ರಾಜಕೀಯ ಡಬಲ್ ಗೇಮ್‌, ಮೋಸದಿಂದ ಕೂಡಿದೆ; ತಲೆ ಹೊಡೆದವರು ಮಾತ್ರ ಮೇಲಕ್ಕೆ ಬರ್ತಾರೆ..! ಸಚಿವ ಸ್ಥಾನ ಸಿಗದ ಬೇಸರದಲ್ಲಿ ರಾಜೀನಾಮೆ ಪ್ರಕಟಿಸಿದ ಎಸ್.ಆರ್. ಶ್ರೀನಿವಾಸ್

04-08-26 08:11 pm       HK News Staffer   ಕರ್ನಾಟಕ

ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್​​ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಸಚಿವ ಸ್ಥಾನದ ಆಕಾಂಕ್ಷಿಗಳು ರಾಜಿನಾಮೆಗೆ ಮುಂದಾಗಿದ್ದಾರೆ. ನಿನ್ನೆ ವಿಜಯಪುರದ ಇಂಡಿ ಕ್ಷೇತ್ರದ ಮೂರು ಬಾರಿಯ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು.

ಬೆಂಗಳೂರು, ಆ.4 : ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್​​ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಸಚಿವ ಸ್ಥಾನದ ಆಕಾಂಕ್ಷಿಗಳು ರಾಜಿನಾಮೆಗೆ ಮುಂದಾಗಿದ್ದಾರೆ. ನಿನ್ನೆ ವಿಜಯಪುರದ ಇಂಡಿ ಕ್ಷೇತ್ರದ ಮೂರು ಬಾರಿಯ ಶಾಸಕ ಯಶವಂತರಾಯ ಗೌಡ ಪಾಟೀಲ್ ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು. ಬೇಳೂರು ಗೋಪಾಲಕೃಷ್ಣ ಕೂಡ ಇದೇ ಮಾತನ್ನು ಆಡಿದ್ದರು. ಇದೀಗ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಬೇಸರಗೊಂಡಿದ್ದು, ಕೆಎಸ್ಸಾರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಡಿದ್ದಾರೆ. 

ಸದ್ಯಕ್ಕೆ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಕೆಎಸ್ಸಾರ್ಟಿಸಿ ನಷ್ಟದಲ್ಲಿ ಇದೆ. ಇದರಲ್ಲಿದ್ದು ಏನೂ ಸಾಧನೆ ಮಾಡಲು ಆಗಲ್ಲ. ಹೀಗಾಗಿ ನಾಳೆ ಹೋಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಮುಂದಿನ ತೀರ್ಮಾನವನ್ನು ಕಾರ್ಯಕರ್ತರ ಬಯಕೆಯಂತೆ ಮಾಡುತ್ತೇನೆ ಎಂದು ಶ್ರೀನಿವಾಸ್​ ತಿಳಿಸಿದ್ದಾರೆ.

ತುಮಕೂರಿನಲ್ಲಿ ಬೇಸರ ಹೊರ ಹಾಕಿದ ಶಾಸಕ ಎಸ್​.ಆರ್ ಶ್ರೀನಿವಾಸ್, ಜನ ನನಗೆ ಸಚಿವ ಸ್ಥಾನ ಕೊಡ್ಬೇಕು ಎಂದು ಹೇಳ್ತಾರೆ. ಆದ್ರೆ ಯಾರು ಹೇಳಬೇಕಿತ್ತೋ ಅವರು ಹೇಳಿಲ್ಲ. ರಾಜಕೀಯದಲ್ಲಿ ನಮ್ಮಂಥ ರೈತರ ಮಕ್ಕಳು ಮೇಲೆ ಬರೋದು ಕಷ್ಟವಾಗಿದೆ. ಯಾರದಾದ್ರೂ ತಲೆ ಹೊಡೆದು ಹಣ ಸಂಪಾದನೆ ಮಾಡಿರಬೇಕು, ಅಂಥವರು ಮೇಲಕ್ಕೆ ಬರುತ್ತಾರೆ ಎಂದು ಕಿಡಿಕಾರಿದ್ದಾರೆ.

ಸಚಿವ ಸ್ಥಾನ ಅನ್ನೋದು ಯಾರದ್ದೂ ಅಪ್ಪನ ಆಸ್ತಿ ಅಲ್ಲ, ಕಿತ್ತಾಡಿ ತಗೋಳೋದಕ್ಕೆ. ನಮಗೆ ಯೋಗ್ಯತೆ ಇಲ್ಲ ಅಂತ ಅರ್ಥ. ನಮಗೆ ಗಾಡ್ ಫಾದರ್ ಇರಲಿಲ್ಲ. ಹೀಗಾಗಿ ಸಚಿವ ಸ್ಥಾನ ತಪ್ಪಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಬೇಸರದಿಂದ ನುಡಿದಿದ್ದಾರೆ. ರಾಜಕೀಯದ ಹೊಸ ಪಾಠ ಈಗ ಅರ್ಥ ಆಗುತ್ತಿದ್ದು, ಕೆಲಸವನ್ನ ಗುರುತಿಸುತ್ತಾರೆ ಅಂದುಕೊಂಡಿದ್ದೆ. ಈ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂದೂ ಅನ್ಕೊಂಡಿದ್ದೆ. ಈಗ ಎಲ್ಲವೂ ಮೀರಿ ಹೋಗಿದೆ. ಪ್ರಾಮಾಣಿಕತೆ ಬೆಲೆ ಎಷ್ಟಿದೆ ಅನ್ನೋದು ಈಗ ಗೊತ್ತಾಗ್ತಿದ್ದು, ರಾಜಕೀಯ ಅನ್ನೋದೆ ಡಬಲ್ ಗೇಮ್ ಮೋಸದಿಂದ ಕೂಡಿದೆ ಎಂದು ಶ್ರೀನಿವಾಸ್ ಕಿಡಿಕಾರಿದರು.‌