ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ ವಂಚಕರಿಂದ ಇಂಟರ್ವ್ಯೂ ; ಮಂಗಳೂರಿನ ಇಂಜಿನಿಯರ್ ಯುವಕನಿಗೆ ಮೋಸ, ಪ್ರೊಸೆಸಿಂಗ್ ಫೀಸ್ ನೆಪದಲ್ಲಿ 2.90 ಲಕ್ಷ ಕಿತ್ತುಕೊಂಡ ಸೈಬರ್ ಖದೀಮರು

09-07-26 05:34 pm       HK News Staffer   ಕ್ರೈಂ

ಬೆಂಗಳೂರಿನ ಹೊಸಕೋಟೆಯಲ್ಲಿರುವ ಬಹುರಾಷ್ಟ್ರೀಯ ಉತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಮಂಗಳೂರಿನ 28 ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ಯುವಕನಿಗೆ ವಂಚಕರು ಬರೋಬ್ಬರಿ ₹2.90 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ನಡೆದಿದೆ.‌

ಮಂಗಳೂರು, ಜುಲೈ 9: ಬೆಂಗಳೂರಿನ ಹೊಸಕೋಟೆಯಲ್ಲಿರುವ ಬಹುರಾಷ್ಟ್ರೀಯ ಉತ್ಪಾದನಾ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಮಂಗಳೂರಿನ 28 ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ಯುವಕನಿಗೆ ವಂಚಕರು ಬರೋಬ್ಬರಿ ₹2.90 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ನಡೆದಿದೆ.‌

ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂತ್ರಸ್ತನನ್ನು ಹಂತ ಹಂತವಾಗಿ ನಂಬಿಸಿ, ಬಲೆಯಲ್ಲಿ ಸಿಲುಕಿಸಿ ಹಣ ಪೀಕಿಸಿಕೊಂಡಿದ್ದಾರೆ. ಕಳೆದ ಮೇ 27ರಂದು 'ಪ್ರವೀಣ್' ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ತಾನು ಜಾಬ್ ಏಜೆನ್ಸಿಯ ಪ್ರತಿನಿಧಿ ಎಂದು ಹೇಳಿಕೊಂಡಿದ್ದು, ಇಂಟರ್ವ್ಯೂ ಫೀಸ್ ಎಂದು ₹2,000 ಪಾವತಿಸಲು ತಿಳಿಸಿದ್ದಾನೆ. ಆನಂತರ, ಮೇ 29 ಮತ್ತು ಜೂನ್ 1 ರಂದು ಕರೆ ಮಾಡಿ ನಂಬಿಕೆ ಹುಟ್ಟಿಸಿದ್ದು ಸಂತ್ರಸ್ತನಿಗೆ ವಿಡಿಯೋ ಇಂಟರ್ವ್ಯೂ ಲಿಂಕ್ ಕಳುಹಿಸಿ, ನೈಜ ಎನ್ನುವಂತೆ ಸಂದರ್ಶನ ನಡೆಸಿದ್ದಾರೆ. ಜೂನ್ 1 ರಂದು ನೀವು ಕೆಲಸಕ್ಕೆ ಆಯ್ಕೆಯಾಗಿದ್ದೀರಿ ಎಂದು ಹೇಳಿ ನಂಬಿಸಿದ್ದಾರೆ. 

ಆಬಳಿಕ ಕೆಲಸ ಸಿಕ್ಕ ಖುಷಿಯಲ್ಲಿದ್ದ ಯುವಕನಿಂದ ಪ್ರೊಸೆಸಿಂಗ್ ಫೀಸ್ ಹೆಸರಲ್ಲಿ ₹20,000, ಗೇಟ್ ಪಾಸ್ ಶುಲ್ಕದ ಹೆಸರಲ್ಲಿ ₹27,600, ಮತ್ತು ವೈದ್ಯಕೀಯ ತಪಾಸಣೆ ಹೆಸರಿನಲ್ಲಿ ₹40,000 ದೋಚಿದ್ದಾರೆ. ಇದಾದ ಮೇಲೂ ಬೇರೆ ಬೇರೆ ಕಾರಣ ನೀಡಿ ಹಣ ಪೀಕಿಸುತ್ತಲೇ ಇದ್ದರು. ಇವರು ಪದೇ ಪದೇ ಹಣ ಕೇಳುತ್ತಿದ್ದರಿಂದ ಜೂನ್ 27ರಂದು ಅನುಮಾನಗೊಂಡ ಯುವಕ, ನಿಮ್ಮ ಒಟ್ಟು ಪ್ರಕ್ರಿಯೆಯನ್ನು ರದ್ದುಗೊಳಿಸಲು ಕೇಳಿಕೊಂಡಿದ್ದಾನೆ. ಅಷ್ಟರಲ್ಲಿ ವಂಚಕರು ಮತ್ತೊಂದು ಪ್ಲಾನ್ ಮಾಡಿದ್ದಾರೆ. ಕಟ್ಟಿರುವ ಎಲ್ಲಾ ಹಣ ರಿಫಂಡ್ ಆಗಬೇಕಾದರೆ ₹15,579 ಕ್ಯಾನ್ಸಲೇಶನ್ ಫೀಸ್ ಕಟ್ಟಬೇಕು ಎಂದು ಹೇಳಿ ಆ ಹಣವನ್ನೂ ಪಡೆದು ಸಂಪರ್ಕ ಕಡಿತಗೊಳಿಸಿದ್ದಾರೆ.

ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಇಂಜಿನಿಯರ್ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಹೆಲ್ಪ್‌ ಲೈನ್‌ಗೆ ದೂರು ನೀಡಿದ್ದಾರೆ. ಬಳಿಕ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.