Panambur Gold Robbery, Update: ಪಣಂಬೂರಿನಲ್ಲಿ ಚಿನ್ನದ ಉದ್ಯಮಿ ದರೋಡೆ ಪ್ರಕರಣ ; ಅಪಹರಿಸಿದ್ದ ಕಾರು ಬಂಟ್ವಾಳದಲ್ಲಿ ಪತ್ತೆ, ಆರೋಪಿಗಳು ಕೇರಳಕ್ಕೆ ಪರಾರಿ ಶಂಕೆ, ಬೆನ್ನುಬಿದ್ದ ಪೊಲೀಸರು 

30-06-26 11:02 pm       HK News Staffer   ಕ್ರೈಂ

ಪಣಂಬೂರು ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಚಿನ್ನದ ಉದ್ಯಮಿಯ ಕಾರು ತಡೆದು ಹಲ್ಲೆಗೈದು ಚಿನ್ನಾಭರಣ ದರೋಡೆಗೈದ ಪ್ರಕರಣದಲ್ಲಿ ಆರೋಪಿಗಳು ಅಪಹರಿಸಿದ್ದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೆಂಜನಪದವು ಬಳಿಯ ಕಲ್ಪನೆ ಎಂಬಲ್ಲಿ ಪತ್ತೆಯಾಗಿದೆ.

ಮಂಗಳೂರು, ಜೂನ್ 30: ಪಣಂಬೂರು ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಚಿನ್ನದ ಉದ್ಯಮಿಯ ಕಾರು ತಡೆದು ಹಲ್ಲೆಗೈದು ಚಿನ್ನಾಭರಣ ದರೋಡೆಗೈದ ಪ್ರಕರಣದಲ್ಲಿ ಆರೋಪಿಗಳು ಅಪಹರಿಸಿದ್ದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೆಂಜನಪದವು ಬಳಿಯ ಕಲ್ಪನೆ ಎಂಬಲ್ಲಿ ಪತ್ತೆಯಾಗಿದೆ.

ಜೂನ್ 29ರ ನಸುಕಿನ 3 ಗಂಟೆ ವೇಳೆಗೆ ಮುಂಬೈನಿಂದ ಕಾರಿನಲ್ಲಿ ಬರುತ್ತಿದ್ದ ಕೇರಳದ ಪಯ್ಯನ್ನೂರಿನ ಚಿನ್ನದ ಜುವೆಲ್ಲರಿ ಮಾಲೀಕ ವಿಕಾಸ್ ಅವರನ್ನು ಅಡ್ಡಗಟ್ಟಿದ್ದ ಮೂರು ಕಾರಿನಲ್ಲಿ ಬಂದಿದ್ದ ತಂಡವೊಂದು ವಿಕಾಸ್ ಮೇಲೆ ಹಲ್ಲೆಗೈದು ಹೊರಗೆಳೆದು ಕಾರನ್ನು ಅಪಹರಿಸಿತ್ತು. ಕಾರಿನಲ್ಲಿದ್ದ ವಿಕಾಸ್ ಪತ್ನಿ ಮತ್ತು ಮಗನ ಸಹಿತ ಅಪಹರಿಸಿದ್ದು ಬಳಿಕ ಕುಳೂರು ಬಳಿ ಅವರನ್ನು ಇಳಿಸಿ ಕಾರನ್ನು ಹೊತ್ತೊಯ್ದಿದ್ದರು.

ಪತ್ನಿ ರೂಪಾಲಿ ಕೈಯಲ್ಲಿದ್ದ ಸೂಟ್ ಕೇಸ್ ಮತ್ತು ಅದರಲ್ಲಿದ್ದ 20 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆಂದು ವಿಕಾಸ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದು ಇದರಂತೆ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಎರಡು ಇನ್ನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಮಲೆಯಾಳದಲ್ಲಿ ಮಾತನಾಡಿದ್ದು ವಿಕಾಸ್ ಅವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ, ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಆನಂತರ, ಆರೋಪಿಗಳು ಕಾರು ಸಹಿತ ಅಲ್ಲಿಂದ ಎಸ್ಕೇಪ್ ಆಗಿದ್ದರು.

ಪೊಲೀಸರು ವಿವಿಧ ಕಡೆಯ ಸಿಸಿಟಿವಿಗಳನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಕಾರಿನಲ್ಲಿ ವಿಕಾಸ್ ಮತ್ತು ಅವರ ಪತ್ನಿಯ ಎರಡು ಮೊಬೈಲ್ ಉಳಿದಿದ್ದರಿಂದ ಪೊಲೀಸರು ಲೊಕೇಶನ್ ಟ್ರಾಕ್ ಮಾಡಿದಾಗ ಕೊನೆಯ ಬಾರಿಗೆ ನಂತೂರು -ಮರೋಳಿ ಬಳಿ ತೋರಿಸಿತ್ತು. ಅದರ ಆಧಾರದಲ್ಲಿ ಹುಡುಕಾಟ ನಡೆಸಿದಾಗ ಬೆಂಜನಪದವು ಕಲ್ಪನೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಅಪಹರಿಸಿದ ಕಾರನ್ನು ಬಿಟ್ಟು ಅದರ ಸೀಟುಗಳನ್ನು ಹೊರಗೆಳೆದು ಚಿನ್ನದ ಗಟ್ಟಿ ಇದ್ದಿರುವ ಶಂಕೆಯಲ್ಲಿ ಜಾಲಾಡಿದ್ದಾರೆ.

ಆರೋಪಿಗಳಿದ್ದ ಒಂದು ಇನ್ನೋವಾ ಕಾರು ಕೃತ್ಯಕ್ಕೂ ಮುನ್ನ ಮುಲ್ಕಿ ಬಳಿಯಲ್ಲಿ ನಡುರಾತ್ರಿಯಲ್ಲಿ ನಿಂತಿದ್ದನ್ನು ಅಲ್ಲಿನ ಪೊಲೀಸರು ಗಮನಿಸಿದ್ದು ಕಾರಿನಲ್ಲಿ ನಾಲ್ಕೈದು ಜನ ಇದ್ದುದನ್ನು ನೋಡಿ ಪ್ರಶ್ನೆ ಮಾಡಿದ್ದರು. ಅವರಲ್ಲೊಬ್ಬನ ಐಡಿ ಪಡೆದು ಮಾಹಿತಿಯನ್ನು ಸಂಗ್ರಹ ಮಾಡಿದ್ದರು. ಇದೀಗ ಅದೇ ಕಾರಿನಲ್ಲಿದ್ದವರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿಯಿದ್ದು ಪೊಲೀಸರಿಗೆ ಆರೋಪಿಗಳ ಸ್ಪಷ್ಟ ವಿವರ ಸಿಕ್ಕಿದೆ ಎನ್ನಲಾಗುತ್ತಿದೆ. ಆರೋಪಿಗಳು ಕೃತ್ಯದ ಬಳಿಕ ಮಂಗಳೂರಿನಿಂದ ಬಿಸಿ ರೋಡ್ ತೆರಳಿ ಅಲ್ಲಿಂದ ವಿಟ್ಲ ಠಾಣೆ ವ್ಯಾಪ್ತಿಯಾಗಿ ಕೇರಳಕ್ಕೆ ಪರಾರಿಯಾಗಿರುವ ಶಂಕೆಯಿದೆ. ಇದೇ ವೇಳೆ, ಪೊಲೀಸರು ಚಿನ್ನದ ಉದ್ಯಮಿ ವಿಕಾಸ್ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಚಿನ್ನದೊಂದಿಗೆ ಮಹಾರಾಷ್ಟ್ರದಿಂದ ಕೇರಳಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದವರೇ ದರೋಡೆ ಕೃತ್ಯ ಎಸಗಿದ್ದಿರಬಹುದೆಂಬ ಶಂಕೆ ಪೊಲೀಸರದ್ದು.

In a major breakthrough in the sensational robbery involving a Kerala-based gold trader near Panambur, police have recovered the hijacked car from Bantwal. Investigators suspect the accused abandoned the vehicle before fleeing towards Kerala.