ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ, ಛಲವಾದಿ ನಾರಾಯಣಸ್ವಾಮಿ ಕೋತಿ ; ಪ್ರದೀಪ್ ಈಶ್ವರ್‌ ವಾಗ್ದಾಳಿ

04-08-26 09:12 pm       HK News Staffer   ಕರ್ನಾಟಕ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿರುವ ನಡುವೆಯೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಬಂಡಾಯ ಸಭೆಯಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ. "ನಾನು ಯಾವುದೇ ಬಂಡಾಯ ಸಭೆಯಲ್ಲಿ ಭಾಗವಹಿಸುವುದಿಲ್ಲ. ಕಾಂಗ್ರೆಸ್‌ ನನ್ನ ದೇವಾಲಯ, ಪಕ್ಷದ ನಾಯಕರು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತೇನೆ" ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದ ಮೇಲಿನ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ.

ಬೆಂಗಳೂರು, ಆ 04: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿರುವ ನಡುವೆಯೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ ಬಂಡಾಯ ಸಭೆಯಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ. "ನಾನು ಯಾವುದೇ ಬಂಡಾಯ ಸಭೆಯಲ್ಲಿ ಭಾಗವಹಿಸುವುದಿಲ್ಲ. ಕಾಂಗ್ರೆಸ್‌ ನನ್ನ ದೇವಾಲಯ, ಪಕ್ಷದ ನಾಯಕರು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತೇನೆ" ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದ ಮೇಲಿನ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್‌, "ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ. ಕಾಂಗ್ರೆಸ್‌ ನನಗೆ ದೇವಾಲಯ ಇದ್ದಂತೆ, ಕಾಂಗ್ರೆಸ್‌ ನಮ್ಮ ಗರ್ಭಗುಡಿ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ನಮ್ಮ ನಾಯಕರು. ಸಾಮಾನ್ಯನಾದ ನನಗೆ ಪಕ್ಷ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಮಧ್ಯಾಹ್ನ ನಡೆಯುವ ಸಭೆಗೆ ನಾನು ಹೋಗುವುದಿಲ್ಲ. ನಮ್ಮ ನಾಯಕರು ಏನು ಹೇಳುತ್ತಾರೋ ಅದನ್ನೇ ನಾನು ಪಾಲಿಸುತ್ತೇನೆ" ಎಂದು ಹೇಳಿದರು.

'30 ವರ್ಷ ಕಾಯಲು ಸಿದ್ಧ' ;

ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, "ಜೈ ಕಾಂಗ್ರೆಸ್‌. ನಾನು ಇನ್ನೂ 30 ವರ್ಷ ಕಾಯಲು ಸಿದ್ಧನಿದ್ದೇನೆ. ನನಗೆ ವಯಸ್ಸಿದೆ. ಅವಕಾಶಕ್ಕಾಗಿ ಕಾಯುತ್ತೇನೆ. ಸಭೆ ನಡೆಸುತ್ತಿರುವವರಿಂದ ನನಗೆ ಯಾವುದೇ ಕರೆ ಬಂದಿಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಆದ್ದರಿಂದ ಆ ಸಭೆಗೆ ಹೋಗುವುದಿಲ್ಲ" ಎಂದು ಹೇಳಿದರು.

'ಮಂತ್ರಿಯಾಗಬೇಕು ಎಂಬ ಆಸೆ ಇದೆ, ಆದರೆ ಹಠ ಇಲ್ಲ'

ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್‌, "ಮಂತ್ರಿಯಾಗಬೇಕು ಎಂಬ ಆಸೆ ಇರುವುದು ಸಹಜ. ಆದರೆ ಈಗಲೇ ಸಿಗಬೇಕು ಎಂಬ ಹಠ ಇಲ್ಲ. ಹಿರಿಯರಿಗೆ ಅವಕಾಶ ಸಿಕ್ಕಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವಿದೆ" ಎಂದು ತಿಳಿಸಿದರು.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ;

ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, "ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಅದಕ್ಕೇ ಮಾತನಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥ. ಯತ್ನಾಳ್‌ ಬಾಯಿ ಮುಚ್ಚಿಸಲು ಆಗಲಿಲ್ಲ, ಪಕ್ಷದೊಳಗಿನ ಬಂಡಾಯವನ್ನು ಶಮನ ಮಾಡಲು ಆಗಲಿಲ್ಲ" ಎಂದು ಲೇವಡಿ ಮಾಡಿದರು.

ಛಲವಾದಿ ನಾರಾಯಣಸ್ವಾಮಿ ವಿರುದ್ಧ ವ್ಯಂಗ್ಯ ;

ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧವೂ ಕಿಡಿಕಾರಿದ ಪ್ರದೀಪ್ ಈಶ್ವರ್‌, "ಅವರು ಕೋತಿಯಂತೆ. ಯಾವ ಮರದಲ್ಲಿ ಹಣ್ಣು ಇರುತ್ತೋ ಆ ಮರಕ್ಕೇ ನೆಗೆಯುತ್ತಾರೆ" ಎಂದು ವ್ಯಂಗ್ಯವಾಡಿದರು.

ಒಟ್ಟಾರೆ, ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಕೈತಪ್ಪಿದ ಶಾಸಕರ ಅಸಮಾಧಾನ ತೀವ್ರವಾಗಿರುವ ನಡುವೆಯೇ, ಪ್ರದೀಪ್ ಈಶ್ವರ್‌ ಬಂಡಾಯ ಸಭೆಯಿಂದ ದೂರ ಉಳಿಯುವುದಾಗಿ ಘೋಷಿಸಿ, ಪಕ್ಷದ ಹೈಕಮಾಂಡ್‌ ಹಾಗೂ ರಾಜ್ಯ ನಾಯಕತ್ವದ ಮೇಲಿನ ತಮ್ಮ ನಿಷ್ಠೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.