ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್‌ ಸಪ್ಲೈ ಮಾಡಿದ್ದ ಹೊನ್ನಾವರ ಮೂಲದ ವ್ಯಕ್ತಿ ಖಾಕಿ ಬಲೆಗೆ

01-07-26 04:51 pm       HK News Staffer   ಕ್ರೈಂ

ಜೂನ್‌ 27ರಂದು ತುಮಕೂರು - ಶಿರಾ ಎನ್​ಎಚ್‌ 28 ರಸ್ತೆಯಲ್ಲಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚ್ಚಾ ಬಾಂಬ್‌ ಬಳಕೆ ಮಾಡಿರುವುದನ್ನು ಖಚಿತಪಡಿಸಿಕೊಂಡು, ಕಚ್ಚಾ ಬಾಂಬ್‌ ಸರಬರಾಜು ಮಾಡಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಗ್ರಾಮದ ಚಂದಾವರ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ ವಿ ತಿಳಿಸಿದ್ದಾರೆ.

ತುಮಕೂರು, ಜುಲೈ 01: ಜೂನ್‌ 27ರಂದು ತುಮಕೂರು - ಶಿರಾ ಎನ್​ಎಚ್‌ 28 ರಸ್ತೆಯಲ್ಲಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚ್ಚಾ ಬಾಂಬ್‌ ಬಳಕೆ ಮಾಡಿರುವುದನ್ನು ಖಚಿತಪಡಿಸಿಕೊಂಡು, ಕಚ್ಚಾ ಬಾಂಬ್‌ ಸರಬರಾಜು ಮಾಡಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಗ್ರಾಮದ ಚಂದಾವರ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ ವಿ ತಿಳಿಸಿದ್ದಾರೆ.

ಜೂ.30ರಂದು ತುಮಕೂರು ವಿಶೇಷ ತನಿಖಾ ತಂಡ ಮತ್ತು ಉತ್ತರ ಕನ್ನಡ ಜಿಲ್ಲೆಯ ತನಿಖಾ ತಂಡಗಳು ಜಂಟಿಯಾಗಿ ಕಾಯಾಚರಣೆ ನಡೆಸಿತ್ತು. ಈ ವೇಳೆ ಜಾರ್ಜ್​ ನಿಕ್ಲೊವ್‌ ಫರ್ನಾಂಡೀಸ್‌ ಎಂಬಾತನು ಕಾರು ಸ್ಫೋಟದಲ್ಲಿ ಮೃತಪಟ್ಟಿರುವ ನಾಗೇಂದ್ರನಿಗೆ ಕಚ್ಚಾ ಬಾಂಬ್‌ ಕೊಟ್ಟಿರುವುದು ಪತ್ತೆಯಾಗಿದೆ. ಅಲ್ಲದೇ ಸ್ಥಳೀಯ ವ್ಯಕ್ತಿಗಳಾದ ಸಂದೀಪ್‌ ಗೌಡ, ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ಎಂಬುವರಿಗೂ ಆರೋಪಿ ಜಾರ್ಜ್​ ಫರ್ನಾಂಡೀಸ್‌ ಕಚ್ಚಾ ಬಾಂಬ್​ಗಳನ್ನು ಕೊಟ್ಟಿರುವುದು ಪತ್ತೆಯಾಗಿದೆ ಎಂದರು.

ಜಾರ್ಜ್​ ಸ್ಥಳೀಯವಾಗಿ ಮೀನುಗಾರಿಕೆ ಉದ್ದೇಶಕ್ಕಾಗಿ ಕಚ್ಚಾ ಬಾಂಬ್‌ ಅನ್ನು ತಯಾರು ಮಾಡಿ ಮಾರಾಟ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಅಲ್ಲದೇ ವಿಚಾರಣೆ ವೇಳೆ ಆರೋಪಿ ಜಾರ್ಜ್​ ಅನಾರೋಗ್ಯ ಉಂಟಾಗಿದ್ದರಿಂದ ಅಂಕೋಲಾ ಪೊಲೀಸರು ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ ತನಿಖೆ ಮುಂದುವರಿಸಲಾಗುವುದು ಎಂದರು.

ಜೂ.27ರಂದು ನಡೆದಿದ್ದ ಕಾರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಪತ್ತೆಯಾಗಿದ್ದ ಕಚ್ಚಾ ಬಾಂಬ್‌ ಅನ್ನು ಸಂರಕ್ಷಿಸಿಡಲಾಗಿತ್ತು. ಕೃತ್ಯ ನಡೆದ ಸ್ಥಳಕ್ಕೆ ಎಫ್​ಎಸ್​ಎಲ್‌ ತಂಡದ ಸಿಬ್ಬಂದಿ ಬಂದು ಸ್ಥಳದಲ್ಲಿ ದೊರೆತಿದ್ದ ಕಚ್ಚಾ ಬಾಂಬ್‌ ಅನ್ನು ಶಿರಾ ನಗರದ ಇಂಡಸ್ಟ್ರೀಯಲ್‌ ಏರಿಯಾದ ನಿರ್ಜನ ಪ್ರದೇಶದಲ್ಲಿ ಸ್ಫೋಟಿಸಿ ಅದರ ಅವಶೇಷಗಳನ್ನು ಸಂಗ್ರಹಿಸಿ ಎಫ್​ಎಸ್​ಎಲ್​ಗೆ ಕಳುಹಿಸಿಕೊಡಲಾಗಿತ್ತು ಎಂದು ತಿಳಿಸಿದರು.

ಕಚ್ಚಾ ಬಾಂಬ್‌ ಎಲ್ಲಿಂದ? ಯಾರಿಂದ? ಹೇಗೆ? ದೊರೆಯಿತು ಎಂಬ ಮೂಲವನ್ನು ಪತ್ತೆ ಹಚ್ಚಲು ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ. ಶೇಖರ್‌ ಮತ್ತು ಶಿರಾ ಗ್ರಾಮಾಂತರ ವೃತ್ತದ ಸಿಪಿಐ ಡಿ.ಜಿ. ಶ್ರೀನಿವಾಸ್‌ ನೇತೃತ್ವದಲ್ಲಿ ಆರೋಫಿಗಳನ್ನು ಬಂಧಿಸಲು 15ಕ್ಕೂ ಸಿಬ್ಬಂದಿ ಮತ್ತು 3 ತಂಡಗಳನ್ನು ರಚನೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

ಕಾರು ಸ್ಫೋಟಕ್ಕೂ ಮುನ್ನ ನಾಗೇಂದ್ರ ಬಳಿ ಮೂರು ನಾಡಬಾಂಬ್‌ ಇದ್ದವು ಎಂಬುವುದು ತಿಳಿದು ಬಂದಿದೆ. ಪ್ರಕರಣದ ತನಿಖೆಗೆ 15ಕ್ಕೂ ಹೆಚ್ಚು ಸಿಬ್ಬಂದಿ ಇರುವ 3 ತಂಡಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದರು.

‘ಶಿರಾ ಗ್ರಾಮಾಂತರ ಸಿಪಿಐ ಡಿ.ಜಿ.ಶ್ರೀನಿವಾಸ, ಪಿಎಸ್‌ಐಗಳಾದ ಪ್ರವೀಣ್‍ಕುಮಾರ್, ಭೈರೇಗೌಡ, ಹರೀಶ್‌, ತೀರ್ಥೇಶ್, ರೇಣುಕಾ ಯಾದವ್‌, ಸಿಬ್ಬಂದಿ ಕಿರಣ್‍ಕುಮಾರ್‌, ಅಬ್ದುಲ್‌ ಖಲೀಲ್‌, ರೇಣುಕಪ್ಪ, ಪ್ರಸಾದ್‌, ಹನುಮಂತಚಾರ್‌, ಶ್ರೀನಿವಾಸ, ಅಮೀರ್‌, ಕಾರ್ತಿಕ್‌, ನಟರಾಜ ನಾಯಕ, ಮಂಜುನಾಥ್, ರಘುಕುಮಾರ್‌, ಈಶ್ವರ, ನರಸಿಂಹರಾಜು, ರಮೇಶ್‌, ಜಗದೀಶ್‌, ವಾಣಿ ಅವರ ತಂಡ ನಾಡ ಬಾಂಬ್‌ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.