ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿಗಳ ಪ್ರತಿಭಟನೆ, ನಮ್ಮ ಭವಿಷ್ಯ ಮಾರಾಟಕ್ಕಿಲ್ಲ ಎಂದು ಭಿತ್ತಿಪತ್ರ ಹಿಡಿದು ಧರಣಿ

24-07-26 10:37 pm       HK News Desk   ಕರಾವಳಿ

ನೀಟ್ ಪರೀಕ್ಷೆ ಅಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಧಾರಣೆ ಆಗ್ರಹಿಸಿ ಮಂಗಳೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಮಂಗಳೂರು, ಜುಲೈ 24: ನೀಟ್ ಪರೀಕ್ಷೆ ಅಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಧಾರಣೆ ಆಗ್ರಹಿಸಿ ಮಂಗಳೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಮ್ಮ ಭವಿಷ್ಯ ಮಾರಾಟಕ್ಕಿಲ್ಲ, ನ್ಯಾಯ ಬೇಕು ನ್ಯಾಯ, ನೀಟ್ ಹಗರಣ ನಮ್ಮ ಕನಸುಗಳನ್ನು ಕೊಂದಿದೆ ಎನ್ನುವ ರೀತಿಯ ಭಿತ್ತಿಪತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ನಗರದ ಹ0ಪನಕಟ್ಟೆಯಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ನಡೆಸಿದರು. ಬಳಿಕ ಟೌನ್ ಹಾಲ್ ಮುಂದೆ ಸೇರಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಎಲ್ಲರು ತಮ್ಮ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದಿದ್ದು ಬಿಟ್ಟರೆ ಬೇರಾವುದೇ ಪಕ್ಷದ ಧ್ವಜ, ಪ್ಲೇಕಾರ್ಡ್ ಗಳನ್ನು ಹಿಡಿಯಲಿಲ್ಲ.

ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲಿಸಿ ಪ್ರತಿಭಟನೆ ನಡೆದಿದ್ದು, ನೀಟ್ ಅಕ್ರಮ ಆರೋಪ ಹೊತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು, ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದರು. ಪ್ರತಿಭಟನೆಯಲ್ಲಿ ಹಿಂದು, ಮುಸ್ಲಿಂ, ಕ್ರಿಸ್ತಿಯನ್ ವಿದ್ಯಾರ್ಥಿಗಳು ಸೇರಿದ್ದು ನಾವೆಲ್ಲ ಒಂದು ಎನ್ನುವ ಸಂದೇಶ ನೀಡಿದರು. ಅಲ್ಲದೆ, ಯಾವುದೇ ರಾಜಕೀಯ ನಾಯಕರು ಭಾಗವಹಿಸದೆ ಕೇವಲ ವಿದ್ಯಾರ್ಥಿಗಳೇ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸಂಜೆಯಾಗುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳು ಕ್ಯಾಂಡಲ್ ಉರಿಸಿ ಸಾವಿಗೆ ಶರಣಾದ ವಿದ್ಯಾರ್ಥಿಗಳ ಪರವಾಗಿ ಗೌರವ ಸಲ್ಲಿಸಿದರು.