Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ, ದ್ವೇಷ ಬಿತ್ತುವ ಮತ ಗ್ರಂಥಗಳನ್ನು ನಿಷೇಧಿಸುವ ಧೈರ್ಯ ಸರಕಾರಕ್ಕಿದೆಯಾ? ನಾಸಿರ್ ಹುಸೇನ್ ವರದಿ ಎಷ್ಟು ಸಮಂಜಸ ಇರಬಹುದು ; ಸಿಟಿ ರವಿ ಪ್ರಶ್ನೆ

07-06-25 08:48 pm       Mangalore Correspondent   ಕರಾವಳಿ

ಕರಾವಳಿಯಲ್ಲಿ ರೋಗದ ಮೂಲಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ. ರೋಗದ ಮೂಲ ಮತೀಯ ದ್ವೇಷ ಬಿತ್ತುವ ಮತ ಗ್ರಂಥಗಳಲ್ಲಿದೆ. ದ್ವೇಷ ಬಿತ್ತುವ ಗ್ರಂಥಗಳನ್ನು ನಿಷೇಧಿಸಿದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಮತೀಯ ದ್ವೇಷ ಬಿತ್ತುವ ಅಂಶಗಳನ್ನು ನಿಷೇಧಿಸುವ ಧೈರ್ಯ ಸರಕಾರಗಳಿಗೆ ಇದೆಯಾ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಮಂಗಳೂರು, ಜೂನ್ 7 : ಕರಾವಳಿಯಲ್ಲಿ ರೋಗದ ಮೂಲಕ್ಕೆ ಮದ್ದು ಕೊಡದ ಹೊರತು ಸಂಘರ್ಷ ನಿಲ್ಲಲ್ಲ. ರೋಗದ ಮೂಲ ಮತೀಯ ದ್ವೇಷ ಬಿತ್ತುವ ಮತ ಗ್ರಂಥಗಳಲ್ಲಿದೆ. ದ್ವೇಷ ಬಿತ್ತುವ ಗ್ರಂಥಗಳನ್ನು ನಿಷೇಧಿಸಿದಲ್ಲಿ ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ಮತೀಯ ದ್ವೇಷ ಬಿತ್ತುವ ಅಂಶಗಳನ್ನು ನಿಷೇಧಿಸುವ ಧೈರ್ಯ ಸರಕಾರಗಳಿಗೆ ಇದೆಯಾ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರಾವಳಿಯಲ್ಲಿ ಶಾಂತಿ ನೆಲೆಸಲೇಬೇಕು ಎನ್ನುವುದು ನಮ್ಮ ಆಗ್ರಹವೂ ಇದೆ. ಆದರೆ, ಸಂಘರ್ಷಕ್ಕೆ ಕಾರಣ ಏನು ಎನ್ನುವುದನ್ನು ಆಳುವವರು ಅರ್ಥ ಮಾಡ್ಕೊಬೇಕು. ಗೋಹತ್ಯೆ, ಗೋಕಳ್ಳತನ, ಅಕ್ರಮ ಗೋಸಾಗಾಟ, ಲವ್ ಜಿಹಾದ್, ಮತಾಂತರಗಳು ಸಂಘರ್ಷದ ಮೂಲ. ಇವುಗಳಿಗೆ ಗಾಂಜಾ, ಅಕ್ರಮ ದಂಧೆ, ಮರಳು ದಂಧೆಗಳು ಹಣಕಾಸು ಪೂರೈಸುತ್ತದೆ. ಗೋಹತ್ಯೆ, ಗೋಕಳ್ಳತನ ತಡೆಯುವುದು ಪೊಲೀಸ್ ಇಲಾಖೆಗೆ ಸಾಧ್ಯವಾಗದ ಕೆಲಸ ಅಲ್ಲ. ಲವ್ ಜಿಹಾದ್ ಮೋಸದ ಜಾಲವಾಗಿದ್ದು, ಸಂಘಟಿತ ರೂಪದಲ್ಲಿ ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕಿದರೆ, ಸಂಘರ್ಷ ತನ್ನಿಂತಾನೇ ನಿಲ್ಲುತ್ತದೆ ಎಂದು ಹೇಳಿದರು.

ಎಸ್ಪಿ, ಕಮಿಷನರ್ ಅವರು ತಮ್ಮ ಇಲಾಖೆಯವರು ಅಕ್ರಮ ದಂಧೆಯ ಭಾಗವಾಗಿರುವುದನ್ನು ತಪ್ಪಿಸಬೇಕು. ಇದೇ ವೇಳೆ, ಗೋಕಳ್ಳರು ಮತ್ತು ಗೋಹತ್ಯೆ ತಡೆಯುವವರನ್ನು ಪೊಲೀಸರು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದನ್ನು ಮಾಡಬಾರದು. ರಾತ್ರಿ ವೇಳೆ, ಸುಳ್ಯದ ಹಿರಿಯ ಸ್ವಯಂಸೇವಕರಾದ ನ. ಸೀತಾರಾಮ್, 80 ವರ್ಷದ ಪೂವಪ್ಪರ ಮನೆಗೆ ಹೋಗಿ ಫೋಟೋ ತೆಗೆಯುವುದು ಸಮಾಜಕ್ಕೇನು ಸಂದೇಶ ಕೊಡುತ್ತದೆ ಎಂಬುದನ್ನು ಯೋಚಿಸಬೇಕು. ಎಸ್ಪಿಯವರು ಬಜರಂಗದಳ ಸಂಘಟನೆಯನ್ನು ಕಮ್ಯುನಲ್ ಅಂತ ಹೇಳಿದ್ದಾರೆ, ಬೇಕಾದರೆ ಹಿಂದು ಸಂಘಟನೆ, ರಾಷ್ಟ್ರಭಕ್ತ ಸಂಘಟನೆ ಅಂತ ಹೇಳಲಿ, ನಾವು ಒಪ್ಪಿಕೊಳ್ಳುತ್ತೇವೆ. ಬಜರಂಗದಳ ಅನ್ಯಮತ ದ್ವೇಷಿಗಳಾಗಿ ಎಂದು ಯಾವತ್ತೂ ಹೇಳುವುದಿಲ್ಲ. ರಾಷ್ಟ್ರಭಕ್ತಿಯೇ ಪ್ರಥಮ ಆದ್ಯತೆ ಎನ್ನುವುದನ್ನು ಹೇಳುತ್ತದೆ.

ಅನ್ಯಮತದಲ್ಲಿ ಪ್ರವಾದಿ ಅಂದರೂ ಕೊಲ್ಲುತ್ತಾರೆ, ಬೇರೆ ದೇವರ ಹೆಸರೆತ್ತಿದರೆ ಸಹಿಸುವುದಿಲ್ಲ ಎನ್ನುವುದೇ ಕಮ್ಯುನಲ್ ಅಂತ ಆಗುತ್ತದೆ. ಇದಕ್ಕೆಲ್ಲ ಕಾರಣ ಕೋಮುವಾದ ಬಿತ್ತುವ, ಅನ್ಯರನ್ನು ಕಾಫಿರರು ಎಂದು ಹೇಳುವ ಧರ್ಮ ಗ್ರಂಥಗಳೇ. ಇದರಿಂದಲೇ ಭಯೋತ್ಪಾದನೆ ಜನ್ಮ ತಾಳುತ್ತದೆ. ರಾಷ್ಟ್ರ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಲಿ ಅಂತಲೇ ನಾನು ಈ ವಿಚಾರ ಹೇಳುತ್ತಿದ್ದೇನೆ. ಕಾಂಗ್ರೆಸ್ ಇಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುವುದು ಬೇಡ. ಇಂತಹ ದ್ವೇಷ ಬಿತ್ತುವ ಗ್ರಂಥಗಳು, ಅವುಗಳ ಸಂದೇಶಗಳನ್ನು ನಿಷೇಧಿಸುವುದನ್ನು ಮಾಡಲಿ ಎಂದು ಸಿಟಿ ರವಿ ಹೇಳಿದರು.

ಪೊಲೀಸ್ ಜೈಲಿಗೆ, ದನಕಳ್ಳನಿಗೆ ಹತ್ತು ಲಕ್ಷ

ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಎನ್ನುವ ಕಾಂಗ್ರೆಸಿಗರು, ಆತನ ಅಜ್ಜ ಭೈರ ಶೆಟ್ಟಿ ಇಂದಿರಾ ಗಾಂಧಿ ಕೊಲ್ಲಲ್ಪಟ್ಟಾಗ ಅಂತಿಮ ದರ್ಶನಕ್ಕೆ ದೆಹಲಿಗೆ ಹೋಗಿದ್ದ ಅಪ್ಪಟ ಕಾಂಗ್ರೆಸಿಗ. ಮಾವ ಮೋಹನ್ ಶೆಟ್ಟಿ ರಮಾನಾಥ ರೈಯವರ ಪಕ್ಕಾ ಶಿಷ್ಯ. ಐದಾರು ದಶಕಗಳಿಂದ ಆತನ ಕುಟುಂಬ ಕಾಂಗ್ರೆಸಿನಲ್ಲಿತ್ತು ಎಂಬುದನ್ನೂ ಮರೆತು ವರ್ತನೆ ತೋರಿದ್ದಾರೆ. ರಹಿಮಾನ್ ಕೊಲೆಯಾದಾಗ ಇವರು ಎಚ್ಚತ್ತಿದ್ದಾರೆ. ದನಕಳ್ಳ ಕಬೀರ್ ಎಎನ್ಎಫ್ ನಲ್ಲಿದ್ದ ಪೊಲೀಸ್ ಮೇಲೆ ವಾಹನ ನುಗ್ಗಿಸಿದ್ದಕ್ಕೆ ಪೇದೆ ನವೀನ್ ನಾಯ್ಕ್ ಗುಂಡು ಹೊಡೆದಿದ್ದರು. ಆದರೆ ಕಾಂಗ್ರೆಸ್ ಸರಕಾರ ಗುಂಡು ಹೊಡೆದ ಪೊಲೀಸನ್ನು ಜೈಲಿಗೆ ಹಾಕಿ, ರೌಡಿ ಕಬೀರ್ ಕುಟುಂಬಕ್ಕೆ ಹತ್ತು ಲಕ್ಷ ಬಹುಮಾನ ಕೊಟ್ಟಿತ್ತು. ಇದು ಕಾಂಗ್ರೆಸ್ ನೀತಿ ಎಂದು ಹೇಳಿದರು.

ನಾಸಿರ್ ಹುಸೇನ್ ವರದಿ ಎಷ್ಟು ಸಮಂಜಸ

ಅಬ್ದುಲ್ ರಹಿಮಾನ್ ಕೊಲೆ ಯಾಕಾಗಿದೆ ಎನ್ನುವುದನ್ನು ಪೊಲೀಸರು ಹೇಳಬೇಕು. ಆದರೆ ವ್ಯಕ್ತಿಗತ ಕಾರಣ ಇದೆ ಎಂಬ ಮಾಹಿತಿಗಳು ಬರುತ್ತಿವೆ. ರಹಿಮಾನ್ ಕುಟುಂಬಕ್ಕೂ ಇದರ ಮಾಹಿತಿ ಇದೆಯಂತೆ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪೊಲೀಸರೇ ಹೇಳಬೇಕು ಎಂದ ಸಿಟಿ ರವಿ, ನಾಸಿರ್ ಹುಸೇನ್ ಗೆದ್ದಾಗ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಸಾಬೀತಾಗಿದ್ದು ಈ ಬಗ್ಗೆ ಎಫ್ಐಆರ್ ಆಗಿದೆ. ಈ ವಿಚಾರದಲ್ಲಿ ತನಿಖೆಗೂ ನಾಸಿರ್ ಹುಸೇನ್ ಸಹಕಾರ ನೀಡಿಲ್ಲ. ಇಂಥ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷದ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿಸಿದೆ. ಇಂಥ ವ್ಯಕ್ತಿಯ ವರದಿ ಎಷ್ಟು ಸಮಂಜಸ ಇರಬಹುದು ಎನ್ನುವ ಸಂಶಯ ಇದೆ ಎಂದು ಟೀಕಿಸಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಜಗದೀಶ ಶೇಣವ, ಸಂತೋಷ್ ಮತ್ತಿತರರು ಇದ್ದರು.

Without Treating the Root Cause, Violence Won’t Stop, CT Ravi Demands Ban on Hate-Filled Religious Texts in Mangalore