BC Road Accident, Mangalore: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ರಕ್ತದ ಮಡುವಲ್ಲಿ ಬಿದ್ದರೂ ವಿಡಿಯೋ ಮಾಡಿ ಕುಳಿತರು ! ಪೊಲೀಸರು ನಿಲ್ಲಿಸಿದ್ದಕ್ಕೆ ಎಡವಿ ಬಿದ್ದರೆಂದು ಆರೋಪ 

06-08-26 11:03 pm       Mangaluru Staffer   ಕರಾವಳಿ

ಬಿ.ಸಿ ರೋಡ್ ಬಳಿಯ ಎನ್.ಜಿ. ಸರ್ಕಲ್ ಎಂಬಲ್ಲಿ, ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದ್ದು ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಬಂಟ್ವಾಳ, ಆ.6: ಬಿ.ಸಿ ರೋಡ್ ಬಳಿಯ ಎನ್.ಜಿ. ಸರ್ಕಲ್ ಎಂಬಲ್ಲಿ, ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದ್ದು ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಟಿಪ್ಪರ್ ಚಾಲಕ ಬಂಟ್ವಾಳ ಪಲ್ಲಮಜಲು ನಿವಾಸಿ ಸಲ್ಮಾನ್‌ ಫಾರುಕ್ (33) ಎಂಬಾತ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿಪಡಿಸಿದ್ದಾನೆ ಎನ್ನಲಾಗಿದೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ.‌

ಅಪಘಾತದಲ್ಲಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಸವಾರ ದಯಾನಂದ ಹಾಗೂ ಸಹ ಸವಾರ ಯಶ್ವಂತ್‌ ಕುಲಾಲ್‌ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್‌ ಲಾಕ್‌ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಸಹ ಸವಾರ ಯಶ್ವಂತ್‌ ಕುಲಾಲ್‌ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸವಾರ ದಯಾನಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಅ.ಕ್ರ: 99/2026, ಕಲಂ: 281, 125 (ಎ), 106 (1) ) ಬಿ ಎನ್‌ ಎಸ್‌ ರಂತೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮತ್ತೊಂದು ಮೂಲದ ಪ್ರಕಾರ, ಬೈಕ್ ಸವಾರನನ್ನು ಪೊಲೀಸರು ನಿಲ್ಲಿಸಲು ಸೂಚಿಸಿದ್ದು ಈ ವೇಳೆ ನಿಲ್ಲಿಸದೆ ಪರಾರಿಯಾಗಲು ಬಲಕ್ಕೆ ತಿರುಗಿಸಲು ಯತ್ನಿಸಿದಾಗ ಸ್ಕೂಟರ್ ಅಡ್ಡ ಬಿದ್ದಿದ್ದು ಟಿಪ್ಪರ್ ಅವರ ಮೇಲಿನಿಂದ ಸಾಗಿದೆ ಎನ್ನಲಾಗಿದೆ. 

ವಿಡಿಯೋ, ಫೋಟೋ ತೆಗೆಯುವುದರಲ್ಲಿ ಬಿಜಿ..! 

ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರ ಸ್ವರೂಪದ ಗಾಯಗೊಂಡು ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಬದಲು ಸ್ಥಳದಲ್ಲಿದ್ದವರು ವಿಡಿಯೋ ಹಾಗೂ ಫೋಟೋ ತೆಗೆಯುವುದರಲ್ಲಿ ತಲ್ಲಿನರಾಗಿದ್ದರೆಂಬ ಆರೋಪ ಕೇಳಿಬಂದಿದೆ. ಕೊನೆಗೆ ಆಟೋ ಚಾಲಕರೊಬ್ಬರು ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂದರ್ಭ ಚಿಂತಾಜನಕ ಸ್ಥಿತಿಯಲ್ಲಿದ್ದ ಯಶವಂತ್ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. 

ಬಿಸಿ ರೋಡ್ ಬಳಿಯ ಈ ಸರ್ಕಲ್ ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿದ್ದು ಹಲವಾರು ಅಪಘಾತಗಳು ನಡೆಯುತ್ತಲೇ ಇವೆ. ಗುರುವಾರ ಮುಂಜಾನೆಯೂ ಅಪಘಾತ ನಡೆದಿತ್ತು. ಇತ್ತೀಚೆಗೆ ಕಾರು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದರು.

A pillion rider was killed and the scooter rider sustained serious injuries after a tipper truck collided with a scooter at NG Circle near BC Road on Thursday evening. Police have detained the tipper truck driver in connection with the incident.