ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ರಾಮ ಮಂದಿರ ಮಾದರಿಯಲ್ಲೇ ದೇಶಾದ್ಯಂತ ಆಂದೋಲನ: ವಿಎಚ್‌ಪಿ

06-08-26 09:33 pm       HK News Staffer   ಕರಾವಳಿ

ಹಿಂದು ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದು ಪರಿಷತ್ ವತಿಯಿಂದ ರಾಮ ಮಂದಿರ ಮಾದರಿಯಲ್ಲೇ ದೇಶಾದ್ಯಂತ ಬೃಹತ್ ಆಂದೋಲನ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ತಿನ ಅಂತರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಮಂಗಳೂರು, ಆಗಸ್ಟ್ 6: ಹಿಂದು ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದು ಪರಿಷತ್ ವತಿಯಿಂದ ರಾಮ ಮಂದಿರ ಮಾದರಿಯಲ್ಲೇ ದೇಶಾದ್ಯಂತ ಬೃಹತ್ ಆಂದೋಲನ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ತಿನ ಅಂತರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. 

ದೇಶಾದ್ಯಂತ ಇರುವ ಹಿಂದೂ ದೇವಸ್ಥಾನಗಳನ್ನು ಸರ್ಕಾರ ತನ್ನ ನಿಯಂತ್ರಣದಲ್ಲಿರಿಸಿದೆ. ಮಸೀದಿ, ಚರ್ಚ್, ಗುರುದ್ವಾರ ಅಥವಾ ಬೌದ್ಧ ಜೈನ ಮಂದಿರಗಳ ಆಡಳಿತವನ್ನು ಸರ್ಕಾರ ನಡೆಸುವುದಿಲ್ಲ.‌ ಹಾಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಮಾತ್ರ ಏಕೆ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದ ಅಲೋಕ್ ಕುಮಾರ್, ಈ ನಿಟ್ಟಿನಲ್ಲಿ ಸಂಘಟನಾತ್ಮಕ ವಿಭಾಗಗಳ ಭೇಟಿ ಹಾಗೂ ಸಂತರಿಂದ ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು. 

ಸರ್ಕಾರದಿಂದ ನಡೆಸಲಾಗುವ ದೇವಸ್ಥಾನಗಳ ಆದಾಯ ದುರ್ಬಳಕೆ ಆಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಂತಹ ಪ್ರಸಿದ್ಧ ದೇವಸ್ಥಾನಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ದೇಶದ ವಿವಿಧ ಭಾಗಗಳ ದೇವಸ್ಥಾನಗಳಿಂದ ಸರ್ಕಾರಗಳು ಪಡೆಯುತ್ತಿರುವ ಆದಾಯವನ್ನು ಲೆಕ್ಕ ಹಾಕಿದರೆ ಸಾವಿರಾರು ಕೋಟಿ ಆಗಬಹುದು. ದೇವಸ್ಥಾನಗಳು ಸ್ವತಂತ್ರಗೊಂಡರೆ ವರ್ಷಕ್ಕೆ ಕನಿಷ್ಠ 1 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಹಿಂದೂ ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಬಹುದು. ದೇವಸ್ಥಾನಗಳ ಆಡಳಿತದ ಹೆಸರಿನಲ್ಲಿ ಐಎಎಸ್ ಆಧಿಕಾರಿಗಳು ಹಾಗೂ ಸಿಇಒಗಳಿಗೆ ಸಂಬಳ ನೀಡಲಾಗುತ್ತಿದೆ. ಅವರ ಭಾರೀ ವೇತನ ಮತ್ತು ಆಡಿಟ್ ವೆಚ್ಚಗಳನ್ನು ಭಕ್ತರ ಕಾಣಿಕೆ ಹಣದಿಂದಲೇ ಪಾವತಿಸಲಾಗುತ್ತಿದೆ. ಇದನ್ನು ವಿಎಚ್‌ಪಿ ತೀವ್ರವಾಗಿ ಖಂಡಿಸುತ್ತಿದ್ದು 2026 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಗವರ್ನರ್‌ಗಳು, ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರಗಳು ಸಮ್ಮತಿಸದಿದ್ದಲ್ಲಿ ಬೃಹತ್ ಮಟ್ಟದ ಸಾರ್ವಜನಿಕ ಆಂದೋಲನ ನಡೆಸಲಾಗುವುದು. ಇದರ ಬಗ್ಗೆ ಪ್ರಚಾರಾರ್ಥ ಮೆಟ್ರೋ ನಗರಗಳಲ್ಲಿ ಹಿರಿಯ ನಾಗರಿಕರ ಮತ್ತು ಗಣ್ಯರ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದರು.