ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರುತ್ತಿದ್ದಾರೆ, ನಾಟಕ ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ, ಮುಂದೆ ಕೋಲ ಗಗ್ಗರ ಕಟ್ಟಿದ್ದನ್ನೂ ನಿಲ್ಲಿಸುವ ದಿನ ಬರಬಹುದು, ಜನಪ್ರತಿನಿಧಿಗಳೇ ಇದನ್ನು ಸರಿ ಮಾಡಬೇಕು..

23-08-25 10:22 pm       Mangalore Correspondent   ಕರಾವಳಿ

ಬೇರೆ ಜಿಲ್ಲೆಯಲ್ಲಿ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರುತ್ತಿದ್ದಾರೆ. ರಾತ್ರಿ ಹತ್ತು ಗಂಟೆ ಆದರೆ ಧ್ವನಿವರ್ಧಕ ಬಂದ್ ಮಾಡಬೇಕೆಂದು ಪೊಲೀಸರು ಅಡ್ಡ ಬಂದರೆ ಯಕ್ಷಗಾನ, ನಾಟಕ, ಕೋಲ, ನೇಮ ನಡೆಯಲಿಕ್ಕುಂಟೇ..

ಮಂಗಳೂರು, ಆ.23 : ಬೇರೆ ಜಿಲ್ಲೆಯಲ್ಲಿ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರುತ್ತಿದ್ದಾರೆ. ರಾತ್ರಿ ಹತ್ತು ಗಂಟೆ ಆದರೆ ಧ್ವನಿವರ್ಧಕ ಬಂದ್ ಮಾಡಬೇಕೆಂದು ಪೊಲೀಸರು ಅಡ್ಡ ಬಂದರೆ ಯಕ್ಷಗಾನ, ನಾಟಕ, ಕೋಲ, ನೇಮ ನಡೆಯಲಿಕ್ಕುಂಟೇ.. ಇನ್ನು ಕೋಲಕ್ಕೆ ಗಗ್ಗರ ಕಟ್ಟಿದ ನಂತರ ಹತ್ತು ಗಂಟೆ ಆಯ್ತು ಕೋಲ ನಿಲ್ಲಿಸಿ ಎನ್ನುವಂತಹ ಸ್ಥಿತಿ ಬರಬಹುದು. ಈ ಕಾನೂನು, ನಿಯಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರದಲ್ಲಿ ಸಡಿಲಿಕೆ ಮಾಡಿ ಎಂದು ಜಿಲ್ಲಾಡಳಿತಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೇವೆ ಎಂದು ಖ್ಯಾತ ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದರು. 

ಪ್ರೆಸ್ ಕ್ಲಬ್ ನಲ್ಲಿ ಕಲಾವಿದರ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧ್ವನಿವರ್ಧಕ ಸಂಘದವರು ಸರ್ಕಾರಿ ಕಾರ್ಯಕ್ರಮ ಇರಲಿ, ಯಾವುದಕ್ಕೂ ಸೌಂಡ್ಸ್ ಲೈಟ್ಸ್ ಕೊಡಲ್ಲ ಅಂತ ಪ್ರತಿಭಟನೆ ಅಸ್ತ್ರ ಹಿಡಿದಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅನ್ನುವ ರೀತಿ ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಆದರೆ ಅವರು ಪ್ರತಿಭಟನೆ ಮಾಡದೆ ವಿಧಿಯಿಲ್ಲ. ಅವರಿಗೆ ನಾವು ಕಲಾವಿದರ ಒಕ್ಕೂಟದಿಂದ ಬೆಂಬಲ ನೀಡುತ್ತೇವೆ. 

ನಮ್ಮ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಗುವುದೇ ಎಂಟು ಗಂಟೆಗೆ. ಹತ್ತು ಗಂಟೆಗೆ ನಿಲ್ಲಿಸಬೇಕು ಅಂದ್ರೆ ನಾಟಕ, ಯಕ್ಷಗಾನ ಆಗೋದು ಹೇಗೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸಬೇಕು. ಜನಪ್ರತಿನಿಧಿಗಳು ಗೃಹ ಸಚಿವ, ಮುಖ್ಯಮಂತ್ರಿ ಜೊತೆಗೆ ಮಾತನಾಡಿ ಸಮಸ್ಯೆ ಬಗ್ಗೆ ಹೇಳಿ ನಿಯಮದಲ್ಲಿ ಸಡಿಲಿಕೆ ಮಾಡಬೇಕು. ನಿನ್ನೆ ಕಾಪಿಕಾಡರ ನಾಟಕ ಇತ್ತು. ಅರ್ಧಕ್ಕೆ ನಿಲ್ಲಿಸಲು ಬಂದಿದ್ರು. ಇವತ್ತು ನಾಟಕ ಇದೆಯೆಂದು ತಿಳಿದು ರಾತ್ರಿ ಮಾಡಬಾರದು ಅಂತ ಹೇಳುತ್ತಿದ್ದಾರೆ. ಮುಂದೆ ಕೋಲವನ್ನೂ ರಾತ್ರಿ ಮಾಡಬಾರದು ಅಂತ ನಿಲ್ಲಿಸುವ ಸ್ಥಿತಿ ಬರಬಹುದು ಎಂದರು. 

ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ಜಿಲ್ಲಾಡಳಿತದ ಈ ನೀತಿಯಿಂದಾಗಿ ಎಲ್ಲರ ಹೊಟ್ಟೆಗೂ ಪೆಟ್ಟು ಬಿದ್ದಿದೆ. ಸೌಂಡ್ಸ್ ಲೈಟ್ಸ್ ಎಲ್ಲ ಕೊಂಡು ಹೋಗ್ತಾರೆ ಅಂತ ಭಯದಲ್ಲಿ ಸಂಜೆ ಐದು ಗಂಟೆಗೇ ಬಂದ್ ಮಾಡ್ತೀವಿ ಎಂದಿದ್ದರು. ಟಿಕೆಟ್ ನಾಟಕ ಅರ್ಧಕ್ಕೆ ನಿಂತರೆ ಅಭಿಮಾನಿಗಳು, ಕಲಾವಿದರಿಗೆ, ಸೌಂಡ್ಸ್ ನವರಿಗೆ ಎಲ್ಲ ಪೆಟ್ಟು ಬೀಳ್ತದೆ. ಮೊನ್ನೆ ಏನೋ ಇವತ್ತು ಮಾಡಿ ಅಂತ ಬಿಟ್ಟರು. ಇವತ್ತು ಬೆಳಗ್ಗೆಯೇ ನಾಟಕ ಮಾಡಬಾರದು ಅಂತ ಫೋನ್ ಮಾಡಿದ್ದಾರೆ. ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಬೇಕು. ಇದರ ಬಗ್ಗೆ ಮಾತುಕತೆ ಮಾಡಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕು ಎಂದರು.

Renowned theatre director Vijaykumar Kodialbail has raised concerns over the enforcement of a sound restriction law in Dakshina Kannada district, which he claims is not being implemented in other parts of the state. He warned that such restrictions could soon halt traditional events like Kola and Yakshagana if not addressed immediately.