Panambur Gold Robbery, Update: ಚಿನ್ನದ ವ್ಯಾಪಾರಿ ದರೋಡೆ ಹಿಂದಿತ್ತು ಮಹಾಪ್ಲಾನ್ ; ಗೂಗಲ್ ಪೇ ಹಿಂದೋಡಿದ ಪೊಲೀಸರಿಗೆ ಸಿಕ್ಕಿತ್ತು ಸುಳಿವು, ಹವಾಲಾ ಹಿಂದೆ ಬಿದ್ದವರಿಗೆ ಸಿಕ್ಕಿದ್ದು ಸೀರುಂಡೆ !? ಕೇರಳದಲ್ಲಿ ರಾಬರಿ ಗ್ಯಾಂಗ್ ಸಕ್ರಿಯ

04-07-26 09:43 pm       HK News Staffer   ಕ್ರೈಂ

ಮಂಗಳೂರು ಹೊರವಲಯದ ಬೈಕಂಪಾಡಿಯ ಹೆದ್ದಾರಿ ನಡುವಲ್ಲೇ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲೂಟಿಗೈದ ಪ್ರಕರಣದಲ್ಲಿ ಕೇರಳದ ನಟೋರಿಯಸ್ ಕ್ರಿಮಿನಲ್ಗಳ ತಂಡ ಭಾಗಿಯಾಗಿರುವ ಮಾಹಿತಿ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದಿರುವ ಅತ್ಯಂತ ಅಪರೂಪದ ದರೋಡೆ ಪ್ರಕರಣ ಇದಾಗಿದ್ದು ಇವರ ಪತ್ತೆಗಾಗಿ ಪೊಲೀಸರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಮಂಗಳೂರು, ಜುಲೈ 4: ಮಂಗಳೂರು ಹೊರವಲಯದ ಬೈಕಂಪಾಡಿಯ ಹೆದ್ದಾರಿ ನಡುವಲ್ಲೇ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲೂಟಿಗೈದ ಪ್ರಕರಣದಲ್ಲಿ ಕೇರಳದ ನಟೋರಿಯಸ್ ಕ್ರಿಮಿನಲ್ಗಳ ತಂಡ ಭಾಗಿಯಾಗಿರುವ ಮಾಹಿತಿ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದಿರುವ ಅತ್ಯಂತ ಅಪರೂಪದ ದರೋಡೆ ಪ್ರಕರಣ ಇದಾಗಿದ್ದು ಇವರ ಪತ್ತೆಗಾಗಿ ಪೊಲೀಸರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.  

ಜುಲೈ 29ರಂದು ನಸುಕಿನ ಜಾವ ಕೇರಳದ ಪಯ್ಯನ್ನೂರಿನಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ವಿಕಾಸ್ ಧನವಡೆ (41) ತನ್ನ ಪತ್ನಿ ಮತ್ತು ಮಗನೊಂದಿಗೆ ಸಾಂಗ್ಲಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಮರಳುತ್ತಿದ್ದರು. ನಸುಕಿನ ಮೂರು ಗಂಟೆ ವೇಳೆಗೆ, ಸುರತ್ಕಲ್ ಸಮೀಪದ ಬೈಕಂಪಾಡಿ ಹೆದ್ದಾರಿ ನಡುವಲ್ಲಿ ಎರಡು ಇನ್ನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರಿನಲ್ಲಿ ಅಡ್ಡಗಟ್ಟಿದ್ದ ದರೋಡೆಕೋರರು ವಿಕಾಸ್ ಅವರನ್ನು ಎಳೆದಾಕಿ ಹಲ್ಲೆಗೈದು ಕಾರಿನೊಂದಿಗೆ ಪರಾರಿಯಾಗಿದ್ದರು. ಆಬಳಿಕ ಎರಡು ಕಿಮೀ ಮುಂದಕ್ಕೆ ಸಾಗಿ ಕುಳೂರಿನಲ್ಲಿ ವಿಕಾಸ್ ಅವರ ಪತ್ನಿ ಮತ್ತು 14 ವರ್ಷದ ಮಗನನ್ನು ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದರು.

ಎರಡು ದಿನಗಳ ಬಳಿಕ ನಂಬರ್ ಪ್ಲೇಟ್ ಕಿತ್ತು ಸೀಟನ್ನು ಹರಿದು ಹಾಕಿದ ಸ್ಥಿತಿಯಲ್ಲಿ ಅದೇ ಮಾರುತಿ ಡಿಸೈರ್ ಕಾರು ಬಂಟ್ವಾಳದ ಪಚ್ಚಿನಡ್ಕ ಎಂಬಲ್ಲಿನ ಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೇ ವೇಳೆ, ಮಂಗಳೂರಿನ ಪಣಂಬೂರು ಮತ್ತು ಸುರತ್ಕಲ್ ಠಾಣೆಯ ಪೊಲೀಸರು ಹಾಗೂ ಸಿಸಿಬಿ ತಂಡದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಜಾಡು ಪತ್ತೆಹಚ್ಚಿದ್ದರು. ಆದರೆ ನೈಜ ಆರೋಪಿಗಳ ಪತ್ತೆ ಇನ್ನೂ ಸಾಧ್ಯವಾಗಿಲ್ಲ. 

ಈಗ ಅರೆಸ್ಟ್ ಆಗಿರುವ ಮೂವರಲ್ಲಿ ಯಾರು ಕೂಡ ಕೃತ್ಯದಲ್ಲಿ ನೇರ ಭಾಗಿಯಾದವರಲ್ಲ. ಪ್ರಕರಣದಲ್ಲಿ 14 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದರೂ, ಈಗ ಸಿಕ್ಕಿಬಿದ್ದಿರುವ ತಲಶ್ಶೇರಿ ಮೂಲದ ನಿಮಿಲ್ ಆರ್.ಕೆ. (37) ತಂಡದಲ್ಲಿ ಗುರುತಿಸಿದ್ದನಾದರೂ ಸ್ಥಳದಲ್ಲಿ ಇರಲಿಲ್ಲ ಎನ್ನುವ ಮಾಹಿತಿ ಇದೆ. ಇನ್ನಿಬ್ಬರು ಬಂಧಿತರಾದ ಇರ್ಶಾದ್ ಮತ್ತು ಮುಸ್ತಾಫ ಎಂಬವರು ಮಡಿಕೇರಿಯವರಾಗಿದ್ದು ಆರೋಪಿಗಳು ಪರಾರಿಯಾಗುವ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆಂಬ ಕಾರಣಕ್ಕೆ ಅರೆಸ್ಟ್ ಆಗಿದ್ದಾರೆ. 

ಇಷ್ಟಕ್ಕೂ ದರೋಡೆ ತಂಡದ ಜಾಲವನ್ನು ಜಾಲಾಡಲು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಸುತ್ತಾಡಿದ್ದಾರೆ. ಅಂದು ನಡುರಾತ್ರಿಯಿಂದ ಬೆಳಗ್ಗಿನ ಜಾವದ ವರೆಗೂ ಸುರತ್ಕಲ್ – ಮಂಗಳೂರು ನಡುವೆ ಹೆದ್ದಾರಿಯಲ್ಲಿ ಸಾಗಿದ್ದ ಎಲ್ಲ ವಾಹನಗಳ ನಂಬರನ್ನೂ ಸಂಗ್ರಹಿಸಿ ತನಿಖೆ ಮಾಡಿದ್ದಾರೆ. ಈ ನಡುವೆ, ತಲಪಾಡಿಯಲ್ಲಿ ಸಾಗಿದ್ದ ಇಂಡಿಕಾ ಕಾರಿನ ಚಾಲಕ ಟೋಲ್ ಪಾಸ್ ಮಾಡುವುದಕ್ಕಾಗಿ ಗೂಗಲ್ ಪೇ ಮಾಡಿದ್ದ. ಆತನಿಗೂ ದರೋಡೆ ತಂಡಕ್ಕೂ ಲಿಂಕ್ ಇದೆಯಾ ಎಂದು ತನಿಖೆ ಕೈಗೊಂಡಾಗ ಸ್ಪಷ್ಟ ಸುಳಿವು ಲಭ್ಯವಾಗಿತ್ತು. ಯಾಕಂದ್ರೆ, ಆ ಕಾರು ಕೂಡ ಬೈಕಂಪಾಡಿಯಲ್ಲಿ ಕೃತ್ಯ ನಡೆಯೋ ಹೊತ್ತಿಗೆ ಕುಳೂರಿನಲ್ಲಿ ನಿಂತಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. ಇದೇ ಸುಳಿವು ಆಧಾರದಲ್ಲಿ ತಲಶ್ಶೇರಿ ಮೂಲದ ನಿಮಿಲ್ ಆರ್.ಕೆ. ಸಿಕ್ಕಿಬಿದ್ದಿದ್ದಾನೆ ಅನ್ನುವ ಮಾಹಿತಿ ಇದೆ.  

ಹವಾಲಾ ಹಣ ದೋಚಲು ಪ್ಲಾನ್

ವಿಕಾಸ್ ಮಹಾರಾಷ್ಟ್ರದಿಂದ ಬರ್ತಿರೋವಾಗ ಕಾರಿನಲ್ಲಿ ಭಾರೀ ಪ್ರಮಾಣದಲ್ಲಿ ಹವಾಲಾ ಹಣ ತರುತ್ತಿದ್ದಾನೆಂಬ ಶಂಕೆಯಲ್ಲಿ ದರೋಡೆ ತಂಡ ದೋಚಲು ಪ್ಲಾನ್ ಹಾಕಿತ್ತು. ಆದರೆ ಇವರು ನಿರೀಕ್ಷಿಸಿದ್ದು ಸುಳ್ಳಾಗಿರುವ ಸಾಧ್ಯತೆ ಇದೆ. ಆದರೂ ಹಣ ಇರಲಿಕ್ಕಿಲ್ಲ ಎಂಬುದನ್ನು ನಂಬಲಾಗದೆ ಸೀಟಿನ ಒಳಗಡೆ ಇರಬಹುದೆಂಬ ಅನುಮಾನದಲ್ಲಿ ಕಾರಿನ ಸೀಟನ್ನೂ ಹರಿದು ಹಾಕಿ ತಡಕಾಡಿದೆ. ತಂಡಕ್ಕೆ ಎಷ್ಟು ಸಿಕ್ಕಿದೆಯೋ, ಸಿಕ್ಕಿಲ್ಲವೋ ಅನ್ನೋದು ಗೊತ್ತಾಗಿಲ್ಲ. ದೂರುದಾರ ವಿಕಾಸ್ ಪ್ರಕಾರ, 20 ಲಕ್ಷ ಮೌಲ್ಯದ ಹೆಂಡ್ತಿ ಧರಿಸಿದ್ದ 180 ಗ್ರಾಮ್ ಚಿನ್ನಾಭರಣ ಮತ್ತು ಎರಡು ಲಕ್ಷ ನಗದು ಮಾತ್ರ ಕಳವಾಗಿದೆ ಅನ್ನೋದು. ಚಿನ್ನ ಇರದಿದ್ದರೂ ಹವಾಲಾ ಹಣ ಇರಲೇಬೇಕೆಂಬ ಶಂಕೆಯಲ್ಲಿ ದರೋಡೆಗೆ ಪ್ಲಾನ್ ಹಾಕಿತ್ತು.  

ಕೇರಳದಲ್ಲಿ ದರೋಡೆ ಗ್ಯಾಂಗ್ ಸಕ್ರಿಯ 

ಮಹಾರಾಷ್ಟ್ರದಿಂದ ಕೇರಳಕ್ಕೆ ಭಾರೀ ಹವಾಲಾ ಹಣ ಪೂರೈಕೆ ಆಗೋದು, ಚಿನ್ನದ ಗಟ್ಟಿ ಸಪ್ಲೈ ಆಗೋದು ಹಿಂದಿನಿಂದಲೂ ನಡೀತಿದೆ. ಇದೇ ಕಾರಣಕ್ಕೆ ಇಂಥವರನ್ನು ಲೂಟಿ ಮಾಡಲೆಂದೇ ಕೇರಳದಲ್ಲಿ ಹಲವಾರು ದರೋಡೆ ಗ್ಯಾಂಗುಗಳೂ ಸಕ್ರಿಯವಾಗಿವೆ. ಈ ತಂಡ ಎಷ್ಟು ಸಕ್ರಿಯ ಎಂದರೆ, ಒಂದು ಗ್ಯಾಂಗಿನಲ್ಲಿ ಸದಸ್ಯರ ಕೊರತೆಯಿದ್ದರೆ, ಮತ್ತೊಂದು ತಂಡದಿಂದ ಒಂದಷ್ಟು ಮಂದಿಯನ್ನು ಬಾಡಿಗೆ ಪಡೆಯುತ್ತಿದ್ದರು. ಕೆಲಸ ಮುಗಿಸಿದ ಕೂಡಲೇ ಅವರಿಗೆ ನಿಗದಿಪಡಿಸಿದ ಮೊತ್ತ ಕೊಟ್ಟು ಕಳಿಸಿಕೊಡುವುದಕ್ಕೂ ವ್ಯವಸ್ಥೆ ಇದೆಯಂತೆ. ಹೀಗಾಗಿ ಜೊತೆಗಿದ್ದರೂ ಇವರಿಗೆ ಒಬ್ಬರಿಗೊಬ್ಬರ ಬಗ್ಗೆ ಖಚಿತ ಮಾಹಿತಿ ಇರುವುದಿಲ್ಲ, ಕಿಂಗ್ ಪಿನ್ ಮಾತ್ರ ದೂರವೇ ಕುಳಿತು ಕೈಯಾಡಿಸುತ್ತಾನೆ. 

ಇವರ ದರೋಡೆ ಪ್ಲಾನ್ ಹೇಗಿತ್ತು ಅಂದರೆ, ವಿಕಾಸ್ ಕಾರಿನಲ್ಲಿ ಬರುತ್ತಿರುವ ಪಿನ್ ಟು ಪಿನ್ ಈ ತಂಡಕ್ಕಿತ್ತು. ಎಷ್ಟೊತ್ತಿಗೆ ಎಲ್ಲಿ ತಲುಪಿದ್ದಾನೆಂಬ ಖಚಿತ ಮಾಹಿತಿಗಳು ಆಗಿಂದಾಗ್ಗೆ ಬರುತ್ತಿದ್ದವು. ಇದಕ್ಕಾಗಿ ಮೊದಲೇ ವಿಕಾಸ್ ಕಾರಿನ ಜಿಪಿಎಸ್ ಪಡೆದಿದ್ದರೋ ಅಥವಾ ಮೊಬೈಲ್ ಜಿಪಿಎಸ್ ಟ್ರ್ಯಾಕರ್ ಮಾಡಿಕೊಂಡಿದ್ದರೋ ಗೊತ್ತಿಲ್ಲ.. ಇದಕ್ಕಾಗಿ ದರೋಡೆ ತಂಡ ಆಧುನಿಕ ತಂತ್ರಜ್ಞಾನವನ್ನಂತೂ ಚೆನ್ನಾಗಿಯೇ ಬಳಸಿಕೊಂಡಿದೆ. ಮತ್ತೊಂದು ಮಾಹಿತಿ ಪ್ರಕಾರ, ಇವರ ತಂಡದಲ್ಲಿ ಮೂರಲ್ಲ, ನಾಲ್ಕು ಕಾರುಗಳಿದ್ದವು. ಒಂದು ವೇಳೆ ದರೋಡೆ ಫೇಲ್ ಆದರೆ ತಪ್ಪಿಸಿಕೊಳ್ಳಲು ಪ್ಲಾನ್ ಬಿಯನ್ನೂ ಮಾಡಿಕೊಂಡಿದ್ದರು.

ಇಷ್ಟಕ್ಕೂ ವಿಕಾಸ್ ಕಾರಿನಲ್ಲಿ ಉತ್ತರ ಕನ್ನಡದ ಯಲ್ಲಾಪುರ ಕಾಡು ದಾರಿಯಲ್ಲಾಗಿ ಉಡುಪಿ- ಮಂಗಳೂರಿಗೆ ಬಂದಿದ್ದರು. ದರೋಡೆ ಗ್ಯಾಂಗ್ ಇವರನ್ನು ದೋಚಲೇಬೇಕು ಅಂದ್ರೆ, ಅಲ್ಲಿನ ನಿರ್ಜನ ಪ್ರದೇಶದಲ್ಲೇ ದೋಚಬಹುದಿತ್ತು. ಅಥವಾ ಹೇಗೂ ತಲಪಾಡಿ ದಾಟಿ ಕೇರಳದಲ್ಲಿ ಸಾಗುತ್ತಿರುವಾಗಲೇ ದೋಚಲು ಪ್ಲಾನ್ ಹಾಕಬಹುದಿತ್ತು. ತಂಡದಲ್ಲಿ ಮಡಿಕೇರಿ ಮತ್ತು ಕೇರಳದವರೇ ಇದ್ದಿರೋದ್ರಿಂದ ತಮ್ಮ ಪರಿಚಿತ ಏರಿಯಾದಲ್ಲೇ ದೋಚಿ ಎಸ್ಕೇಪ್ ಆಗಬಹುದಿತ್ತು. ಆದರೆ ದರೋಡೆ ತಂಡ ಅದೆಲ್ಲವನ್ನೂ ಬಿಟ್ಟು ಮಂಗಳೂರಿನಲ್ಲೇ ಕೆಲಸ ಮುಗಿಸಿ ಪರಾರಿಯಾಗಲು ಸ್ಕೆಚ್ ಹಾಕಿದ್ದರ ಹಿಂದೆಯೂ ಮೈಂಡ್ ವರ್ಕ್ ಇದೆ ಅನ್ನೋದು ಕಾಣ್ತಾ ಇದೆ.

ಕಲ್ಲಡ್ಕದಲ್ಲಿ ದೋಚಿದ್ದು ಇಂಥದ್ದೇ ಗ್ಯಾಂಗು 

ಒಂದು ವರ್ಷದ ಹಿಂದೆ ಇದೇ ರೀತಿ ಬಂಟ್ವಾಳದ ಕಲ್ಲಡ್ಕದ ಬಳಿ ಬೀಡಿ ಉದ್ಯಮಿಯೊಬ್ಬರನ್ನು ಕೇರಳದ ದರೋಡೆ ಗ್ಯಾಂಗ್ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಭಾರೀ ಪ್ರಮಾಣದ ಹಣವನ್ನು ಮೂಟೆಗಳಲ್ಲಿ ತುಂಬಿಸಿ ದೋಚಿತ್ತು. ಅದರಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ನಟೋರಿಯಸ್ ಕ್ರಿಮಿನಲ್ಗಳು ಭಾಗಿಯಾಗಿದ್ದರು. ಬೀಡಿ ಉದ್ಯಮಿ ತನ್ನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ತಂದಿರಿಸಿದ್ದಾನೆಂಬ ಮಾಹಿತಿ ಇದ್ದೇ ತಂಡ ರಾಬರಿ ಮಾಡಿತ್ತು. ಆವತ್ತು ಕೂಡ ಕೃತ್ಯ ಮುಗಿಸಿ ವಿಟ್ಲ ದಾರಿಯಾಗಿಯೇ ತಂಡ ಎಸ್ಕೇಪ್ ಆಗಿತ್ತು. ಬೀಡಿ ಉದ್ಯಮಿ ಮಾತ್ರ ಹೋದದ್ದು ಹೋಗಲಿ ಎಂದು ಪೊಲೀಸರಿಗೆ ಕಡಿಮೆ ದುಡ್ಡಿನ ಲೆಕ್ಕ ಹೇಳಿದ್ದರಿಂದ ಸಿಕ್ಕಿದ್ದು ಸೀರುಂಡೆ ಎನ್ನುತ್ತ ಒಂದಷ್ಟು ಪಾಲನ್ನು ಎಲ್ಲರೂ ಹಂಚಿಕೊಂಡಿದ್ದರು. ಕೊನೆಗೆ, ದರೋಡೆ ಕಿಂಗ್ ಪಿನ್ ಯಾರಿದ್ದರೋ ಅವರನ್ನು ಪತ್ತೆಹಚ್ಚದೇ ಬಿಟ್ಟುಬಿಟ್ಟಿದ್ದರು.