Dharmasthala News, Banglegudde: ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಶೋಧ ; ಅಸ್ಥಿಪಂಜರ ಸಿಕ್ಕ ಜಾಗದಲ್ಲೇ ಅಗೆತ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬೆಳ್ತಂಗಡಿಗೆ, ಯೂಟ್ಯೂಬರ್ ವಿರುದ್ಧ ಕಿರಿಕ್ ಕೀರ್ತಿ ಆಕ್ರೋಶ 

06-08-25 07:37 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇಂದು ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನ ಮಧ್ಯೆ ಶೋಧ ಕಾರ್ಯ ನಡೆಸಿದ್ದಾರೆ.

ಮಂಗಳೂರು, ಆ.6 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇಂದು ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನ ಮಧ್ಯೆ ಶೋಧ ಕಾರ್ಯ ನಡೆಸಿದ್ದಾರೆ. ಇದಲ್ಲದೆ, ಧರ್ಮಸ್ಥಳ ಗ್ರಾಮ ಪಂಚಾಯತ್ ಕಚೇರಿಗೂ ತೆರಳಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲ ಆಯಾಮಗಳಿಂದಲೂ ಎಸ್ಐಟಿ ತನಿಖೆಗೆ ಇಳಿದಿದ್ದು, ಯಾವುದೇ ರೀತಿಯ ಗೊಂದಲ, ಸಂಶಯ ಉಳಿಯಬಾರದು ಎನ್ನುವ ನಿಟ್ಟಿಲ್ಲಿ ಶೋಧಕ್ಕೆ ಮುಂದಾಗಿದೆ. ದೂರುದಾರ ವ್ಯಕ್ತಿ ತೋರಿಸಿದ್ದ 13 ಪಾಯಿಂಟ್ ಪೈಕಿ 12 ಕಡೆ ಈಗಾಗಲೇ ಅಗೆಯಲಾಗಿದ್ದು, ಒಂದು ಕಡೆ ಮಾತ್ರ ಅಸ್ಥಿಪಂಜರ ಸಾಕ್ಷ್ಯ ಸಿಕ್ಕಿತ್ತು. ಇದರ ನಡುವೆ ಬಂಗ್ಲೆಗುಡ್ಡೆ ಕಾಡಿನ ಮಧ್ಯೆ ಮತ್ತೊಂದು ಕಡೆ ಶವದ ಅಸ್ಥಿಪಂಜರ ಸಿಕ್ಕಿದ್ದು ಬಿಟ್ಟರೆ, ಗುರುತಿಸಲಾದ ಪಾಯಿಂಟ್ ಗಳಲ್ಲಿ ಹೆಚ್ಚು ಸಾಕ್ಷ್ಯ ಸಿಕ್ಕಿರಲಿಲ್ಲ. ಹೀಗಾಗಿ ಹಲವು ರೀತಿಯ ಗೋಜಲು, ಗೊಂದಲ ಎದುರಾಗಿರುವಾಗಲೇ ದೂರುದಾರ ವ್ಯಕ್ತಿ ಬೇರೆಯದ್ದೇ ಪಾಯಿಂಟ್ ಗಳನ್ನು ಹೇಳತೊಡಗಿದ್ದಾನೆ. 

ದೂರುದಾರ ವ್ಯಕ್ತಿಯ ಕೋರಿಕೆಯಂತೆ, ಬುಧವಾರ ಬಂಗ್ಲೆಗುಡ್ಡೆ ಕಾಡಿನಲ್ಲಿ ಮೊನ್ನೆ ಅಸ್ಥಿಪಂಜರ ಸಿಕ್ಕಿರುವ ಜಾಗದಲ್ಲೇ ಇಂದು ಕಾರ್ಮಿಕರನ್ನು ಬಳಸಿ ಅಗೆಯಲಾಗಿದೆ. ಆದರೆ, ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಲಾಗುತ್ತಿದ್ದು, ಸಂಜೆಯ ವೇಳೆಗೆ ಗುಡ್ಡದಿಂದ ಇಳಿದು ಬಂದ ಅಧಿಕಾರಿಗಳು ನೇರವಾಗಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿದ್ದಾರೆ. ಇದೇ ವೇಳೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿಗೆ ಬಂದಿದ್ದು, ಡಿಐಜಿ, ಎಸ್ಪಿ ಮತ್ತು ತಂಡದ ಇತರ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. 

ಇದೇ ವೇಳೆ, ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ 1995ರಿಂದ 2014ರ ವರೆಗೆ ಆಡಳಿತ ನಡೆಸಿರುವ ಅಧ್ಯಕ್ಷರು, ಅಧಿಕಾರಿಗಳು ಮತ್ತು ಅಸಹಜ ಸಾವುಗಳ ಕುರಿತ ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳು ಪಡೆದಿದ್ದಾರೆ. ಎಸ್ಐಟಿ ತಂಡದ ಇನ್ಸ್ ಪೆಕ್ಟರ್ ಒಬ್ಬರು ಗ್ರಾಮ ಪಂಚಾಯತ್ ಕಚೇರಿಗೆ ಬಂದು ಅಲ್ಲಿರುವ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಇದೇ ವೇಳೆ, ಯೂಟ್ಯೂಬ್ ಚಾನೆಲ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಟಾರ್ಗೆಟ್ ಮಾಡಲಾಗಿದೆ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಎಸ್ಐಟಿ ತಂಡದ ಮಾಹಿತಿಯೆಂದು ಸುಳ್ಳು ವಿಚಾರಗಳನ್ನು ಹರಿಯಬಿಟ್ಟು ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆಂದು ಕಿರುತೆರೆ ನಟ ಕಿರಿಕ್ ಕೀರ್ತಿ ಬೆಳ್ತಂಗಡಿಗೆ ಬಂದು ಎಸ್ಐಟಿ ಕಚೇರಿಗೆ ದೂರು ನೀಡಿದ್ದಾರೆ. ಇದೇ ವೇಳೆ, ಹೋರಾಟಗಾರರ ಪರ ಇರುವ ಸೋಶಿಯಲ್ ಮೀಡಿಯಾಗಳ ವಿರುದ್ಧ ಕಿರಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

The Special Investigation Team (SIT), probing the alleged burial of a body in Dharmasthala, resumed its search operations today in the Banglegudde forest near Snanaghatta. The search was specifically conducted at the same location where skeletal remains were discovered earlier this week. Labourers were deployed to assist in digging, but no new evidence was found during today’s search.