ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು 43 ಸಾವಿರ ಲಂಚ ; ಸರ್ವೆಯರ್, ಬ್ರೋಕರ್ ಲೋಕಾಯುಕ್ತ ಬಲೆಗೆ 

18-06-25 10:46 pm       Mangalore Correspondent   ಕರಾವಳಿ

ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಕಂದಾಯ ಇಲಾಖೆಯ ಸರ್ವೆಯರ್ ಮತ್ತು ಮಧ್ಯವರ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ‌

ಮಂಗಳೂರು, ಜೂನ್ 18 : ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಕಂದಾಯ ಇಲಾಖೆಯ ಸರ್ವೆಯರ್ ಮತ್ತು ಮಧ್ಯವರ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ‌

ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025ರಂದು ಮಂಗಳೂರು ಯು.ಪಿ.ಓ.ಆರ್ ಕಚೇರಿಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಕಡತದ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಸರ್ವೆಯರ್ ನಂದೀಶ್ ಅವರು ಏಪ್ರಿಲ್ 2025 ರಂದು ಸರ್ವೆ ನಡೆಸಿ ನಂತರ ರೂ. 6500/- ಲಂಚದ ಹಣವನ್ನ ಸ್ವೀಕರಿಸಿದ್ದರು. ಅಲ್ಲದೆ, ರೂ. 20,000/- ಲಂಚದ ಹಣವನ್ನು ಬ್ರೋಕರ್ ಬಿಜೈ ನಿವಾಸಿ ದಿವಾಕರ್ ಮೂಲಕ ಪಡೆದಿದ್ದರು.‌ 

ಆನಂತರ ಸರ್ವೆಯರ್ ನಂದೀಶ್ ಅವರು ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ. 18,000/- ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಸರ್ವೆಯರ್ ನಂದೀಶ್ ಅವರು ಜೂನ್ ತಿಂಗಳಲ್ಲಿ ಮತ್ತೆ ರೂ.15,000 ಲಂಚದ ಹಣವನ್ನು ಮಧ್ಯವರ್ತಿ ಮೂಲಕ ಪಡೆದಿದ್ದರು. ವ್ಯಕ್ತಿಯಿಂದ ಒಟ್ಟು 41,500 ರೂ. ಲಂಚ ಪಡೆದಿದ್ದು, ಜೂನ್ 18ರಂದು ಹೆಚ್ಚುವರಿಯಾಗಿ ರೂ. 2000 ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಎಂಬವರನ್ನು ಬಂಧಿಸಲಾಗಿದೆ. 

ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಟ್ರಾಪ್ ಕಾರ್ಯಾಚರಣೆ ಕೈಗೊಂಡಿದ್ದರು.‌

In a major crackdown on corruption, Lokayukta officials arrested a surveyor from the Revenue Department and a broker for allegedly accepting a bribe of ₹43,000 in connection with preparing a single site map and property card for land in Mangaluru.