Mangalore Police, Sudheer Kumar Reddy: ಕೋಮು ಸಾಮರಸ್ಯಕ್ಕೆ ಧಕ್ಕೆ ಹಿನ್ನೆಲೆ ; ಮಂಗಳೂರು ಪೊಲೀಸರ ತಳಮಟ್ಟದಲ್ಲೂ ಸರ್ಜರಿ, ಒಂದೇ ಕಡೆ ಝಂಡಾ ಊರಿದ್ದ 56 ಸಿಬಂದಿಗೆ ವರ್ಗಾವರ್ಗಿ 

19-06-25 01:05 pm       Mangalore Correspondent   ಕರಾವಳಿ

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಝಂಡಾ ಊರಿದ್ದ ಪೊಲೀಸ್ ಸಿಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಕೋಮು ದ್ವೇಷ, ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಆರೋಪ ಕೇಳಿಬಂದಿತ್ತು.

ಮಂಗಳೂರು, ಜೂನ್ 19 : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಝಂಡಾ ಊರಿದ್ದ ಪೊಲೀಸ್ ಸಿಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಕೋಮು ದ್ವೇಷ, ಸಾಮರಸ್ಯಕ್ಕೆ ಧಕ್ಕೆ ಬಂದಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಆರೋಪ ಕೇಳಿಬಂದಿತ್ತು. ಕೆಲವು ಪೊಲೀಸ್ ಸಿಬಂದಿಯ ಕರ್ತವ್ಯದ ಬಗ್ಗೆಯೂ ಅನುಮಾನಗಳಿದ್ದ ಕಾರಣ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ದಿಢೀರ್ ಆಗಿ ಇಲಾಖೆಯಲ್ಲಿ ತಳಮಟ್ಟದಲ್ಲೂ ಸರ್ಜರಿ ಮಾಡಿದ್ದು ಒಂದೇ ಬಾರಿಗೆ 56 ಮಂದಿಯನ್ನು ವರ್ಗಾಯಿಸಿ ಆದೇಶ ಮಾಡಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂದರ್ಭದಲ್ಲಿ ಬಜ್ಪೆ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ರಶೀದ್ ಶೇಖ್ ಆರೋಪಿಗಳಿಗೆ ಸಹಕಾರ ನೀಡಿದ್ದಾರೆಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಇದೀಗ ವರ್ಗಾವಣೆಯಾದ ಪಟ್ಟಿಯಲ್ಲಿ ರಶೀದ್ ಅವರನ್ನು ಮಂಗಳೂರು ನಗರ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ಸಿಸಿಬಿ ತಂಡದಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡಿದ್ದ ಕೆಲವು ಸಿಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದೆ. ಈ ಕುರಿತು ಮಂಗಳೂರು ಕಮಿಷನರ್ ಮಾಡಿರುವ ಆದೇಶ ಪತ್ರದಲ್ಲಿ ಸಾರ್ವಜನಿಕ ಕೋರಿಕೆ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಈ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.

ಬಜ್ಪೆ, ಮೂಡುಬಿದ್ರೆ, ಕೊಣಾಜೆ, ಉಳ್ಳಾಲ, ಉರ್ವಾ, ಸಿಸಿಆರ್ ಬಿ, ಸಿಸಿಬಿ, ಸಂಚಾರಿ ಠಾಣೆ, ಸೆನ್ ಠಾಣೆಗಳಲ್ಲಿದ್ದ ಹತ್ತು ಜನ ಎಎಸ್ಐ, ಹೆಡ್ ಕಾನ್ಸ್ ಟೇಬಲ್ ಗಳನ್ನು ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಕೆಲವು ಸಿಬಂದಿ ವಿವಿಧ ಕಾರಣಕ್ಕೆ ತಮ್ಮ ವರ್ಗಾವಣೆ ಕೇಳಿಕೊಂಡಿದ್ದವರೂ ಇದ್ದಾರೆ. ಇತ್ತೀಚೆಗೆ ಕೋಮು ದ್ವೇಷದ ಕೊಲೆಯಾದ ಸಂದರ್ಭದಲ್ಲಿ ಕಾಂಗ್ರೆಸಿನ ಅಲ್ಪಸಂಖ್ಯಾತ ಘಟಕದ ಮುಖಂಡರು, ಪೊಲೀಸ್ ಠಾಣೆಗಳಲ್ಲಿ ಕೆಲವು ಸಿಬಂದಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಇದ್ದಾರೆ, ಅವರನ್ನು ಎತ್ತಂಗಡಿ ಮಾಡಬೇಕು. ಅಂಥವರು ಮಾಫಿಯಾಗಳ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆಗ್ರಹ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಒತ್ತಾಯಿಸಿದ್ದರಿಂದ ಸಚಿವರು, ಪೊಲೀಸ್ ಕಮಿಷನರ್ ಅವರಿಗೆ ಸೂಚನೆ ನೀಡಿದ್ದರು. ಪೊಲೀಸರ ವರ್ಗಾವಣೆ ಪ್ರಕ್ರಿಯೆ ಇನ್ನೂ ಮುಂದುವರಿಯುವ ಸಾಧ್ಯತೆಯಿದ್ದು, ಎಲ್ಲ ಠಾಣೆಗಳಿಂದಲೂ ಪೊಲೀಸ್ ಕಮಿಷನರ್ ಈ ಬಗ್ಗೆ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

In a significant administrative move aimed at restoring public trust and communal harmony, Mangaluru Police Commissioner Sudheer Kumar Reddy IPS has ordered the transfer of 56 police personnel who had been stationed in the same locations for several years. The decision comes in the wake of rising concerns about communal disharmony and allegations of partiality within the police force.