ಗೋಹತ್ಯೆ ಕಾನೂನು ಹಿಂಪಡೆದ ರೀತಿಯಲ್ಲೇ ವಿದ್ಯುತ್ ನೌಕರರ ಪಿಂಚಣಿ, ಗ್ರಾಚ್ಯುಟಿ ಬಿಲ್ಲನ್ನೂ ಹಿಂಪಡೆಯಿರಿ, ನಿಮ್ಮ ಹೊರೆಯನ್ನು ಜನರ ತಲೆಗೆ ಯಾಕೆ ಹಾಕ್ತೀರಿ ? ಶಾಸಕ ಕಾಮತ್ ಪ್ರಶ್ನೆ 

08-08-25 12:24 pm       Mangalore Correspondent   ಕರಾವಳಿ

ರಾಜ್ಯ ಸರಕಾರ ವಿದ್ಯುತ್ ನಿಗಮಗಳ ನೌಕರರ ಪಿಂಚಣಿ ಮತ್ತು ಗ್ರಾಜ್ಯುಟಿ ಹೆಸರಿನಲ್ಲಿ ಜನರಿಂದ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಈ ರೀತಿಯ ಶುಲ್ಕ ವಸೂಲಿ ಇರಲಿಲ್ಲ. ಈಗ ಜನರಿಗೆ ನೀಡುತ್ತಿರುವ ವಿದ್ಯುತ್ ಬಿಲ್ ನಲ್ಲಿ ಹೆಚ್ಚುವರಿಯಾಗಿ ಗ್ರಾಚ್ಯುಟಿ ಬಿಲ್ ಅಂತ ನೀಡಲಾಗುತ್ತಿದೆ.

ಮಂಗಳೂರು, ಆ.8 : ರಾಜ್ಯ ಸರಕಾರ ವಿದ್ಯುತ್ ನಿಗಮಗಳ ನೌಕರರ ಪಿಂಚಣಿ ಮತ್ತು ಗ್ರಾಜ್ಯುಟಿ ಹೆಸರಿನಲ್ಲಿ ಜನರಿಂದ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಈ ರೀತಿಯ ಶುಲ್ಕ ವಸೂಲಿ ಇರಲಿಲ್ಲ. ಈಗ ಜನರಿಗೆ ನೀಡುತ್ತಿರುವ ವಿದ್ಯುತ್ ಬಿಲ್ ನಲ್ಲಿ ಹೆಚ್ಚುವರಿಯಾಗಿ ಗ್ರಾಚ್ಯುಟಿ ಬಿಲ್ ಅಂತ ನೀಡಲಾಗುತ್ತಿದೆ. ಕಾಂಗ್ರೆಸಿಗರು ಹಿಂದಿನ ಸರ್ಕಾರ ಮಾಡಿದ್ದು ಅನ್ನೋದಾದ್ರೆ ಇದನ್ನೂ ತೆಗೆದು ಹಾಕಲಿ. ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಯನ್ನು ತೆಗೆದು ಹಾಕಿದಂತೆ ಇದನ್ನೂ ತೆಗೆದುಹಾಕಿ. ನಿಮ್ಮ ಹೊರೆಯನ್ನು ಜನರ ತಲೆಗೆ ಹಾಕುವುದಕ್ಕೆ ನನ್ನ ವಿರೋಧ ಇದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿದೆ. ಹಿಂದಿನ ಬಿಜೆಪಿ ಸರಕಾರ ಎಂದು ಆಪಾದನೆ ಮಾಡುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರಕಾರ ಆದೇಶ ಎನ್ನುವುದಾದರೆ, ಜನರು ಹಿಂದಿನ ಅವಧಿಯ ಮತ್ತು ಪ್ರಸ್ತುತ ಕರೆಂಟ್ ಬಿಲ್ ಪರಿಶೀಲನೆ ಮಾಡಲಿ, ಬಿಜೆಪಿ ಯಾವತ್ತೂ ಪಿಂಚಣಿ, ಗ್ರಾಜ್ಯುಟಿ ಸಂಗ್ರಹಕ್ಕಾಗಿ ಜನರಿಗೆ ಹೊರೆ ಹಾಕಿಲ್ಲ ಎಂದು ವೇದವ್ಯಾಸ ಕಾಮತ್ ಈಗಿನ ಸರ್ಕಾರ ವಿದ್ಯುತ್ ಬಿಲ್ ನಲ್ಲಿ ಗ್ರಾಚ್ಯುಟಿ ಬಿಲ್ ಹಾಕಿರುವುದನ್ನು ತೋರಿಸಿದರು. 

ಕಾಂಗ್ರೆಸ್ ಸರಕಾರವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಿಜೆಪಿ ಅವಧಿಯಲ್ಲಿ ತರಲಾಗಿದ್ದ ಗೋಹತ್ಯಾ ನಿಷೇಧ ನೀತಿಯನ್ನು ಹಿಂತೆಗೆದುಕೊಂಡಿದೆ. ಜನರ ಬಗ್ಗೆ ನಿಜವಾಗಿ ಕಾಳಜಿಯಿದ್ದರೆ ಪಿಂಚಣಿ, ಗ್ರಾಚ್ಯುಟಿ ಬಿಲ್ಲನ್ನೂ ಹಿಂದೆ ಪಡೆಯಲಿ. ಹೊಸ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಲು ಬೆಸ್ಕಾಂನಲ್ಲಿ ದೊಡ್ಡ ಹುನ್ನಾರ ನಡೆದಿದೆ. 900ರೂ. ಗೆ ಸಿಗುವ ಸ್ಮಾರ್ಟ್ ಮೀಟಗೆ 10 ಸಾವಿರ ಹಾಕುತ್ತಿದ್ದೀರಿ ಯಾಕೆ ಎಂದು ಈ ಸರ್ಕಾರವನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ. ಸ್ಮಾರ್ಟ್ ಮೀಟರ್ ಹೆಸರಲ್ಲಿ ಜನರನ್ನು ಮತ್ತೆ ಸುಲಿಗೆ ಮಾಡಲು ಹೊರಟಿದ್ದೀರಿ ಎಂದು ಕಿಡಿಕಾರಿದರು.  

ಕೆಂಪು ಕಲ್ಲು, ಮರಳು ಸಮಸ್ಯೆ ನೀಗಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಸಮಸ್ಯೆ ತಾರಕಕ್ಕೇರಿದ್ದು, ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವರು, ಸ್ಪೀಕರ್ ಸಭೆ ನಡೆಸಿ ಉದ್ಯಮಿಗಳು, ಕಂಟ್ರಾಕ್ಟುದಾರರಿಗೆ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಗಡುವು ನೀಡಿ ಸಮಯ ಹಲವು ಕಳೆದರೂ ಇನ್ನೂ ಪರಿಹಾರ ಕಂಡಿಲ್ಲ. ಇಲ್ಲಿನ ಸಮಸ್ಯೆ ಬಗ್ಗೆ ನಾವು ಶಾಸಕರನ್ನು ಕರೆದು ಮಾತನಾಡಿಲ್ಲ. ಜನರು ಸಮಸ್ಯೆ ಎದುರಿಸುತ್ತಿದ್ದರೆ ಸ್ಪೀಕರ್ ಖಾದರ್ ಅಮೆರಿಕ ತಿರುಗಾಟದಲ್ಲಿದ್ದಾರೆ ಎಂದು ಶಾಸಕ ಕಾಮತ್ ಟೀಕಿಸಿದರು.

ಬಿಜೆಪಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ರಮೇಶ್ ಕಂಡೆಟ್ಟು, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಮುರಳಿ ಹೊಸಮಜಲು, ರಮೇಶ್ ಹೆಗ್ಡೆ, ಮಾಧ್ಯಮ ಸಂಚಾಲಕ ಮಲ್ಲೇಶ್, ಗಂಗಾಧರ ಸಾಲ್ಯಾನ್ ಉಪಸ್ಥಿತರಿದ್ದರು.

Mangaluru South MLA Vedavyas Kamath has lashed out at the Karnataka government for imposing pension and gratuity charges for electricity board employees directly on consumers through their power bills.