ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್ನು ಕಸಿದ ಕರಾಳ ಬೆಳಗ್ಗೆ ನೆನೆದು ಕಣ್ಣೀರಾದ ಜನರು, ಇಂದಿಗೂ ಮರೆತಿಲ್ಲ ಆ ಭೀಕರ ದುರಂತ

22-05-26 09:47 pm       HK News Staffer   ಕರಾವಳಿ

ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಂಗಳೂರು, ಮೇ 22: ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಜಿಲ್ಲಾಡಳಿತದಿಂದ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಮೃತರನ್ನು ಸ್ಮರಿಸಿದರು.

2010ರ ಮೇ 22ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ನಿಯಂತ್ರಣ ತಪ್ಪಿ ಭೀಕರ ದುರಂತಕ್ಕೀಡಾಗಿತ್ತು. ಟೇಬಲ್ ಟಾಪ್ ರನ್‌ವೇಯಲ್ಲಿ ಲ್ಯಾಂಡಿಂಗ್ ಮಾಡುವಾಗ ವಿಮಾನ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿ ಹೊಡೆದು ಕಣಿವೆಗೆ ಉರುಳಿಬಿದ್ದಿತ್ತು. ಕ್ಷಣಾರ್ಧದಲ್ಲೇ ವಿಮಾನ ಎರಡು ಭಾಗವಾಗಿ ಬೆಂಕಿಗಾಹುತಿಯಾಗಿತ್ತು.

ವಿಮಾನದಲ್ಲಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದು, ಅದರಲ್ಲಿ 158 ಮಂದಿ ಸಾವನ್ನಪ್ಪಿದ್ದರು. ಕೇವಲ 8 ಮಂದಿ ಮಾತ್ರ ಪವಾಡ ಸದೃಷ ರೀತಿಯಲ್ಲಿ ಬದುಕುಳಿದಿದ್ದರು. ಮೃತರಲ್ಲಿ 12 ಮಂದಿಯ ಗುರುತು ಪತ್ತೆಯಾಗದ ಹಿನ್ನೆಲೆ ಅವರ ಅಂತ್ಯಸಂಸ್ಕಾರವನ್ನು ತಣ್ಣೀರುಬಾವಿ ನದಿ ತೀರದಲ್ಲಿ ನಡೆಸಲಾಗಿತ್ತು. ಬಳಿಕ ಇದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿತ್ತು.

ದುರಂತಕ್ಕೀಡಾದ ವಿಮಾನದಲ್ಲಿ 127 ಮಂದಿ ವಯಸ್ಕರು, 19 ಮಕ್ಕಳು, 4 ಶಿಶುಗಳು ಹಾಗೂ 6 ಮಂದಿ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಇದ್ದರು. ದುಬೈನಿಂದ ರಾತ್ರಿ 1.20ಕ್ಕೆ ಹೊರಟಿದ್ದ ವಿಮಾನ ಬೆಳಗ್ಗೆ ಮಂಗಳೂರಿಗೆ ಸುರಕ್ಷಿತವಾಗಿ ತಲುಪಬೇಕಾಗಿತ್ತು. ಆದರೆ ಕೆಂಜಾರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಲೆಕ್ಕಾಚಾರ ತಪ್ಪಿ ಭೀಕರ ಅನಾಹುತ ಸಂಭವಿಸಿತು.

ದುರಂತದಿಂದ ಬದುಕುಳಿದ ಎಂಟು ಮಂದಿಯಲ್ಲಿ ಉಳ್ಳಾಲದ ಉಮ್ಮರ್ ಫಾರೂಕ್, ಪುತ್ತೂರಿನ ಅಬ್ದುಲ್ಲಾ, ಬಾಂಗ್ಲಾದೇಶ ಮೂಲದ ವಿದ್ಯಾರ್ಥಿನಿ ಸಬ್ರೀನಾ, ಕಾಸರಗೋಡಿನ ಕೃಷ್ಣನ್, ಕಣ್ಣೂರಿನ ಮಾಹಿನ್ ಕುಟ್ಟಿ, ವಾಮಂಜೂರಿನ ಜುಯೆಲ್ ಡಿಸೋಜ, ಮಂಗಳೂರಿನ ಮಹಮದ್ ಉಸ್ಮಾನ್ ಹಾಗೂ ತಣ್ಣೀರುಬಾವಿಯ ಪ್ರದೀಪ್ ಸೇರಿದ್ದರು.

ಘಟನೆಯ ದಿನ ಹವಾಮಾನ ವರದಿ ನೀಡುತ್ತಿದ್ದ ಐಎಂಡಿಯ ನಿವೃತ್ತ ಅಧಿಕಾರಿ ಆರ್.ಜೆ. ವಾಸ್, ಆ ದಿನದ ಭೀಕರ ನೆನಪುಗಳನ್ನು ಹಂಚಿಕೊಂಡಿದ್ದಾರೆ. “ಆ ಸಮಯದಲ್ಲಿ ದೃಶ್ಯಮಾನತೆ ಆರು ಕಿಲೋಮೀಟರ್ ಇತ್ತು. ಹವಾಮಾನ ಸಹ ಸಾಮಾನ್ಯವಾಗಿಯೇ ಇತ್ತು. ಬೆಳಗ್ಗೆ 6 ಗಂಟೆ 3 ನಿಮಿಷಕ್ಕೆ ದುರಂತ ಸಂಭವಿಸಿತು. ನನ್ನ 31 ವರ್ಷದ ಸೇವಾ ಅವಧಿಯಲ್ಲಿ ಮರೆಯಲಾಗದ ದೊಡ್ಡ ಘಟನೆ ಅದೇ” ಎಂದು ಹೇಳಿದ್ದಾರೆ.