Mangalore Fire Accident, Derlakatte: ದೇರಳಕಟ್ಟೆ ; ಮನೆಯಲ್ಲಿ ಅಗ್ನಿ ಆಕಸ್ಮಿಕ, ಮನೆಮಂದಿ ಮೆಹಂದಿಗೆ ತೆರಳಿದ್ದಾಗ ಹೊತ್ತಿ ಉರಿದ ಹಂಚಿನ ಮನೆ 

07-06-25 12:08 pm       Mangalore Correspondent   ಕರಾವಳಿ

ಮನೆ ಮಂದಿ ಸಂಬಂಧಿಕರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ಉಂಟಾಗಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ದೇರಳಕಟ್ಟೆ ಸಮೀಪದ ವೈದ್ಯನಾಥ ನಗರದಲ್ಲಿ  ಶುಕ್ರವಾರ ರಾತ್ರಿ ನಡೆದಿದೆ.

ಉಳ್ಳಾಲ, ಜೂ.7 : ಮನೆ ಮಂದಿ ಸಂಬಂಧಿಕರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಬೆಂಕಿ ಅವಘಡ ಉಂಟಾಗಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ದೇರಳಕಟ್ಟೆ ಸಮೀಪದ ವೈದ್ಯನಾಥ ನಗರದಲ್ಲಿ  ಶುಕ್ರವಾರ ರಾತ್ರಿ ನಡೆದಿದೆ.

ವೈದ್ಯನಾಥ ನಗರದ ಸುಶೀಲ ಮಡಿವಾಳ ಎಂಬವರ ಮನೆಯಲ್ಲಿ ರಾತ್ರಿ ಸುಮಾರು 10.30 ರ ವೇಳೆ ದುರ್ಘಟನೆ ಸಂಭವಿಸಿದೆ.‌ ಸುಶೀಲಾ‌ ಅವರ ಸಹೋದರನ ಮಗಳ ಮದುವೆಯ ಪ್ರಯುಕ್ತ ಮನೆ ಮಂದಿ ಮೆಹಂದಿ ಕಾರ್ಯಕ್ರಮಕ್ಕೆಂದು ತೆರಳಿದ್ದರು.  ರಾತ್ರಿಯ ವೇಳೆ ಮನೆಯ ಹಂಚಿನ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿದ್ದನ್ನ ನೆರೆ ಮನೆಯ ವ್ಯಕ್ತಿಯೊಬ್ಬರು ನೋಡಿ ಸುಶೀಲ ಅವರಿಗೆ ಕರೆ ಮಾಡಿ ಹೇಳಿದ್ದಾರೆ. 

ಮೆಹೆಂದಿ ಕಾರ್ಯಕ್ರಮದಿಂದ ಸುಶೀಲ ಅವರ ಅಳಿಯ ಓಡಿ ಬಂದು ನೋಡಿದಾಗ ಮನೆಯ ಒಂದು ಕೊಠಡಿಯ ಮೇಲ್ಛಾವಣಿಯಲ್ಲಿ ಬೆಂಕಿ ಉರಿಯುತ್ತಿತ್ತು. ಕೂಡಲೇ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಬಂದ್ ಮಾಡಲಾಗಿತ್ತು. ಸ್ಥಳೀಯರು ಸೇರಿ ಮನೆಯ ಬೆಂಕಿಯನ್ನು ಆರಿಸಲು ಪ್ರಯತ್ನ ಪಟ್ಟರೂ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಉರಿದು ಹೋಗಿದೆ.

ಘಟನೆ ಸಂದರ್ಭದಲ್ಲಿ ಯುವಕನೋರ್ವ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ಎಸೆದಿದ್ದು ದೊಡ್ಡ ಮಟ್ಟದ‌‌ ಅನಾಹುತ ತಪ್ಪಿದೆ. ಅಗ್ನಿ ಅವಘಡದಿಂದ ಮನೆಯ ಸೊತ್ತುಗಳು ಉರಿದು ಭಸ್ಮಗೊಂಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ‌ ದಳವು ರಾತ್ರಿಯೇ ದೌಡಾಯಿಸಿದ್ದು ಬೆಂಕಿಯನ್ನು ನಂದಿಸಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.‌

Mangalore House Gutted in Fire Accident at Derlakatte While Family Attends Mehendi Ceremony.