನೆ ಬುಧವಾರ ತಡರಾತ್ರಿ ಕಲ್ಲಾಪುವಿ‌ನ ಬೊಡಂಗಿಲ ಎಂಬಲ್ಲಿ ನಡೆದಿದೆ.

ಉಳ್ಳಾಲ, ಆ.20: ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಕಚೇರಿಯ ಅಂಗಣದಲ್ಲಿರುವ ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ವಿಗ್ರಹದ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಪ್ರಭಾವಳಿಗಳನ್ನ ದೋಚಿರುವ ಘಟನೆ ಬುಧವಾರ ತಡರಾತ್ರಿ ಕಲ್ಲಾಪುವಿ‌ನ ಬೊಡಂಗಿಲ ಎಂಬಲ್ಲಿ ನಡೆದಿದೆ.

ಕಲ್ಲಾಪು ಬೊಡಂಗಿಲದಲ್ಲಿರುವ ಎಸಿಪಿಯವರ ಕಚೇರಿ ಕಟ್ಟಡದ ಅಂಗಣದಲ್ಲೇ ಇರುವ ದೇವಸ್ಥಾನದಲ್ಲಿ ಚಿನ್ನಾಭರಣ ಕಳವಾಗಿರುವುದು ವಿಪರ್ಯಾಸ. ಬುಧವಾರ ತಡರಾತ್ರಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ಮಹಾಲಕ್ಷ್ಮಿ ವಿಗ್ರಹದ ಕತ್ತಲ್ಲಿದ್ದ ಚಿನ್ನದ ಕರಿಮಣಿ, ಚಿನ್ನದ ಸರ, ಪೆಂಡೆಂಟ್, ತಾಳಿ ಮತ್ತು ವಿಗ್ರಹದ ಬೆಳ್ಳಿ ಕವಚ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ದೋಚಿದ್ದಾರೆ. 

ಗರ್ಭಗುಡಿಯೊಳಗಿದ್ದ ಪಂಚಲೋಹದ ಪ್ರಭಾವಳಿ ಹಾಗೂ ಕೊಡವನ್ನ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಬುಧವಾರ ರಾತ್ರಿ ಒಂದು ಗಂಟೆಯವರೆಗೆ ಎಸಿಪಿ ಕಚೇರಿಯಲ್ಲಿ ಸಿಬ್ಬಂದಿಗಳಿದ್ದರೆಂದು ಹೇಳಲಾಗಿದೆ. ಗುರುವಾರ ಮುಂಜಾನೆ 4.30 ಗಂಟೆಗೆ ಪ್ರಧಾನ ಅರ್ಚಕರಾದ ಬಾಲಕೃಷ್ಣ ಭಟ್ ಅವರು ಕ್ಷೇತ್ರಕ್ಕೆ ಪೂಜೆಯ ತಯಾರಿಗೆ ಬಂದಾಗ ಗರ್ಭಗುಡಿಯ ಬೀಗ ಒಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. 

ಕಳವು ನಡೆದಿರುವ ಮಹಾಲಕ್ಷ್ಮಿ ಕ್ಷೇತ್ರ ಹಾಗೂ ಎಸಿಪಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳೇ ಇಲ್ಲದ ಕಾರಣ ಕಳ್ಳರ ಜಾಡು ಹಿಡಿಯುವುದು ಪೊಲೀಸರಿಗೆ ಕಗ್ಗಂಟಾಗಿದೆ. ಊರವರಲ್ಲದೆ ಎಸಿಪಿ ಕಚೇರಿಯ ಪೊಲೀಸ್ ಸಿಬ್ಬಂದಿಗಳು ಕೂಡಾ ತಮ್ಮ ಅಂಗಣದಲ್ಲಿರುವ ಮಹಾಲಕ್ಷ್ಮಿಯನ್ನ ಶ್ರಧ್ಧೆಯಿಂದ ಆರಾಧಿಸುತ್ತ ಬಂದಿದ್ದರು. ಪೊಲೀಸರು ಭಕ್ತಿ ಪೂರ್ವಕವಾಗಿ ದೇವಿಗೆ ಪಂಚಲೋಹದ ಪ್ರಭಾವಳಿ ಹಾಗೂ ಚಿನ್ನದ ಆಭರಣಗಳನ್ನೂ ಕೊಡುಗೆಯಾಗಿ ನೀಡಿದ್ದರು. ಆದರೆ ತಮ್ಮ ಕಚೇರಿ ಅಂಗಣದಲ್ಲೇ ನಡೆದಿರುವ ಕಳ್ಳತನ ಪ್ರಕರಣವು ಎಸಿಪಿ ಕಚೇರಿ ಸಿಬ್ಬಂದಿಯನ್ನೇ ಅಣಕಿಸಿದಂತಿದೆ.