ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹಾಸನ ಮೂಲದ ವ್ಯಕ್ತಿ ; ಸಕಾಲಿಕ ಪ್ರಯತ್ನದಿಂದ ಜೀವ ರಕ್ಷಿಸಿದ ಪಣಂಬೂರು ಪೊಲೀಸರು

24-05-26 04:45 pm       HK News Staffer   ಕರಾವಳಿ

ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳದ ಹತ್ತಿರದ ಹಳ್ಳಿಯೊಂದರ ನಿವಾಸಿ ಕೃಷಿಕನೋರ್ವನನ್ನು ಪಣಂಬೂರು ಪೊಲೀಸರು ಸಕಾಲಿಕ ಯತ್ನದಿಂದ ಕಾಪಾಡಿದ್ದಾರೆ.

ಮಂಗಳೂರು, ಮೇ 24: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳದ ಹತ್ತಿರದ ಹಳ್ಳಿಯೊಂದರ ನಿವಾಸಿ ಕೃಷಿಕನೋರ್ವನನ್ನು ಪಣಂಬೂರು ಪೊಲೀಸರು ಸಕಾಲಿಕ ಯತ್ನದಿಂದ ಕಾಪಾಡಿದ್ದಾರೆ. 

ಆರೋಗ್ಯ ಸಮಸ್ಯೆ ಹಾಗೂ ಸಣ್ಣ ಮಟ್ಟಿಗಿನ ಹಣಕಾಸು ಸಮಸ್ಯೆ ಹೊಂದಿದ್ದ ವ್ಯಕ್ತಿ ಮೇ 22ರಂದು ಬೆಳಗ್ಗೆ ಮನೆಯಲ್ಲಿ ಹೇಳದೆ ಮಂಗಳೂರಿಗೆ ಬಂದಿದ್ದು ಮೊಬೈಲ್ ಫೋನ್‌ ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದರು. ಫೋನ್ ಮುಖಾಂತರ ಮನೆಯವರು, ಸಂಬಂಧಿಕರು ಅವರನ್ನು ಸಂಪರ್ಕಿಸಿ ಮನೆಗೆ ಹಿಂದಿರುಗಿ ಬರುವಂತೆ ಎಷ್ಟು ಬೇಡಿಕೊಂಡರೂ ತಾನು ಎಲ್ಲಿದ್ದೇ‌ನೆ ಎಂದು ತಿಳಿಸದೆ ತಾನು ಸಾಯುವುದಾಗಿ ಹೇಳಿಕೊಂಡಿರುತ್ತಾರೆ. ಕೊನೆಗೆ ಅವರು ಪಣಂಬೂರು ಬೀಚ್ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಸಂಜೆ 5:30 ಗಂಟೆ ಸುಮಾರಿಗೆ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್‌ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದು ಹೇಗಾದರೂ ಮಾಡಿ ತಮ್ಮವರನ್ನು ಕಾಪಾಡುವಂತೆ ಕೇಳಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಮೇಲಧಿಕಾರಿಗಳ ಗಮನಕ್ಕೆ ತಂದು ತಮ್ಮ ತಂಡದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ವ್ಯಕ್ತಿಯ ಪತ್ತೆಗಾಗಿ ಮುಂದಾಗಿದ್ದಾರೆ. 

ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದೊಂದಿಗೆ ಸಮನ್ವಯ ಸಾಧಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದ್ದಾರೆ. ಮೊದಲಿಗೆ ಫೋನ್ ಮಾಡಿ ಸಂಪರ್ಕ ಸಾಧಿಸಿದ ಪೊಲೀಸರು ಎಷ್ಟು ಸಾಂತ್ವನ ಹೇಳಿದರೂ ವ್ಯಕ್ತಿ ಸ್ಪಂದಿಸಿರಲಿಲ್ಲ. ನಿರಂತರ ಒಂದುವರೆ ಗಂಟೆ ಕಾಲ ಹುಡುಕಾಡಿದ ನಂತರ ಸಂಜೆ ಸುಮಾರು 7 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ವ್ಯಕ್ತಿ ಪತ್ತೆಯಾದ ಸ್ಥಳವು ಪಣಂಬೂರು ಠಾಣಾ ವ್ಯಾಪ್ತಿಯ ಹೊರಗಡೆ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ ಒಂದು ಅಮೂಲ್ಯ ಜೀವವನ್ನು ಉಳಿಸುವ ಸದುದ್ದೇಶದಲ್ಲಿ ಸರಹದ್ದಿ‌ನ ಬಗ್ಗೆ ಚಿಂತಿಸದೇ ಸಕಾಲಿಕ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು, ಆಹಾರ ನೀಡಿ ಸತ್ಕರಿಸಿ ಕೌನ್ಸೆಲಿಂಗ್ ನಡೆಸಿ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ಬುದ್ದಿ ಮಾತು ಹೇಳಿ ಆತ್ಮವಿಶ್ವಾಸ ತುಂಬಿರುತ್ತಾರೆ. ಕೊನೆಗೆ ಅವರ ಊರಿನಿಂದ ಬಂದ ಸಂಬಂಧಿಕರ ಜೊತೆ ಅವರನ್ನು ಮನೆಗೆ ಕಳಿಸಿ ಕೊಟ್ಟಿರುತ್ತಾರೆ. ತಮ್ಮವರ ಪ್ರಾಣವನ್ನು ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿರುತ್ತಾರೆ.

ಇದೇ ರೀತಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ತನ್ನ ನಾಲ್ಕು ವರ್ಷದ ಸಣ್ಣ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಾಟ್ಸಾಪ್‌ನಲ್ಲಿ ವಿಡಿಯೋ ಹರಿಯ ಬಿಟ್ಟು ನಂತರ ತನ್ನ ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ತಂದೆ ಮತ್ತು ಮಗಳ ಪ್ರಾಣ ರಕ್ಷಿಸಿದ್ದ ಪಣಂಬೂರು ಪೊಲೀಸರ ಮಾನವೀಯ ಕಾರ್ಯ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಇದೀಗ ಆರು ತಿಂಗಳಲ್ಲಿ ಮತ್ತೊಂದು ಪ್ರಕರಣದಲ್ಲಿ ಹಾಸನ ಮೂಲದ ಕೃಷಿಕರೊಬ್ಬರ ಜೀವ ರಕ್ಷಿಸುವ ಮೂಲಕ ಪಣಂಬೂರು ಪೊಲೀಸರು ಸಮಯಪ್ರಜ್ಞೆ ಅಮೂಲ್ಯ ಜೀವ ಉಳಿಸಿದ್ದಾರೆ.‌ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್ಐ ಸುಬ್ರಹ್ಮಣ್ಯ, ಸಿಬ್ಬಂದಿಗಳಾದ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ , ಅನ್ವರ್, ಮಂಜುನಾಥ್ ಇನ್ನಿತರರು ಭಾಗವಹಿಸಿದ್ದರು.