Mangalore, Derlakatte Raid: ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ; ದೇರಳಕಟ್ಟೆ ಡಯಾಗ್ನೋಸ್ಟಿಕ್ & ಪಾಲಿಕ್ಲಿನಿಕ್ ಗೆ ಬೀಗ ಜಡಿದ ಆರೋಗ್ಯ ಇಲಾಖೆ 

19-07-25 07:18 pm       Mangalore Correspondent   ಕರಾವಳಿ

ದಕ್ಷಿಣ‌ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹತ್ತು ತಂಡಗಳನ್ನ ರಚಿಸಿ ಜಿಲ್ಲೆಯ ವಿವಿಧೆಡೆಯ ಪಾಲಿಕ್ಲಿನಿಕ್ ಹಾಗೂ ಮೆಡಿಕಲ್ ಲ್ಯಾಬ್ ಗಳ ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕಿನ‌ ದೇರಳಕಟ್ಟೆಯ ಹೃದಯ ಭಾಗದಲ್ಲಿ ಕೆಪಿಎಂಇ ಪರವಾನಿಗೆ ಇಲ್ಲದೆ ನಿಯಮಗಳನ್ನ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ "ದೇರಳಕಟ್ಟೆ‌ ಡಯಾಗ್ನೋಸ್ಟಿಕ್ ಆಂಡ್ ಪಾಲಿಕ್ಲಿನಿಕ್"ಗೆ ಅಧಿಕಾರಿಗಳು ಬೀಗ ಮುದ್ರೆ ಜಡಿದಿದ್ದಾರೆ.

ಉಳ್ಳಾಲ, ಜು.19 : ದಕ್ಷಿಣ‌ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹತ್ತು ತಂಡಗಳನ್ನ ರಚಿಸಿ ಜಿಲ್ಲೆಯ ವಿವಿಧೆಡೆಯ ಪಾಲಿಕ್ಲಿನಿಕ್ ಹಾಗೂ ಮೆಡಿಕಲ್ ಲ್ಯಾಬ್ ಗಳ ತಪಾಸಣೆ ನಡೆಸಿದ್ದು, ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕಿನ‌ ದೇರಳಕಟ್ಟೆಯ ಹೃದಯ ಭಾಗದಲ್ಲಿ ಕೆಪಿಎಂಇ ಪರವಾನಿಗೆ ಇಲ್ಲದೆ ನಿಯಮಗಳನ್ನ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ "ದೇರಳಕಟ್ಟೆ‌ ಡಯಾಗ್ನೋಸ್ಟಿಕ್ ಆಂಡ್ ಪಾಲಿಕ್ಲಿನಿಕ್"ಗೆ ಅಧಿಕಾರಿಗಳು ಬೀಗ ಮುದ್ರೆ ಜಡಿದಿದ್ದಾರೆ.

ದೇರಳಕಟ್ಟೆಯ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿದ್ದ "ದೇರಳಕಟ್ಟೆ ಡಯಾಗ್ನೋಸ್ಟಿಕ್ & ಪಾಲಿ ಕ್ಲಿನಿಕ್ ಗೆ ಶನಿವಾರ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳ ತಂಡವು ಪರಿಶೀಲನೆ ನಡೆಸಿದ್ದು, ಕೆಪಿಎಂಇ ಪರವಾನಿಗೆ, ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಪರವಾನಿಗೆ, ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ಅಗ್ರಿಮೆಂಟ್ ಇಲ್ಲದೆ ನಿಯಮಗಳನ್ನ ಉಲ್ಲಂಘಿಸಿ ಪಾಲಿಕ್ಲಿನಿಕ್ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದ್ದು ಅಧಿಕಾರಿಗಳು ಅನಧಿಕೃತ ಪಾಲಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.

ಮೂಲಗಳ ಪ್ರಕಾರ ದೇರಳಕಟ್ಟೆಯ ಈ ಪಾಲಿಕ್ಲಿನಿಕ್ ಕಳೆದ ಎರಡು ವರ್ಷಗಳಿಂದ ಕೆಪಿಎಂಇ ಲೈಸನ್ಸ್ ನವೀಕರಣಗೊಳಿಸದೇ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದು, ಇಲ್ಲಿ ಬರುವ ರೋಗಿಗಳಿಗೆ ಲ್ಯಾಬ್ ಸಿಬ್ಬಂದಿಯೇ ವೈದ್ಯರ ಚೀಟಿ ಇಲ್ಲದೆ ಚುಚ್ಚುಮದ್ದು ನೀಡುವುದು, ಅವರೇ ಔಷಧಿ ಬರೆದು ಕೊಡುತ್ತಿರುವ ಬಗ್ಗೆ ದೂರುಗಳಿದ್ದವು ಎನ್ನಲಾಗಿದೆ.
ಮಂಗಳೂರು ನಗರದ ಫಳ್ನೀರಿನ ಎರಡು ಕ್ಲಿನಿಕಲ್ ಲ್ಯಾಬ್ ಗಳನ್ನೂ ಆರೋಗ್ಯಾಧಿಕಾರಿಗಳು ಪರಿಶೀಲಿಸಿದ್ದು ನೋಟೀಸು ಜಾರಿ ಮಾಡಿದ್ದಾರೆ.

ಹಣ ಗಳಿಸುವ ಉದ್ದೇಶದಿಂದ‌ ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟ ಆಡುತ್ತಿರುವ ಪಾಲಿ ಕ್ಲಿನಿಕ್ ಗೆ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.

ದೇರಳಕಟ್ಟೆ ಡಯಾಗ್ನೋಸ್ಟಿಕ್ & ಪಾಲಿಕ್ಲಿನಿಕ್ ಗೆ ನಾಲ್ಕು ದಿವಸಗಳ ಹಿಂದಷ್ಟೆ ನೋಟೀಸ್ ಜಾರಿ ಮಾಡಿದ್ದಲ್ಲದೆ, ಕ್ಲಿನಿಕ್ ತೆರೆಯದಂತೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದೆವು. ಇಲಾಖೆಯ ನೋಟೀಸಿಗೂ ಕ್ಯಾರೇ ಎನ್ನದ ಪಾಲಿಕ್ಲಿನಿಕ್ ಬಾಗಿಲು ತೆರೆದು‌ ಕಾರ್ಯಾಚರಿಸುತ್ತಿದ್ದು ಶನಿವಾರ ನಮ್ಮ ಅಧಿಕಾರಿಗಳು ದಾಳಿ ನಡೆಸಿ ಕ್ಲಿನಿಕ್ ಗೆ ಬೀಗ ಮುದ್ರೆ ಜಡಿದಿದ್ದಾರೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಮೆಡಿಕಲ್ ಲ್ಯಾಬ್ ಮತ್ತು ಪಾಲಿಕ್ಲಿನಿಕ್ ಗಳು ಹೃದಯಾಘಾತ ಪ್ರಕರಣಗಳ ಬಗ್ಗೆ ಸಮರ್ಪಕವಾದ ಮಾಹಿತಿಗಳನ್ನ ಇಲಾಖೆಗೆ ನೀಡಬೇಕು. ಹೃದ್ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಬಾರದೆಂಬುದು ಒಂದು ಉದ್ದೇಶವಾದರೆ, ಜಿಲ್ಲೆಯಲ್ಲಿ ಕೆಪಿಎಮ್ ಇ ಕಾಯ್ದೆಯನ್ನ‌ ಸಮರ್ಪಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಮೆಡಿಕಲ್ ಲ್ಯಾಬ್ ಮತ್ತು ಪಾಲಿಕ್ಲಿನಿಕ್ ಗಳನ್ನ ಪರಿಶೀಲನೆ ನಡೆಸುತ್ತಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.

In a major crackdown, officials from the Dakshina Kannada District Health Department sealed Derlakatte Diagnostic & Polyclinic, located in the heart of Derlakatte, for operating without valid permissions and violating several healthcare regulations.