ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಎಸ್ ಐಆರ್ ಪ್ರಕ್ರಿಯೆ ; ಸಚಿವ ಖಾದರ್ ಹೆಸರೇಳಿ ಅಕ್ರಮ, ದೂರು ನೀಡಿದ್ರೂ ಜಿಲ್ಲಾಧಿಕಾರಿ ಮೌನವೇಕೆ? ಲೋಪ ಸರಿಪಡಿಸದಿದ್ದರೆ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ

06-07-26 09:13 pm       HK News Desk   ಕರಾವಳಿ

ಮಂಗಳೂರು ವಿದಾನಸಭಾ(ಉಳ್ಳಾಲ) ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ. ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಖಾದರ್ ಅವರ ಹೆಸರು ಹೇಳಿ ಕಾಂಗ್ರೆಸ್ ಕಾರ್ಯಕರ್ತರು ಬಿಎಲ್‌ಒಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕ್ಷೇತ್ರದಲ್ಲಿ ನಡೆದಿರುವ ಲೋಪ ದೋಷಗಳನ್ನ‌ ತಕ್ಷಣವೇ ಸರಿಪಡಿಸದಿದ್ದಲ್ಲಿ ತೀವ್ರ ಹೋರಾಟ...

ಉಳ್ಳಾಲ, ಜು-06: ಮಂಗಳೂರು ವಿದಾನಸಭಾ(ಉಳ್ಳಾಲ) ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ. ಕ್ಷೇತ್ರದ ಶಾಸಕರು ಮತ್ತು ಸಚಿವರಾದ ಖಾದರ್ ಅವರ ಹೆಸರು ಹೇಳಿ ಕಾಂಗ್ರೆಸ್ ಕಾರ್ಯಕರ್ತರು ಬಿಎಲ್‌ಒಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕ್ಷೇತ್ರದಲ್ಲಿ ನಡೆದಿರುವ ಲೋಪ ದೋಷಗಳನ್ನ‌ ತಕ್ಷಣವೇ ಸರಿಪಡಿಸದಿದ್ದಲ್ಲಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಎಚ್ಚರಿಕೆ ನೀಡಿದರು. 

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಅಂಬ್ಲಮೊಗರು ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ರಫೀಕ್ ಅಂಬ್ಲಮೊಗರು ಎಂಬವರು ಎಸ್‌ಐಆರ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ನೀಡಿದ್ದು ಈ ಬಗ್ಗೆ ದೂರು ನೀಡಿ ನಾಲ್ಕೈದು ದಿವಸಗಳಾದರೂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಅತೀ ಸೂಕ್ಷ್ಮ ಬೂತ್‌ಗಳನ್ನು ಗುರುತಿಸಿದ್ದು ಅಲ್ಲಿ ಒಂದು ಸಮುದಾಯಕ್ಕೆ ಸೇರಿದ ಬಹಳಷ್ಟು ಜನರು ಸೇರುವುದರಿಂದ ಬಿಗಿ ಪೊಲೀಸ್ ಭದ್ರತೆ ಕೊಟ್ಟು ಎಸ್‌ಐಆರ್ ಫಾರಂಗಳನ್ನು ತುಂಬುವ ಪ್ರಕ್ರಿಯೆ ನಡೆಸಬೇಕಿದೆ. 

ಕೆಲವು ಕಡೆಗಳಲ್ಲಿ ಸಾಮೂಹಿಕವಾಗಿ‌ ಎಸ್ಐಆರ್ ಫಾರಂ ಭರ್ತಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಅಂತಹ ಜಾಗಗಳಿಗೆ ಪೊಲೀಸ್ ಭದ್ರತೆ ನೀಡಿ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಇನ್ನು ಕೆಲ ಕಡೆಗಳಲ್ಲಿ ಬಿಎಲ್ಒ ಗಳ ವರ್ತನೆಯೂ ಅನುಮಾನಸ್ಪದವಾಗಿದ್ದು, ಇದರಿಂದ ಕೇಂದ್ರ ಸರಕಾರವು ನಡೆಸುತ್ತಿರುವ ಎಸ್ ಐಆರ್ ಪ್ರಕ್ರಿಯೆಯ ಉದ್ಧೇಶ ನೆರವೇರಲು ಸಾಧ್ಯವಿಲ್ಲ. ಮಂಜನಾಡಿ, ಬೆಳ್ಮ, ಪುದು ಮೊದಲಾದ ಕಡೆಗಳಲ್ಲಿ ವಾಸ್ತವ್ಯ ದೃಢೀಕರಣ ಪತ್ರ ನೀಡುವಿಕೆಯಲ್ಲೂ ಅಕ್ರಮ ನಡೆಯುತ್ತಿದೆ. ಹೊರ ರಾಜ್ಯಗಳಿಂದ ವಲಸೆ ಬಂದವರನ್ನು ದುರ್ಬಳಕೆ ಮಾಡಿ ಅವರಿಗೆ ಅಕ್ರಮವಾಗಿ ವಾಸ್ತವ್ಯ ದೃಢೀಕರಣ ಪತ್ರಗಳನ್ನು ನೀಡಲಾಗುತ್ತಿದೆ. 

ಇಷ್ಟೆಲ್ಲಾ ಅಕ್ರಮಗಳು ನಡೆಯುವಾಗ ಕ್ಷೇತ್ರದ ಶಾಸಕರು, ಸಚಿವರಾಗಿರುವ ಯು.ಟಿ. ಖಾದರ್ ಮೌನ ವಹಿಸಿದ್ದು, ಅವರು ಕೂಡ ಇಂತಹ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದಾರೆಂಬ ಸಂಶಯ ನಮ್ಮಲ್ಲಿ ಮೂಡಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಬಿಜೆಪಿ ಮಂಗಳೂರು ಮಂಡಲ ವತಿಯಿಂದ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಸಾಕ್ಷ್ಯ ಸಮೇತ ದೂರು ನೀಡಿ ಹೋರಾಟ ನಡೆಸಲಾಗುವುದೆಂದು ಮೋಹನ್ ರಾಜ್ ಹೇಳಿದರು. 

ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ ಬಿಎಲ್‌ಒಗಳು ಕೆಲವು ಕಡೆ ಪ್ರಾರ್ಥನಾ ಮಂದಿರಗಳಲ್ಲಿ ಮತದಾರರನ್ನ‌ ಗುಂಪುಗೂಡಿಸಿ ಫಾರಂ ಭರ್ತಿ ಮಾಡುತ್ತಿರುವ ಕುರಿತಂತೆ ದಾಖಲೆ ಸಮೇತ ಆರೋಪ ಬಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಎಲ್‌ಒಗಳು ಯಾವುದೇ ಕಾರಣಕ್ಕೂ ಅಧಿಕಾರಿಗಳು ಹಾಗೂ ರಾಜಕೀಯ ಒತ್ತಡಕ್ಕೆ ಮಣಿದು ನ್ಯಾಯ ಸಮ್ಮತವಲ್ಲದ ಕೆಲಸ ಮಾಡಬಾರದು.‌ ಹಿಂದಿನ ಮತದಾರರ ಪಟ್ಟಿಯಲ್ಲಿ ಬಹಳಷ್ಟು ಲೋಪಗಳಿದ್ದು ಈ ಬಗ್ಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಎಲ್‌ಒಗಳಿಗೆ ಮೇಲಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಜರಗಬೇಕೆಂದು ಆಗ್ರಹಿಸಿದರು. 

ಬಿಜೆಪಿ ಜಿಲ್ಲಾ ಮುಖಂಡರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜೀವನ್ ಕುಮಾರ್ ತೊಕ್ಕೊಟ್ಟು, ಧನಲಕ್ಷ್ಮಿ ಗಟ್ಟಿ, ಪೂಜಾ ಪೈ ಹಾಗೂ ಜಯಶ್ರೀ ಕರ್ಕೇರ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

The Bharatiya Janata Party (BJP) has alleged serious irregularities in the Special Intensive Revision (SIR) of the electoral rolls in the Mangaluru Assembly constituency, claiming that the process is being manipulated by taking the name of State Minister U.T. Khader.