Mangalore Garodi Landslide: ನಾಗುರಿ ದುರಂತ ; ಗುಡ್ಡ ಸಹಿತ ಕಾಂಪೌಂಡ್ ಗೋಡೆ ಕುಸಿತವೇ ಮೂವರ ಸಾವಿಗೆ ಕಾರಣ! ಮನೆ ಪಕ್ಕದಲ್ಲೇ ಕಲ್ಲಿನ ತಡೆಗೋಡೆ, ಕಾಮಗಾರಿ ನಿರ್ಲಕ್ಷ್ಯದ ಬಗ್ಗೆ ತ‌ನಿಖೆಗೆ ಕಮಿಷನರ್ ಸೂಚನೆ

01-07-26 08:41 pm       HK News Desk   ಕರಾವಳಿ

ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಮಂಗಳೂರಿನಲ್ಲಿ ದುರಂತವನ್ನೇ ಸೃಷ್ಟಿಸಿದ್ದು ಯಾರದೋ ತಪ್ಪಿಗಾಗಿ ಏನೂ ಅರಿಯದ ಮುಗ್ಧ ಕಂದಮ್ಮಗಳು ಜೀವ ಕಳಕೊಂಡಿವೆ.

ಮಂಗಳೂರು, ಜು.01: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಮಂಗಳೂರಿನಲ್ಲಿ ದುರಂತವನ್ನೇ ಸೃಷ್ಟಿಸಿದ್ದು ಯಾರದೋ ತಪ್ಪಿಗಾಗಿ ಏನೂ ಅರಿಯದ ಮುಗ್ಧ ಕಂದಮ್ಮಗಳು ಜೀವ ಕಳಕೊಂಡಿವೆ. ಕಂಕನಾಡಿ ನಾಗುರಿ ಪ್ರದೇಶದಲ್ಲಿ ಗುಡ್ಡ ಕುಸಿದು ಕಾಂಪೌಂಡ್ ಗೋಡೆ ಸಹಿತ ಮನೆ ಮೇಲೆ ಬಿದ್ದಿದ್ದರಿಂದ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಮತ್ತು ಇನ್ನೊಬ್ಬ ಮಹಿಳೆ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಎದುರಾದ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೋಡುಗರ ಕಣ್ಣೀರಾಗಿಸುತ್ತಿದೆ. 

ಬಿಹಾರ ಮೂಲದ ದಂಪತಿ ಮತ್ತು ಅವರ ನಾಲ್ಕು ಮಂದಿ ಹೆಣ್ಮಕ್ಕಳು ಮನೆಯಲ್ಲಿ ವಾಸವಿದ್ದರು. ನಸುಕಿನ ಐದು ಗಂಟೆ ವೇಳೆಗೆ ಏಕಾಏಕಿ ಹಿಂಭಾಗದಲ್ಲಿ ಕಾಂಪೌಂಡ್ ಗೋಡೆ ಮತ್ತು ಗುಡ್ಡದ ಮಣ್ಣು ಏಕಾಏಕಿ ಮನೆಯ ಮೇಲೆ ಕುಸಿದು ಬಿದ್ದಿದ್ದು ಮನೆಯಲ್ಲಿ ಮಲಗಿದ್ದ ಎಲ್ಲರೂ ಮಣ್ಣಿನಡಿ ಸಿಲುಕಿದ್ದರು. ಪಕ್ಕದ ಮನೆಯಲ್ಲಿ ಉಡುಪಿ ಜಿಲ್ಲೆಯ ಮೂಲದ ಬಾಲಕೃಷ್ಣ - ಶಾಂತ ದಂಪತಿ ಮಲಗಿದ್ದರು. ಬಿಹಾರಿ ಕುಟುಂಬದ ಇಬ್ಬರು ದೊಡ್ಡ ಮಕ್ಕಳು ಇವರೊಂದಿಗೆ ಮಲಗಿದ್ದರು. ಎಂಟು ವರ್ಷಗಳಿಂದ ಅಲ್ಲಿ ನೆಲೆಸಿದ್ದ ಬಿಹಾರ ಮೂಲದ ಲಾಲ್ ಬಾಬು ಮತ್ತು ತನು ದಂಪತಿ ಮಣ್ಣಿನಡಿಗೆ ಬಿದ್ದವರನ್ನು ರಕ್ಷಣೆ ಮಾಡಿದರೂ ಅವರ ಜೊತೆಗಿದ್ದ ಅನಾಮಿಕ (7) ಮತ್ತು ತನು (4) ಎಂಬಿಬ್ಬರು ಪುಟಾಣಿಗಳು ಉಸಿರು ಕಟ್ಟಿ ಸಾವು ಕಂಡಿದ್ದಾರೆ. ಬಾಲಕೃಷ್ಣ ಅವರ ಪತ್ನಿ ಶಾಂತ(45) ಅವರನ್ನು ರಕ್ಷಿಸುವಷ್ಟರಲ್ಲಿ ಆಕೆಯೂ ಉಸಿರು ಚೆಲ್ಲಿದ್ದಾರೆ. 

ದಿನವೂ ಪರಿಸರದಲ್ಲಿ ನಲಿದಾಡುತ್ತಿದ್ದ ಪುಟಾಣಿ ಮಕ್ಕಳು ಅರೆ ಕ್ಷಣದಲ್ಲಿ ಇಲ್ಲದಾಗಿದ್ದು ಅಲ್ಲಿನ ನಿವಾಸಿಗಳನ್ನು ದಂಗುಬಡಿಸಿದೆ. ಇದರ ಬೆನ್ನಲ್ಲೇ ಮನೆಯ ಮುಂದೆ ನಲಿವಿನಿಂದ ಆಟವಾಡುತ್ತಿದ್ದ ಪುಟಾಣಿ ತನು ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಣ್ಣೀರು ತರಿಸಿದೆ. ಮಣ್ಣಿನಡಿಗೆ ಬಿದ್ದ ಹಂಚಿನ ಮನೆಯು 40 ವರ್ಷ ಹಳೆಯದಾಗಿದ್ದು ಯಾವುದೇ ತೊಂದರೆ ಇರಲಿಲ್ಲ‌. ಹಿಂಭಾಗದಲ್ಲಿ ಧರೆ ಕುಸಿಯುವುದನ್ನು ತಡೆಯಲು ಕಗ್ಗಲ್ಲಿನ ತಡೆಗೋಡೆ ರಚಿಸಲಾಗಿತ್ತು. ನಾಲ್ಕು ದಿನದ ಮಳೆಗೆ ತಡೆಗೋಡೆ ಸಹಿತ ಮೇಲಿನಿಂದ ಮೆದು ಮಣ್ಣು ಕುಸಿದು ನೇರವಾಗಿ ಮನೆಯ ಮೇಲೆ ಬಿದ್ದಿದೆ. ಇದರಿಂದಾಗಿ ಹಂಚಿನ ಮನೆಯ ಉದ್ದಕ್ಕೂ ಹಿಂದಿನ ಭಾಗ ಕುಸಿದು ಬಿದ್ದಿದೆ. ಹಂಚಿನ ಕಟ್ಟಡದಲ್ಲಿ ನಾಲ್ಕು ಕುಟುಂಬಗಳಿದ್ದರೂ, ಎರಡು ಕುಟುಂಬಗಳಿದ್ದ ಭಾಗ ಹೆಚ್ಚಿನ ಹಾನಿಗೀಡಾಗಿದೆ. 

ಕಾಮಗಾರಿ ನಿರ್ಲಕ್ಷ್ಯ ಬಗ್ಗೆ ತ‌ನಿಖೆ ; ಕಮಿಷನರ್ 

ದುರಂತದ ಕುರಿತು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಇದು ಕೇವಲ ಭೂಕುಸಿತವಲ್ಲ, ಮನೆಯ ಹಿಂಭಾಗದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಮನೆಯ ಮೇಲೆ ಬಿದ್ದಿರುವುದೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಮಳೆ ನೀರಿನ ಒತ್ತಡ ಹೆಚ್ಚಾಗಿ ಗೋಡೆ ಕುಸಿದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಕಾಮಗಾರಿಯಲ್ಲಿ ದೋಷವಿದೆಯೇ ಎಂಬುದರ ಕುರಿತು ತಾಂತ್ರಿಕ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಕಳಪೆ ಕಾಮಗಾರಿ ನಡೆದಿರುವುದು ಅಥವಾ ಗೋಡೆ ಕಟ್ಟುವಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. ತಜ್ಞರ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ದುರಂತಕ್ಕೀಡಾದ ಕಟ್ಟಡದಲ್ಲಿ ಒಟ್ಟು ನಾಲ್ಕು ಬಾಡಿಗೆ ಮನೆಗಳಿದ್ದು ಒಟ್ಟು 18 ಮಂದಿ ವಾಸವಿದ್ದರು. ಮನೆಯ ಪಕ್ಕದಲ್ಲೇ ಗುಡ್ಡ ಮತ್ತು ಅದರ ಕುಸಿತವನ್ನು ತಪ್ಪಿಸಲು ತಡೆಗೋಡೆ ರಚಿಸಲಾಗಿತ್ತು. ಈಗ ಗುಡ್ಡದ ಮಣ್ಣು ಸಹಿತ ಕಲ್ಲಿನ ಗೋಡೆ ಮನೆಯ ಮೇಲೆ ಬಿದ್ದಿದೆ. ಮೇಲ್ನೋಟಕ್ಕೆ ಹಳೆ ಕಟ್ಟಡ ಪಕ್ಕದಲ್ಲಿ ಕಾಂಕ್ರೀಟ್ ತಳಪಾಯ ಹಾಕದೆ ತಡೆಗೋಡೆ ರಚಿಸಿರುವುದು ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಘಟನೆಯ ಬಳಿಕ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮೃತರ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಧಿಯಿಂದ ತಲಾ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ.